ವಿಷಯಕ್ಕೆ ಹೋಗಿ

೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ

ಸರ್ಕಾರದ ಶೌಚಾಲಯದ ಆಂದೋಲನ ಈ ಗ್ರಾಮಕ್ಕೆ ತಲುಪಿಲ್ಲ.

೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ

ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು:ಬಯಲು ಬಹಿರ್ದೆಸೆ ಮುಕ್ತ ಆರೋಗ್ಯವಂತ ಕರ್ನಾಟಕ ಮಾಡಲು ಸರ್ಕಾರ ಶೌಚಾಲಯದ ಆಂದೋಲನವನ್ನೇ ಹುಟ್ಟು ಹಾಕಿದರೂ ಕೂಡ ಇದರ ಅರಿವೇ ಇಲ್ಲದಂತೆ ಬಯಲಿನಲ್ಲಿಯೇ ಬಹಿರ್ದೆಸೆಗೆ ಗುವ ಗ್ರಾಮ ಇಂದಿಗೂ ಇರುವುದು ಯೋಜನೆಯ ಸಫಲತೆಯನ್ನು ಪ್ರಶ್ನಿಸುವಂತಾಗಿದೆ.
ಶೌಚಾಲಯವಿಲ್ಲದ ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದ ನೋಟ.
        ಗ್ರಾಮೀಣ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಶೌಚಾಲಯ ಹೊಂದಿ ಸಂಪೂರ್ಣ ಬಯಲು ಮುಕ್ತ ಕರ್ನಾಟಕ ಎನ್ನುವ ಹೊತ್ತಿನಲ್ಲೇ,ಸರ್ಕಾರದ ನೈರ್ಮಲ್ಯೀಕರಣ ಯೋಜನೆಯ ಫಲ ಇವರಿಗೆ ದೊರೆಯದ ಕಾರಣ ಶೌಚಾಲಯ ಹೊಂದಿರದ ಈ ಗ್ರಾಮ ಇದೀಗ ಬೆಳಕಿಗೆ ಬಂದಿದೆ.

         ಹೌದು, ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದಲ್ಲಿ ಐವತ್ತು ಕುಟುಂಬಗಳಿದ್ದು,ಶೌಚಾಲಯದ ಬಗ್ಗೆ ಅರಿವಿದ್ದರೂ ಕೂಡ ಅನುದಾನ ಬರುವುದಿಲ್ಲ,ಬಂದರೂ ತಡವಾಗುತ್ತದೆ ಎಂಬ ನೆಪವೊಡ್ಡಿ ಶೌಚಾಲಯದ ಉಸಾಬರಿಯೇ ಬೇಡವೆಂದು ಸುಮ್ಮನಾಗಿದ್ದಾರೆ.
ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಗ್ರಾಮಸ್ಥರನ್ನು ಭೇಟಿ ಮಾಡಿ ಅರಿವು ಮೂಡಿಸುತ್ತಿರುವ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಎನ್.ಕುಮಾರ್.
     ಈ ಊರಿನಲ್ಲಿ ಇಂದಿಗೂ ಇರುವುದು ಒಂದೇ ಶೌಚಾಲಯ.ಮಿಕ್ಕ ಐವತ್ತು ಹೆಚ್ಚು ಮನೆಗಳಿಗೆ ಶೌಚಾಲಯದ ಭಾಗ್ಯವಿಲ್ಲ.ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಹೆಣ್ಣು ಮಕ್ಕಳು ಬಯಲು,ಗದ್ದೆ,ಹೊಲಗಳನ್ನು ಆಶ್ರಯಿಸಬೇಕಾಗಿದೆ.
     ಹಾಗಾದರೆ ಇದು ಎಲ್ಲೋ ಇರುವ ಗುಡ್ಡಗಾಡಿನಲ್ಲಿರುವ ಪ್ರದೇಶವಲ್ಲ.ಹುಳಿಯಾರಿನಿಂದ ತೊರೆಸೂರಗನಹಳ್ಳಿ ಮಾರ್ಗವಾಗಿ ಮೂರು ಕಿಲೋ ತೆರಳಿದರೆ ಸಿಗುವ ಗ್ರಾಮವೇ ಸೈಯದ್ ಸಾಬ್ ಪಾಳ್ಯ.ಇಲ್ಲಿ ಬರೋಬ್ಬರಿ ಐವತ್ತು ಮನೆಗಳಿದ್ದು 200ಮೀ ದೂರದ ಎರಡು ಸಿಮೆಂಟ್ ರಸ್ತೆಯ ಭಾಗ್ಯ ಕಂಡಿದೆ.ಇತ್ತೀಚೆಗಷ್ಟೇ ನಿರಂತರ ಜ್ಯೋತಿ ಭಾಗ್ಯ ಲಭಿಸಿದೆ.ನೀರಿಗಾಗಿ ಸಿಸ್ಟನ್ ಕೂಡಾ ಇಡಲಾಗಿದೆ ಸಮುದಾಯದವರ ಪ್ರಾರ್ಥನೆಗೆ ಮಸೀದಿ ಕೂಡ ಇದೆ. ಇಷ್ಟೆಲ್ಲಾ ಇದ್ದರೂ ಸಹ ಶೌಚಾಲಯದ ಭಾಗ್ಯವಿಲ್ಲದಿರುವುದೇಕೆಂಬುದೇ ಯಕ್ಷಪ್ರಶ್ನೆಯಾಗಿದೆ.
ಶೌಚಾಲಯ ನಿರ್ಮಿಸಲು ನೆರವು ನೀಡುವ ನಿಟ್ಟಿನಲ್ಲಿ ಯುವಮುಖಂಡ ಇಮ್ರಾಜ್ ನೇತೃತ್ವದ ತಂಡ ಗ್ರಾಮದಲ್ಲಿನ ಜನರ ಮನವೊಲಿಕೆಯಲ್ಲಿ ತೊಡಗಿರುವುದು.
           ಹಾಗಂತ ಶೌಚಾಲಯದ ಬಗ್ಗೆ ಇಲ್ಲಿನ ಜನಕ್ಕೆ ಅರಿವಿಲ್ಲವೇ ಎಂದರೆ ಅದು ಕೂಡ ಸುಳ್ಳು.ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರೇ ಇರುವ ಈ ಊರಿನಲ್ಲಿ ಹೆಚ್ಚಿನ ಜನ ಇತರೆಡೆಗೆ ಕೆಲಸಕ್ಕೆ ಹೋಗಿದ್ದಾರೆ.ಶೌಚಾಲಯದ ಅವಶ್ಯಕತೆ,ಅನಿವಾರ್ಯತೆ ಬಗ್ಗೆ ಇವರಿಗೆ ತಿಳಿದಿದೆ.ಆದರೆ ಈ ಪ್ರಶ್ನೆ ಹುಡುಕಿಕೊಂಡು ಹೊರಟರೆ ಹಿಂದೆ ನಿರ್ಮಿಸಿದ್ದ ಶೌಚಾಲಯಕ್ಕೆ ಇದುವರೆಗೂ ದುಡ್ಡು ಕೊಡದಿರುವುದು ಹಾಗೂ ತೆಗೆಯಲಾಗಿದ್ದ ಎರಡು ಶೌಚದ ಗುಂಡಿಗೆ ಕಾರ್ಯಾದೇಶ ನೀಡದೆ ಸತಾಯಿಸಿರುವುದು ಕಾರಣ ಎನ್ನಲಾಗಿದೆ.
          ಸ್ವಚ್ಛತೆ ಸ್ವಾತಂತ್ರ್ಯದಷ್ಟೇ ಮುಖ್ಯ ಎಂಬುದು ಗಾಂಧೀಜಿಯ ಆಶಯವಾಗಿದ್ದು,ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯದ ಜಾಗೃತಿ ಮೂಡಿಸುವ ಕೆಲಸ ಗ್ರಾಮ ಪಂಚಾಯಿತಿ ಪಿಡಿಒ,ಕಾರ್ಯದರ್ಶಿಗಳು ಹಾಗೂ ಆ ಭಾಗದ ಸದಸ್ಯರುಗಳ ಹೊಣೆಗಾರಿಕೆಯಾಗಿದೆ.ಶೌಚಾಲಯದ ಬಗ್ಗೆ ನಿರ್ಲಕ್ಷ್ಯ ವಹಿಸಿ,ನಿರೀಕ್ಷಿತ ಸಾಧನೆ ತೋರದ ಪಿಡಿಓಗಳಿಗೆ ಚುರುಕು ಮುಟ್ಟುವ ಕೆಲಸ ಅಧ್ಯಕ್ಷರು ಮಾಡಬೇಕಿದ್ದು,ಗಾಂಧಿ ಜಯಂತಿಯ ಈ ದಿನವಾದರೂ ಈ ಗ್ರಾಮಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೇ ಕಾದು ನೋಡಬೇಕಿದೆ.
--------------------------------
ತಿಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ,ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಇಲ್ಲಿನ ಗ್ರಾಮ ಪಂಚಾಯಿತಿಯವರು ಮಾಡಬೇಕಿದೆ.ಆರೋಗ್ಯ ಇಲಾಖೆಯವರು ಮನೆ ಮನೆಗೆ ತೆರಳಿ ಬಯಲು ಮಲ ವಿಸರ್ಜನೆಯಿಂದ ಆಗುವ ಆರೋಗ್ಯ ಅನಾಹುತದ ಬಗ್ಗೆ ತಿಳಿ ಹೇಳಬೇಕಾಗಿದೆ: ಎಚ್.ಎನ್. ಕುಮಾರ್,ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು.
----------------------------------
ನೈರ್ಮಲ್ಯದ ಕಡೆಗೆ ನಮ್ಮ ನಡಿಗೆ ಎಂಬ ಘೋಷಣಾ ವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಸರಕಾರದ ಯೋಜನೆ ಅನುಷ್ಠಾನಗೊಳಿಸಲು ತಿಮ್ಲಾಪುರ ಗ್ರಾಮ ಪಂಚಾಯಿತಿ ವಿಫಲವಾಗಿದೆ.ಇಂತಿಷ್ಟು ಟಾರ್ಗೆಟ್ ಅಂತ ಪ್ರತಿ ಪಂಚಾಯಿತಿಗೂ ನಿಗದಿ ಮಾಡಿದ್ದರೂ ಸಹ ಪಿಡಿಒ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತದೆ.ಇದರ ಬಗ್ಗೆ ಅಧ್ಯಕ್ಷರು ತುರ್ತಾಗಿ ಗಮನ ಹರಿಸಬೇಕಿದೆ. : ಭಟ್ಟರಹಳ್ಳಿ ಮಲ್ಲಿಕಾರ್ಜುನ್,ಜಿಲ್ಲಾ ಸಂಘಟನ ಕಾರ್ಯದರ್ಶಿ,ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ.
-----------------------------------
ಶೌಚಾಲಯ ಇಲ್ಲದಿರುವ ವಿಷಯ ಗಮನಕ್ಕೆ ಬಂದಿದೆ.ಎಷ್ಟು ಜನಕ್ಕೆ ಶೌಚಾಲಯವಿಲ್ಲ,ಆಗಬೇಕಾಗಿರುವ ಕೆಲಸ ಏನೇನಿದೆ ಎಂದು ಫಲಾನುಭವಿಗಳನ್ನು ಹುಡುಕಿಕೊಂಡು ಹೋಗಲು ಪಿಡಿಒ ಅವರಿಗೆ ಆದೇಶಿಸಿರುವೆ.ಪಿಡಿಒ ವರದಿ ತರಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಕಾರ್ಯಾದೇಶವನ್ನು ಸ್ಥಳದಲ್ಲೇ ಕೊಡಲು ಅನುವು ಮಾಡಿಕೊಡುವೆ. :ದೇವರಾಜು,ತಿಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು.
---------------------------
ಸೈಯದ್ ಸಾಬ್ ಪಾಳ್ಯಕ್ಕೆ ಸಂಬಂಧಿಸಿದಂತೆ ಶೌಚಾಲಯದ ಅವಶ್ಯಕತೆಯ ಮನವರಿಕೆ ಮಾಡಿಕೊಡಲು ಹಾಗೂ ಹಣಕಾಸಿನ ತೊಂದರೆ ಇದ್ದಲ್ಲಿ ನಮ್ಮ ಸಮುದಾಯದ್ದೆ ಆದ ಟಿಪ್ಪು ಸುಲ್ತಾನ್ ಪತ್ತಿನ ಸಹಕಾರ ಸಂಘದಲ್ಲಿ ಹತ್ತು ಸಾವಿರ ರೂಪಾಯಿ ಸಾಲದ ರೂಪದಲ್ಲಿ ಹಣ ನೀಡಲಾಗುವುದರ ಬಗ್ಗೆ ಸಮುದಾಯದ ಯುವಕರುಗಳು ಸ್ಥಳಕ್ಕೆ ತೆರಳಿ ಮನವರಿಕೆ ಮಾಡಿಕೊಡಲಾಗಿದೆ.: ಇಮ್ರಾಜ್, ಯುವ ಮುಖಂಡ

----------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...