ಬೋರನಕಣಿವೆ ಸಾಯಿಧಾಮದಲ್ಲಿ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಉಪಲೋಕಾಯುಕ್ತ ಬಿ. ವೀರಪ್ಪ ಭಾಗಿ ಹುಳಿಯಾರು : ಸಮೀಪದ ಬೋರನಕಣಿವೆಯ ಸಾಯಿಧಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ಹಾಗೂ ಸೇವಾ ಚೇತನ ವತಿಯಿಂದ ಭಾನುವಾರ ' ನರ್ಮದೋದ್ಭವ ಕಣಿವೆ ಶಂಕರನ' ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ಸಡಗರದಿಂದ ನೆರವೇರಿತು. ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಪಾಲ್ಗೊಂಡು ಶತ ನದಿಗಳ ಆವರಣ ಪೂಜೆಯನ್ನು ನೆರವೇರಿಸಿದರು. ಬಳಿಕ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇವಸ್ಥಾನಗಳ ಸ್ಥಾಪನೆಯಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ. ಶಿವನು ನಾಡಿನ ಜನತೆಗೆ ಉತ್ತಮ ಆರೋಗ್ಯ, ಸುಬುದ್ಧಿ ಹಾಗೂ ಐಶ್ವರ್ಯವನ್ನು ಕರುಣಿಸಲಿ" ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಣಿವೆ ಶಂಕರನ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡು ಪುನೀತರಾದರು.