ಕಳೆದ ಸಾಲಿನ ಆಯವ್ಯಯದ ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡಲು ಒತ್ತಾಯ...
ಸಭೆಗೆ ಗೈರಾದ ಪಟ್ಟಣ ಪಂಚಾಯಿತಿ ಇಂಜಿನಿಯರ್ ಮೇಲೆ ದೂರುಗಳ ಸುರಿಮಳೆ
ಪಟ್ಟಣ ಪಂಚಾಯಿತಿಯ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ 200 ಲಕ್ಷ ರೂ ಮೀಸಲು.
ಆಯವ್ಯಯದ ಪ್ರಮುಖ ಅಂಕಿ ಅಂಶ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಣೆ ನೀಡಿದ ಅಧ್ಯಕ್ಷೆ ಶ್ರೀಮತಿ ರತ್ನಮ್ಮ
------------------------------
✍️ ನರೇಂದ್ರಬಾಬು-ಹುಳಿಯಾರು
9448760070
-------------------------------
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು 33,08,62,000 ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ 41,00,75,729 ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 40,48,515 ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು.ಮಂಗಳವಾರ ಬೆಳಗ್ಗೆ 11 ಗಂಟೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ 2025-26 ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ₹40,48,515 ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಯಿತಾದರೂ ಪ್ರಾರಂಭದಲ್ಲಿ ಸಭೆಗೆ ಗೈರಾಗಿದ್ದ ಇಂಜಿನಿಯರ್ ಬಗ್ಗೆ ಎಲ್ಲಾ ಸದಸ್ಯರುಗಳು ವಕ್ಕೋರಿಲಿನಿಂದ ಸಮಸ್ಯೆಗಳ ಸುರಿಮಳೆಗೈದರು. ಕಳೆದ ಸಾಲಿನ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣಕ್ಕೆ ಕ್ರಿಯಾಯೋಜನೆ ಮಾಡದೆ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿದರು. ಯಾರ ಫೋನಿಗೂ ಸಿಗದೇ, ನಿಯಮಿತವಾಗಿ ಕಚೇರಿಗೆ ಆಗಮಿಸದೆ, ಯಾವ ಸದಸ್ಯರಿಗೂ ಸ್ಪಂದಿಸದಿರುವ ಇಂಜಿನಿಯರ್ ಈ ಪಂಚಾಯಿತಿಗೆ ಅಗತ್ಯ ಇಲ್ಲ ಪಿಡಿಗೆ ಫೋನ್ ಮಾಡಿ ಅವರನ್ನು ಕೂಡಲೇ ಬದಲಾಯಿಸಿ ಎಂದು ದಯಾನಂದ್, ದಸ್ತಗಿರಿ ಸಾಬ್, ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.
ಬಜೆಟ್ ಮಂಡನೆ ಹಾಗೂ ಅನುಮೋದನೆಗಾಗಿ ಇಂದು ಸಭೆ ಕರೆಯಲಾಗಿತ್ತಾದರೂ ಆರಂಭದಲ್ಲಿಯೇ ಇದು ಬಜೆಟ್ ಸಭೆಯೊ ಅಥವಾ ಕುಂದು ಕೊರತೆಯ ಸಭೆಯೋ ಎನ್ನುವಂತೆ ಸದಸ್ಯರುಗಳು ಮುಖ್ಯಾಧಿಕಾರಿ ನಾಗಭೂಷಣ್ ಅವರ ಬಳಿ ಪಟ್ಟಣದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೆರೆದರು.
ಇದರ ನಡುವೆಯೇ ಆಸ್ತಿತೆರಿಗೆ ದರವನ್ನು ಶೇಕಡ 5% ಹೆಚ್ಚಿಸುವ ಮೂಲಕ ಪರಿಷ್ಕರಿಸಲು ಒಪ್ಪಲಾಯಿತು.ನೀರಿನ ಕರ ಹೆಚ್ಚಿಸುವುದರ ಕುರಿತು ಕಂದಾಯಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ, ಇದುವರೆಗೂ ಪಟ್ಟಣದಲ್ಲಿ ನೀರು ಕೊಡಲು ಪಟ್ಟಣ ಪಂಚಾಯಿತಿಯಿಂದ ಸಾಧ್ಯವಾಗಿಲ್ಲ, ಹಾಗಿದ್ದೂ ಪುನಃ ನೀರಿನ ಕರ ಹೆಚ್ಚಿಸಿದಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನುವ ಮಾತು ಕೇಳಿ ಬಂತು.ಕಡೆಗೆ ಹಾಲಿ ಇರುವ 80 ರೂಪಾಯಿಗಳ ಬದಲಿಗೆ 90 ರೂಪಾಯಿಗೆ ಹೆಚ್ಚಳ ಮಾಡುವಂತೆ ಸೂಚಿಸಲಾಯಿತು.
ಅಧ್ಯಕ್ಷೆ ರತ್ನಮ್ಮ 2025-26 ನೇ ಸಾಲಿನ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜನೆಯ ಪಟ್ಟಿಯನ್ನು ಓದುವುದರ ಮೂಲಕ ಬಜೆಟ್ ಮಂಡಿಸಿದರು.
ಬಜೆಟ್ ಪ್ರಮುಖ ಅಂಶಗಳು :
-------------------------
ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 120 ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿಂದ 30 ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 50 ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ- ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ 1.05 ಕೋಟಿ ರೂಪಾಯಿ, ವೇತನ ಮತ್ತು ವಿದ್ಯುತ್ ಅನುದಾನ ಮೂಲಗಳಿಂದ 548 ಲಕ್ಷ ,ಎಸ್ ಎಫ್ ಸಿ ವಿಶೇಷ ಮತ್ತು ಇತರೆ ಮೂಲಗಳಿಂದ 69 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
ಯೋಜನೆಗಳಿಗೆ ಖರ್ಚು-ವೆಚ್ಚ :
---------------------------
ಕೊಳವೆ ಬಾವಿ ಕೊರೆಸುವುದು, ಪೈಪ್ಲೈನ್ ನಿರ್ಮಾಣ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು 340 ಲಕ್ಷ ರೂಪಾಯಿ ವೆಚ್ಚ ತಗಲಬಹುದೆಂದು ನಿರೀಕ್ಷಿಸಲಾಗಿದೆ.
ಉದ್ಯಾನವನ ನಿರ್ಮಿಸಲು 18 ಲಕ್ಷ ರೂಪಾಯಿ, ರುದ್ರಭೂಮಿ ಮತ್ತು ಖಬರಸ್ಥಾನಗಳ ಮೂಲಭೂತ ಅಭಿವೃದ್ಧಿಗಾಗಿ 80 ಲಕ್ಷ ರೂ, ಘನತ್ಯಜ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 194 ಲಕ್ಷ, ದೀನ ದಯಾಳ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಯುವಕ ಯುವತಿಯರಿಗೆ ತರಬೇತಿ ಆಯೋಜಿಸಲು ಹಾಗೂ ಉದ್ಯೋಗ ಮೇಳ ನಡೆಸಲು 50 ಲಕ್ಷ ರೂಪಾಯಿ,ಹುಳಿಯಾರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ವೇತನಕ್ಕೆ 1 ಕೋಟಿ 65 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
ಪಟ್ಟಣ ಪಂಚಾಯಿತಿ ಆಡಳಿತ ವೆಚ್ಚ ಮತ್ತು ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನ ಖರೀದಿ ಇನ್ನಿತರ ವೆಚ್ಚಗಳಿಗಾಗಿ 85.04 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ಹೊಸ ಕಚೇರಿ ಕಟ್ಟಡ ನಿರ್ಮಾಣ ಮಾಡಲು 200ಲಕ್ಷ ರೂ ಮೀಸಲಿಡಲಾಗಿದೆ.
ಹುಳಿಯಾರು ಪಟ್ಟಣ ಪಂಚಾಯಿತಿಯ ನಾಗರೀಕರಿಗೆ ದಿನನಿತ್ಯದ ಅತ್ಯವಶ್ಯಕವಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ ರಸ್ತೆ ಮತ್ತು ಚರಂಡಿ ಬೀದಿ ದೀಪ, ಸ್ವಚ್ಛತೆ ನಿರ್ವಹಣೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
2025-26 ನೇ ಸಾಲಿನ ಪಟ್ಟಣ ಪಂಚಾಯಿತಿಯ ಆಯವ್ಯಯದ ಘೋಷ್ವಾರೆ ಹೀಗಿದೆ.
ಪ್ರಾರಂಭಿಕ ಶಿಲ್ಕು ರೂ 8,32,62,244
ನೀರಿಕ್ಷಿತ ಆದಾಯ. ರೂ.33,08,62,000
ನಿರೀಕ್ಷಿತ ಖರ್ಚು ರೂ.41,00,75,729
ಆಖೈರು ಶಿಲ್ಕು ರೂ. 40,48,515
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಾವ್ಯ ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್, ಸದಸ್ಯರುಗಳಾದ ಹೇಮಂತ ಕುಮಾರ್, ಬೀಬೀ ಫಾತಿಮಾ, ಶೃತಿ ಸನತ್ ,ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಪ್ರೀತಿ ರಾಘವೇಂದ್ರ, ರಾಜು ಬಡಗಿ, ದಯಾನಂದ್, ಮಂಜಾ ನಾಯ್ಕ, ದಸ್ತಗಿರಿ ಸಾಬ್, ಅಬೂಬಕ್ಕರ್ ಸಿದ್ದಿಕ್, ಮಹಮ್ಮದ್ ಜುಬೇರ್, ನಾಮಿನಿ ಸದಸ್ಯರಾದ ವೆಂಕಟೇಶ್ ಹಾಗೂ ಸೈಯದ್ ನೂರ್ ಫಕ್ರುದ್ದೀನ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗಭೂಷಣ್, ಕಂದಾಯಾಧಿಕಾರಿ ಪ್ರದೀಪ್ ಸೇರಿದಂತೆ ಸಿಬ್ಬಂದಿಗಳಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ