ದಾಖಲೆ ಬರೆದ ಹುಳಿಯಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೇವಲ ಒಂದೂಕಾಲು ಗಂಟೆಯಲ್ಲಿ 60 ಅಜೆಂಡಾಗಳಿಗೆ ಒಪ್ಪಿಗೆ! ------------------ ಹುಳಿಯಾರು : ಅತಿ ಹೆಚ್ಚಿನ ವಿಷಯಗಳಿದ್ದರೂ ಯಾವುದೇ ಗದ್ದಲ, ಗೊಂದಲವಿಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದ ಹುಳಿಯಾರು ಪಟ್ಟಣ ಪಂಚಾಯಿತಿಯ ಇಂದಿನ ಸಾಮಾನ್ಯ ಸಭೆಯು ಹೊಸ ದಾಖಲೆ ಬರೆದಿದೆ. ನೂತನ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 60 ಪ್ರಮುಖ ವಿಷಯಗಳನ್ನು ಕೇವಲ ಒಂದೂಕಾಲು ಗಂಟೆಯೊಳಗೆ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಾಮಾನ್ಯವಾಗಿ ಹುಳಿಯಾರು ಪಂಚಾಯಿತಿ ಸಭೆ ಎಂದರೆ ಇಡೀ ದಿನ ಗದ್ದಲ-ಕೋಲಾಹಲಗಳಿಂದ ಕೂಡಿರುತ್ತಿತ್ತು. ಆದರೆ ಇಂದು ಎಲ್ಲಾ ಕೌನ್ಸಿಲರ್ಗಳ ಸಹಕಾರದೊಂದಿಗೆ ಅಭಿವೃದ್ಧಿ ಪರ ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವ ಮೂಲಕ ಸಭೆ ವಿಶೇಷ ಗಮನ ಸೆಳೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಆಯ್ಕೆ : ಸಭೆಯ ಆರಂಭದಲ್ಲಿ ಸರ್ಕಾರಿ ಸುತ್ತೋಲೆಗಳನ್ನು ಮಂಡಿಸಲಾಯಿತು. ಇತ್ತೀಚೆಗೆ ಅಕಾಲಿಕ ನಿಧನರಾದ ಸ್ಥಾಯಿ ಸಮಿತಿ ಅಧ್ಯಕ್ಷ ಒಳಗೆ ಚಂದ್ರಶೇಖರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕೌನ್ಸಿಲರ್ ಎಸ್.ಆರ್.ಎಸ್ ದಯಾನಂದ್ ಅವರನ್ನು ಸದಸ್ಯರನ್ನಾಗಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಅಬೂಬಕ್ಕರ್ ಸಿದ್ದೀಕ್ ಅವರನ್ನು ಸರ್ವಾನುಮ...