ಎಪಿಎಂಸಿ ಸ್ಥಳದಲ್ಲಿ ಸಂತೆ ಜಾಗಕ್ಕೆ ನಿರಾಕರಣೆ, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲು ಒತ್ತಾಯ
------------
✍ ವರದಿ : ನರೇಂದ್ರಬಾಬು-9448760070
ಹುಳಿಯಾರು:ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ರೈತ ಸಂಘವು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಹುಳಿಯಾರಿನ ಬಸವೇಶ್ವರನಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರದಂದು ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ನಡುವೆ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಹಾಲಿ ಇರುವ ಸಂತೆ ಸ್ಥಳಾಂತರ ಮತ್ತು ಪಟ್ಟಣದ ಕಸ ವಿಲೇವಾರಿಗೆ ಸೂಕ್ತ ಜಾಗದ ವಿಚಾರವಾಗಿ ತೀವ್ರ ಚರ್ಚೆ ನಡೆದು, ರೈತ ಸಂಘದ ಬೇಡಿಕೆ ಮತ್ತು ಉಳಿದ ಸಂಘಟನೆಗಳ ನಿಲುವುಗಳ ಮಧ್ಯೆ ಭಿನ್ನಮತ ಉಂಟಾಯಿತು.ಮೂಲಭೂತ ಸೌಕರ್ಯದ ಕೊರತೆ: ತೆರಿಗೆ ಕಟ್ಟುವುದಿಲ್ಲ ಎಂದು ರೈತ ಸಂಘ ಪಟ್ಟು : ಹಾಲಿ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ನೆರಳು, ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ಕೊರತೆ ಇದೆ. ಹೀಗಾಗಿ ಪಟ್ಟಣ ಪಂಚಾಯಿತಿ ಮೂಲಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅಲ್ಲಿ ತರಕಾರಿ ಸೊಪ್ಪು ಮಾರಾಟ ಮಾಡಲು ಬರುವ ರೈತರು ಸಂತೆಸುಂಕ ಕಟ್ಟಲು ತಯಾರಿಲ್ಲ ಎಂದು ರೈತ ಸಂಘದ ಮುಖಂಡರು ಸ್ಪಷ್ಟಪಡಿಸಿದರು.
ರೈತ ಸಂಘದ ರಾಜ್ಯಾದ್ಯಕ್ಷ ಚಂದ್ರಪ್ಪ ಮಾತನಾಡಿ ಸಂತೆ ಸ್ಥಳವನ್ನು ಕೂಡಲೇ ಬದಲಿಸಿರಿ, ಅಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿರಿ. ಅಲ್ಲಿಯವರೆಗೂ ನಾವು ತೆರಿಗೆ ಕಟ್ಟುವುದಿಲ್ಲ.ಇದೇ ಗುರುವಾರದಿಂದ ನಾವು ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ಮುಂದುವರೆಸುತ್ತಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ,ಬುಧವಾರ ಕರಪತ್ರ ಮುದ್ರಿಸಿ ಪಟ್ಟಣದಲ್ಲಿ ಎಲ್ಲಾ ಹಂಚುತ್ತೇವೆ, ಯಾರು ಸುಂಕ ಕಟ್ಟಬಾರದು ಎಂದು ಪ್ರಚಾರ ಮಾಡುತ್ತೇವೆ ಎಂದು ಘೋಷಿಸಿದರು.
ರೈತ ಸಂಘದ ಅಧ್ಯಕ್ಷ ಹುಳಿಯಾರು ಹೋಬಳಿ ಕೆಂಕೆರೆ ಬಸವರಾಜು ಅವರು ಮಾತನಾಡಿ ಹಾಲಿ ಸ್ಥಳದಲ್ಲಿ ಸೌಕರ್ಯಗಳಿಲ್ಲ. ಎಪಿಎಂಸಿಗೆ ಸ್ಥಳಾಂತರಿಸಲು ಬೇಡಿಕೆಯಿರುವ ಜಾಗ ಕೇವಲ ಅರ್ಧ ಕಿ.ಮೀ. ದೂರವಿದೆ. ಹಾಗಾಗಿ ಅಲ್ಲಿಗೆ ಬರುವ ಜನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೆ ಇಲ್ಲಿ ಸಂತೆ ನಡೆಯುವ ದಿವಸ ಸಾಕಷ್ಟು ಕಾರುಗಳು ಭಾರಿ ವಾಹನಗಳು ಓಡಾಡುತ್ತವೆ. ಕಾರಣ ಏನೆಂದರೆ ಹಿರಿಯೂರಿಗೆ ಹೋಗುವ ಮಾರ್ಗ ಗೂಗಲ್ ಆಪ್ ಹಾಕಿಕೊಂಡಲ್ಲಿ ಇದೆ ಸ್ಥಳವನ್ನು ತೋರಿಸುತ್ತದೆ. ಸಂತೆಯ ಕಿಷ್ಕಿಂದೆ ಜಾಗದಲ್ಲಿ ವಾಹನಗಳು ಕೂಡ ಬರುವುದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಯಾವುದೇ ಸೌಕರ್ಯಗಳು ಇಲ್ಲದೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯ ಜಾಗವನ್ನು ಈ ಕೂಡಲೇ ಎಪಿಎಂಸಿಗೆ ಬದಲಾವಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಕಲ್ಲಹಳ್ಳಿ ರೈತ ಮಲ್ಲೇಶಯ್ಯ ಮಾತನಾಡಿ ಎಪಿಎಂಸಿಗೆ ಶಿಫ್ಟ್ ಮಾಡಿದರೆ ದೂರ ಆಗುತ್ತದೆ ಎಂದು ಹೇಳುತ್ತಿದ್ದೀರಿ. ಸಂತೆಗೆ ಕೇವಲ ಹುಳಿಯಾರಿನವರು ಮಾತ್ರ ಬರುವುದಿಲ್ಲ,ದೂರದಿಂದ ಹಳ್ಳಿ ಜನ ಬರುತ್ತಾರೆ. ವಾಹನದಲ್ಲಿ ಬರುವವರ ಸಂಖ್ಯೆ ಜಾಸ್ತಿ ಇದ್ದು, ಅರ್ಧ ಕಿಲೋಮೀಟರ್ ದೂರ ಇರುವ ಎಪಿಎಂಸಿಗೆ ಶಿಫ್ಟ್ ಮಾಡಿದರೆ ನೀವು ತಿಳಿಸುವಂತೆ ಯಾವುದೇ ತೊಂದರೆ ರೈತರಿಗಾಗುವುದಿಲ್ಲ. ಖಂಡಿತವಾಗಿಯೂ ಎಪಿಎಂಸಿಗೆ ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ ಎಂದು ರೈತ ಸಂಘದ ಬೇಡಿಕೆಯನ್ನು ಬೆಂಬಲಿಸಿದರು.
ಸ್ಥಳ ಬದಲಾವಣೆ ಬೇಡ: ಹಾಲಿ ಸ್ಥಳದಲ್ಲೇ ಸೌಲಭ್ಯ ಒದಗಿಸಲು ಆಗ್ರಹ: ಸಂತೆ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು, ಬದಲಿಗೆ ಹಾಲಿ ಇರುವ ಗಾಂಧಿಪೇಟೆ ಸ್ಥಳದಲ್ಲಿಯೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಹೋಬಳಿ ಅಧ್ಯಕ್ಷ ಗೌಡಿ ಮಾತನಾಡಿ ಗಾಂಧಿಪೇಟೆ ಸ್ಥಳದಲ್ಲಿ ಎಷ್ಟೋ ವರ್ಷಗಳಿಂದ ಸಂತೆ ನಡೆಯುತ್ತಿದ್ದು ಗ್ರಾಹಕರಿಗೆ ಅನುಕೂಲವಾಗಿದೆ. ಸ್ಥಳ ಬದಲಾಯಿಸಿದರೆ ಬಡ ವ್ಯಾಪಾರಿಗಳು ಆಟೋದಲ್ಲಿ ಹೋಗಿ ಬರಲು ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸಂತೆ ಸ್ಥಳ ಇಲ್ಲೇ ಇರಲಿ, ಇಲ್ಲಿಯೇ ಅಗತ್ಯ ಸೌಕರ್ಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.ಕಾಮನಬಿಲ್ಲು ಫೌಂಡೇಷನ್ ಅಧ್ಯಕ್ಷ ಚನ್ನಕೇಶವ ಮಾತನಾಡಿ ಯಾವ ವ್ಯಾಪಾರಿಗಳಾಗಲಿ, ಸಾರ್ವಜನಿಕರಾಗಲಿ ಸಂತೆ ಬದಲಾಯಿಸಿ ಎಂದು ಅರ್ಜಿ ಕೊಟ್ಟಿಲ್ಲ. ಎಪಿಎಂಸಿಗೆ ಸ್ಥಳಾಂತರಿಸಿದರೆ ಆಟೋ ಖರ್ಚು ₹120-130 ಆಗಿ, ವ್ಯಾಪಾರಸ್ಥರಿಗೆ ಒತ್ತಡ ಹೆಚ್ಚುತ್ತದೆ. ಮೂಲಸೌಕರ್ಯ (ನೀರು, ಶೌಚಾಲಯ) ಮಾತ್ರ ಒದಗಿಸಲಿ.ಇಲ್ಲವಾದರೆ ಮಾರ್ಕೆಟ್ ಯಶಸ್ವಿಯಾಗುವುದಿಲ್ಲ. ಸ್ಥಳಾಂತರದ ನಿರ್ಧಾರದ ಮೊದಲು ಅಧಿಕಾರಿಗಳು ತಂಡ ಮಾಡಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಅಭಿಪ್ರಾಯ ಕೇಳಬೇಕು ಎಂದು ಒತ್ತಾಯಿಸಿದರು.
ಕ.ರ.ವೇ ತಾಲ್ಲೂಕ್ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ ಪಟ್ಟಣ ಪಂಚಾಯ್ತಿ ₹8 ರಿಂದ ₹10 ಲಕ್ಷ ತೆರಿಗೆ ವಸೂಲಿ ಮಾಡುತ್ತಿದ್ದರೂ, ಶೌಚಾಲಯದ ವ್ಯವಸ್ಥೆ ಇಲ್ಲದೆ ಮಹಿಳಾ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಪಂಚಾಯಿತಿ ಅಪ್ಗ್ರೇಡ್ ಆಗಿದ್ದರೂ ಜನರಿಗೆ ಸೌಕರ್ಯ ಡೌನ್ಗ್ರೇಡ್ ಆಗಿದೆ. ಕೂಡಲೇ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸದಸ್ಯ ರಾಘವೇಂದ್ರ ಮಾತನಾಡಿ ತಾಲೂಕು ಆಡಳಿತ ಎಲ್ಲರ ಅಭಿಪ್ರಾಯ ಗ್ರಹಿಸಿರುವುದು ಉತ್ತಮ. ಆದರೆ, ಎಲ್ಲರೂ ಹಠ ಬಿಟ್ಟು ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಪಟ್ಟಣ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸೌಕರ್ಯಗಳಿರುವ ಮಾರುಕಟ್ಟೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಎಯಲ್ಲಿ ಯೌುದೇ ತೀತಗಮಾನ ತೆಗೆದುಕೊಳ್ಳಲು ಶಾಸಕರ ಅನುಪಸ್ಥಿತಿ ಇದೆ. ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆದು ಅವರ ಸಹಕಾರದಿಂದಲೇ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದರು.
ಎಪಿಎಂಸಿ ಮತ್ತು ಕಸ ವಿಲೇವಾರಿ ಜಾಗದ ಬಗ್ಗೆ ಅಧಿಕಾರಗಳ ಸ್ಪಷ್ಟನೆ : ಸಭೆಯಲ್ಲಿ ಅಧಿಕಾರಿಗಳು ಸಂತೆ ಸ್ಥಳಾಂತರ ಮತ್ತು ಕಸ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸುವಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಎಪಿಎಂಸಿ ಉಪನಿರ್ದೇಶಕ ಡಾ.ಬಿ.ರಾಜಣ್ಣ ಅವರು ಮಾತನಾಡಿ ಹುಳಿಯಾರು ಎಪಿಎಂಸಿಯಲ್ಲಿ ರೈತರ ಕೃಷಿ ಉತ್ಮನ್ನಗಳ ಮಾರಾಟ್ ಉದ್ದೇಶಕ್ಕೆ ವರ್ತಕರಿಗೆ ಈಗಾಗಲೇ ಮಳಿಗೆಗಳನ್ನು ಹಂಚಿಕೆ ಮಾಡಿದ್ದು, ತರಕಾರಿ ಸಂತೆ ನಡೆಸಲು ಸಾಕಷ್ಟು ಜಾಗ ಲಭ್ಯವಿಲ್ಲ. ಅಲ್ಲದೆ, ಎಪಿಎಂಸಿ ಕಾನೂನಿನಡಿ ತರಕಾರಿ ಸಂತೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ಸಂತೆ ನಡೆಸಲು ಸ್ಥಳಾವಕಾಶ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಹಸೀಲ್ದಾರ್ ಕೆ.ಪುರಂದರ ಅವರು ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಕಸ ವಿಲೇವಾರಿಗೆ ಜಾಗ ಗುರುತಿಸುವಂತೆ ಮೂರ್ನಾಲ್ಕು ಬಾರಿ ಅರ್ಜಿ ಬಂದಿತ್ತು. ಗುರುತಿಸಿ ಕೊಟ್ಟ ಜಾಗಗಳೂ ಸಹ ಗ್ರಾಮ ಅರಣ್ಯಕ್ಕೆ ಸೇರಿರುವುದು, ಅಥವಾ ಸಾರ್ವಜನಿಕರ ಪ್ರತಿರೋಧ ಎದುರಿಸಿದೆ. ಒಟ್ಟಾರೆ ಇದೀಗ ಸರ್ಕಾರಿ ಜಾಗ ಇಲ್ಲ. ಬದಲಿಗೆ ಪಟ್ಟಣ ಪಂಚಾಯಿತಿಯವರು ಖಾಸಗಿ ಜಾಗ ಕೊಟ್ಟಲ್ಲಿ ಅದನ್ನು ಖರೀದಿಸಲು ಮುಂದಾಗಬೇಕು ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ : ಅಧಿಕಾರಿಗಳ ನಿಲುವಿನ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಮ್ರಾಜ್ ಮಾತನಾಡಿ ಪಟ್ಟಣ ಪಂಚಾಯಿತಿಯಿಂದ ವ್ಯಾಪಾರಸ್ಥರಿಗೆ ಮೂಲಭೂತ ಸೌಲಭ್ಯ ಕೊಡ್ಲೇಬೇಕು, ಇದು ರೈತರ ಹಕ್ಕು. ಇಡೀ ಜಿಲ್ಲೆಗೆ ಒಂದೇ ಇರುವ ಉರ್ದು ಹೈಸ್ಕೂಲ್ ಪಕ್ಕದಲ್ಲಿ ಕೊಳೆತ ಈರುಳ್ಳಿ ಮತ್ತು ಕಸ ಹಾಕುತ್ತಿದ್ದರೂ ಸ್ವಚ್ಛತೆ ಬಗ್ಗೆ ಪರಿಜ್ಞಾನ ಇಲ್ಲ. ಸೂಟಬಲ್ ಜಾಗ ಎಲ್ಲಿದೆ ಅನ್ನೋದನ್ನ ಪರಿಗಣಿಸಿ, ರೈತರಿಗೂ, ನಾಗರಿಕರಿಗೂ ಅನುಕೂಲವಾಗುವ ದೃಢ ನಿರ್ಧಾರ ತಗೊಳ್ಳಿ ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದಿಕ್ ಮಾತನಾಡಿ ಎಪಿಎಂಸಿಯಲ್ಲಿ ಜಾಗವಿದ್ದರೂ ಅಭ್ಯಂತರ ಮಾಡುತ್ತಿದ್ದೀರಿ.ಎಪಿಎಂಸಿಯವರು ರಸ್ತೆ ಬದಿಯ ಜಾಗವನ್ನೂ ಅತಿಕ್ರಮಣ ಮಾಡಿಕೊಂಡಿದ್ದು, ಇಲ್ಲದ ತಕರಾರು ಮಾಡಬೇಡಿ ಎಂದು ಎಪಿಎಂಸಿ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಅವರನ್ನು ಉದ್ದೇಶಿಸಿ, ಕಸ ವಿಲೇವಾರಿಗೆ ಸರಿಯಾದ ಸರ್ಕಾರಿ ಜಾಗ ಗುರುತಿಸುವಲ್ಲಿ ವಿಫಲರಾಗಿದ್ದೀರಿ.ಸನಿಹದಲ್ಲೇ ಸರ್ಕಾರಿ ಜಾಗ ಲಭ್ಯ ಇದ್ದರೂ ಸಹ ಅದನ್ನು ಹಸ್ತಾಂತರ ಮಾಡಲು ಇಚ್ಛಾಶಕ್ತಿ ತೋರಿಸದೆ , ಹಣ ಕೊಟ್ಟು ಖರೀದಿ ಮಾಡಿ ಎಂದು ಪಟ್ಟಣ ಪಂಚಾಯತಿಗೆ ತಿಳಿಸುವ ಮೂಲಕ ಕೋಟ್ಯಂತರ ರೂಪಾಯಿ ಪಟ್ಟಣ ಪಂಚಾಯಿತಿಗೆ ಪೋಲಾಗಲು ಕಾರಣರಾಗುತ್ತಿದ್ದೀರಿ. ಖಾಸಗಿ ಜಾಗ ಕೊಂಡುಕೊಳ್ಳಿ ಎಂದು ಹೇಳುವುದು ಸರಿಯಲ್ಲ. ಶಾಶ್ವತವಾದ ಜಾಗ ಗುರುತಿಸಿಕೊಡಲು ಮುಂದಾಗಿ ಎಂದು ಒತ್ತಾಯಿಸಿದರು.
ಮುಂದಿನ ನಡೆ: ಗುರುವಾರದಿಂದ ಅಹೋರಾತ್ರಿ ಧರಣಿ : ಸಭೆಯ ಮಧ್ಯೆದಲ್ಲೇ ಹೊರನಡೆದ ರೈತ ಸಂಘದ ಮುಖಂಡರು, ತಮ್ಮ ಬೇಡಿಕೆ ಈಡೇರುವವರೆಗೂ ಪಟ್ಟಣ ಪಂಚಾಯಿತಿ ಮುಂದೆ ಗುರುವಾರದಿಂದ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ಪ್ರಕಟಿಸಿದರು. ಅಲ್ಲದೆ, ಬುಧವಾರ ಪಟ್ಟಣದಲ್ಲಿ ಕರಪತ್ರಗಳನ್ನು ಹಂಚಿ ಯಾರೂ ಸಹ ಸಂತೆ ಸುಂಕ ಕಟ್ಟಬಾರದು ಎಂದು ಪ್ರಚಾರ ಮಾಡುವುದಾಗಿ ತಿಳಿಸಿದರು.
ಆದರೆ ಇತರ ಸಂಘ ಸಂಸ್ಥೆಗಳು ಸಂತೆ ಸ್ಥಳಾಂತರದ ಬದಲಿಗೆ ಹಾಲಿ ಸ್ಥಳದಲ್ಲೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದವು.
ಸಭೆಯಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್,ಪಪಂ ಸದಸ್ಯರುಗಳಾದ ಅಬೂಬಕರ್ ಸಿದ್ದಿಕ್, ಮಹಮ್ಮದ್ ಜುಬೇರ್ ಮಂಜನಾಯ್ಕ್, ಸೈಯದ್ ಜಹೀರ್ ಸಾಬ್, ವೆಂಕಟೇಶ್ ಮತ್ತತರರು ಸೇರಿದಂತೆ ಹುಳಿಯಾರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಕಾಮಧೇನು ಫೌಂಡೇಶನ್ ಸದಸ್ಯರು, ಇಮ್ರಾಜ್ ಗೆಳೆಯರ ಬಳಗ, ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಪ್ರಶಾಂತ್, ಜಗದೀಶ್,ಲಕ್ಷ್ಮಿ, ಪುಷ್ಪಾವತಿ ,ಬಸವೇಶ್ವರ ನಗರದ ಶಂಕರೇಶ್,ಮಿಲ್ ಶಿವಣ್ಣ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು
ಒಂದೆಡೆ ಎಪಿಎಂಸಿ ಅಧಿಕಾರಿಗಳು ಕಾನೂನು ಮತ್ತು ಸ್ಥಳಾವಕಾಶದ ಕೊರತೆಯ ಕಾರಣ ಸ್ಥಳಾಂತರ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ರೈತ ಸಂಘದ ಪಟ್ಟು ಸಡಿಲವಾಗಿಲ್ಲ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ