ಹುಳಿಯಾರು:ಪಟ್ಟಣದ ಕೋಡಿಪಾಳ್ಯದ ಧ್ಯಾನಗರಿಯಲ್ಲಿರುವ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ನ ಕಂಕಳೇಶ್ವರಿ ತುಳಜಾಭವಾನಿ ಹಾಗೂ ಮಾರಿಕಾಂಬ ಅಮ್ಮನವರ ದೇವಾಲಯದ 6ನೇ ವರ್ಷದ ವಾರ್ಷಿಕ ಮಹೋತ್ಸವ ಇದೇ ಏ.29 ರ ಶನಿವಾರ ಹಾಗೂ 30ರ ಭಾನುವಾರ ಹಮ್ಮಿಕೊಳ್ಳಲಾಗಿದೆ.
ಈ ನಿಮಿತ್ತ ಧ್ಯಾನ ನಗರಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸಮಾರಂಭ ಹಾಗೂ ಸಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್ ಮಾತನಾಡಿ ಶನಿವಾರ ಸಂಜೆ 5:00 ಗಂಟೆಗೆ ನಾಂದಿ,ಗಣಪತಿ- ನವಗ್ರಹ-ಅನಂತಪದ್ಮನಾಭ ದೇವರ ಕಲಶ ಸ್ಥಾಪನೆ ಹಾಗೂ ಹೋಮ, ಪೂರ್ಣಾಹುತಿ ನಡೆಯಲಿದೆ. 30ರ ಭಾನುವಾರ ಬೆಳಿಗ್ಗೆ 7:30ಕ್ಕೆ ಪ್ರಧಾನ ಕಲಾ ತತ್ವ ಹೋಮ, ಪ್ರಧಾನ ಪೂರ್ಣಾಹುತಿ, ಮಹಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು. ಅದೇ ದಿನ ಭಾನುವಾರ ಸಂಜೆ 6:30ಕ್ಕೆ ಶ್ರೀಮತಿ ಶುಭ ಧನಂಜಯ ಅವರ ತಂಡದಿಂದ "ಭವಾನಿ ದಯಾ ನೀ" ಸಮೂಹ ದೇವಿ ಪ್ರಾರ್ಥನಾ ನೃತ್ಯರೂಪಕ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಈ ಮುಂಚೆ ಆಯೋಜಿಸಲಾಗಿದ್ದ ಪ್ರಸಿದ್ಧ ಗಾಯಕಿ ಮಂಗಳಿಬಾಯಿ ಅವರ ಕಾರ್ಯಕ್ರಮವನ್ನು ಚುನಾವಣಾ ಸಮಯದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದ್ದು ಮುಂದಿನ ನವರಾತ್ರಿ ಸಮಯದಲ್ಲಿ ಆಯೋಜಿಸಲಾಗುವುದು ಎಂದರು.
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬರುವ ಮೇ ತಿಂಗಳಿನಲ್ಲಿ "ನಮ್ಮೂರ ಕಲಾವಿದರು - ನಮ್ಮೂರ ನಾಟಕ" ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತ ನಾಟಕ ಹಾಗೂ ನೃತ್ಯ ಕಲಾವಿದರು ಮಾತಾ ಚಾರಿಟಬಲ್ ಟ್ರಸ್ಟ್ ನ ಕಚೇರಿಯ ವ್ಯವಸ್ಥಾಪಕರನ್ನು ಸಂಪರ್ಕಿಸಲು ಕೋರಿದರು.
ಈ ವೇಳೆ ಕಿರುತರೆ ಕಲಾವಿದ ಗೌಡಿ, ಹುಳಿಯಾರು ಆಂಜನೇಯ ಸ್ವಾಮಿ ದೇವಾಲಯದ ಅಧ್ಯಕ್ಷ ಬಡಗಿ ರಾಮಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಕಾಶ್, ವಾಸವಿ ಸಹಕಾರ ಸಂಘದ ಅಧ್ಯಕ್ಷ ಎಲ್.ಆರ್.ಸುದೀರ್, ಹಾರ್ಡ್ವೇರ್ ಸಂಘದ ಅಧ್ಯಕ್ಷ ಬಸವರಾಜು ಸೇರಿದಂತೆ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ನ ಸದಸ್ಯರು, ಉಪಸಮಿತಿಯ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ