ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ
ಹುಳಿಯಾರು: ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು.
ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು : ಪ್ರತಿಭಟನಾಕಾರರು ಟ್ರ್ಯಾಕ್ಟರ್ನಲ್ಲಿ ಕಸ ತುಂಬಿಕೊಂಡು ಮೊದಲು ದುರ್ಗಮ್ಮನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ, ಮೆರವಣಿಗೆ ಮೂಲಕ ನಾಡಕಚೇರಿ ಮುಂದೆ ಆಗಮಿಸಿ, ಕಸ ಸುರಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲು ಮುಂದಾದರು.
ಪೊಲೀಸರ ಅಡ್ಡಿ: ನಾಡಕಚೇರಿ ಆವರಣದ ಮುಂದೆ ಕಸ ಸುರಿಯುವುದಕ್ಕೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಅಡ್ಡಿಪಡಿಸಿದರು.
ಬಿಗಿ ಬಂದೋಬಸ್ತ್: ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ನಾಡಕಚೇರಿ ಮುಂದೆ ಅಡಿಷನಲ್ ಎಸ್.ಪಿ., ಡಿವೈಎಸ್ಪಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಸರ್ಪಗಾವಲು ಏರ್ಪಡಿಸಲಾಗಿತ್ತು.
ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ :
ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ತಿಪಟೂರು ಉಪವಿಭಾಗಾಧಿಕಾರಿ (ಎಸಿ) ಸಪ್ತಶ್ರೀ ಅವರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ತುಮಕೂರು ನಗರ ಅಭಿವೃದ್ಧಿ ಕೋಶದ ಯೋಜನಾಧಿಕಾರಿ ಯೋಗಾನಂದ್, ತುಮಕೂರು ಎಪಿಎಂಸಿ ಉಪನಿರ್ದೇಶಕ ರಾಜಣ್ಣ, ಹಾಗೂ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಪುರಂದರ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಕಾವೇರಿದ ಚರ್ಚೆ ನಡೆಯಿತು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಮತ್ತು ಒತ್ತಾಯ : ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಕೇವಲ ಮೌಖಿಕವಾಗಿ ಹೇಳದೆ, ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸುವಂತೆ ಒತ್ತಾಯಿಸಿದರು.
ವೈಜ್ಞಾನಿಕ ಕಸ ವಿಲೇವಾರಿ ಘಟಕ: ಕಸ ವಿಲೇವಾರಿ ಘಟಕಕ್ಕೆ ಎಲ್ಲೂ ವಿರೋಧ ಬರದೇ ಇರುವ ರೀತಿಯಲ್ಲಿ ಜಾಗವನ್ನು ಗುರುತಿಸಲು ಪರಿಸರ ಇಲಾಖೆಯ ಇಂಜಿನಿಯರ್ಗಳ ನೆರವು ಪಡೆದು ನೀಲನಕ್ಷೆ (ಡಿಪಿಆರ್) ತಯಾರಿಸಬೇಕು. ಇದಕ್ಕಾಗಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಿರಸಿ, ಮಂಗಳೂರು ಅಥವಾ ಉಡುಪಿಯಂತಹ ಸ್ಥಳಗಳ ಮಾದರಿಯನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ತಾಂತ್ರಿಕ ಸಮಿತಿ ರಚನೆ (Technical Committee): ಜಾಗ ಗುರುತಿಸುವ ಮುನ್ನ ಅಧಿಕಾರಿಗಳು ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣಿತರನ್ನು ಒಳಗೊಂಡ ಒಂದು ತಾಂತ್ರಿಕ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
ಅಧಿಕಾರಿಗಳ ಭರವಸೆ : ಶಾಶ್ವತ ಜಾಗಕ್ಕೆ 15 ದಿನಗಳ ಗಡುವು: ಕಸ ವಿಲೇವಾರಿ ಘಟಕದ ಶಾಶ್ವತ ಜಾಗ ಗುರುತಿಸುವ ಜವಾಬ್ದಾರಿಯನ್ನು ಆಡಳಿತ ತೆಗೆದುಕೊಂಡಿದ್ದು, 15 ದಿನಗಳಲ್ಲಿ ಜಾಗ ಗುರುತಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು.
ತಾಂತ್ರಿಕ ಸಮಿತಿ ರಚನೆ: ಜಾಗ ಗುರುತಿಸಲು ತಕ್ಷಣವೇ ಕಮಿಟಿ ರಚಿಸಲಾಗುವುದು ಎಂದು ಎಸಿ ಸಪ್ತಶ್ರೀ ಸ್ಪಷ್ಟಪಡಿಸಿದರು.
ಸಂತೆ ಸ್ಥಳಾಂತರಕ್ಕೆ ಒಪ್ಪಿಗೆ : ಸಂತೆ ಜಾಗದ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ ದೊರೆಯಿತು ಮತ್ತು ಸಾರ್ವಜನಿಕ ಶೌಚಾಲಯವನ್ನು ನಾಳೆಯೇ ತೆರೆಯಲು ಅಧಿಕಾರಿಗಳು ಸೂಚನೆ ನೀಡಿದರು.
ಅಧಿಕಾರಿಗಳ ಈ ಸಕಾರಾತ್ಮಕ ಭರವಸೆಗಳ ನಂತರವೂ ಕಸ ಸುರಿಯುವ ನಿರ್ಧಾರದಿಂದ ಹಿಂಬರದ ಪ್ರತಿಭಟನಾಕಾರರು ಕಸ ಸುರಿಯಲು ಮುಂದಾದರು. ತೀವ್ರ ವಾದ ವಿವಾದ ಏರ್ಪಟ್ಟು ಕಡೆಗೆ ನಾಡಕಚೇರಿಗೆ ಮಹಿಳೆಯರು ಆರತಿ ಎತ್ತಿ, ಕಸ ಸುರಿಯುವ ನಿರ್ಧಾರಕ್ಕೆ ಅಂತ್ಯ ಹಾಡಿದರು.
ಸದ್ಯಕ್ಕೆ ಎರಡು ಬೇಡಿಕೆ ಬಗೆಹರಿದಿದ್ದರೂ ಪ್ರತಿಭಟನಾಕಾರರು ಮಾತ್ರ ತಮ್ಮ ಪ್ರತಿಭಟನೆಯನ್ನು ಹಿಂಪಡೆಯದೆ ಪಟ್ಟಣ ಪಂಚಾಯಿತಿ ಮುಂದೆ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದುವರಿಸಿದ್ದು, ಮುಂದಿನ 15 ದಿನಗಳಲ್ಲಿ ಕಸ ವಿಲೇವಾರಿ ಘಟಕದ ಜಾಗ ಗುರುತಿಸದಿದ್ದರೆ ಹೋರಾಟವನ್ನು ಮತ್ತೆ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ