ಹುಳಿಯಾರು ಪ್ರತಿಭಟನೆ: ನಾಳೆ ನಾಡಕಚೇರಿ ಮುಂದೆ ಕಸ ಸುರಿಯುವ ಮೂಲಕ ವಿನೂತನ ಪ್ರತಿಭಟನೆಗೆ ಸಜ್ಜು; 19ನೇ ದಿನಕ್ಕೆ ಕಾಲಿಟ್ಟ ಹೋರಾಟ
ಹುಳಿಯಾರು ಪ್ರತಿಭಟನೆ: ನಾಳೆ ನಾಡಕಚೇರಿ ಮುಂದೆ ಕಸ ಸುರಿಯುವ ಮೂಲಕ ವಿನೂತನ ಪ್ರತಿಭಟನೆಗೆ ಸಜ್ಜು; 19ನೇ ದಿನಕ್ಕೆ ಕಾಲಿಟ್ಟ ಹೋರಾಟ
---------------
ವರದಿ : ನರೇಂದ್ರಬಾಬು-ಹುಳಿಯಾರು
-------------
ಹುಳಿಯಾರು:ಹುಳಿಯಾರಿನಲ್ಲಿ ಸ್ಥಳೀಯ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆಯು ನಾಳೆ ಸೋಮವಾರಕ್ಕೆ 19ನೇ ದಿನಕ್ಕೆ ಕಾಲಿಡಲಿದೆ. ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತು ಇತರೆ ನಾಗರಿಕ ಸೌಕರ್ಯಗಳ ಕೊರತೆಯ ವಿರುದ್ಧ ಹೋರಾಡುತ್ತಿರುವ ಪ್ರತಿಭಟನಾಕಾರರು, ನಾಳೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ ಹಾಗೂ ಇತರ ಸಂಘಟನೆಗಳ ನೆರವಿನೊಂದಿಗೆ ನಾಡಕಚೇರಿ ಮುಂದೆ ಕಸ ಸುರಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳು ಮತ್ತು ವಿನೂತನ ಕ್ರಮಗಳು:
ಕಸ ವಿಲೇವಾರಿ ಸಮಸ್ಯೆ: ಹುಳಿಯಾರಿನಲ್ಲಿ ಮನೆ ಮನೆ ಕಸ ಸಂಗ್ರಹಣೆ ವ್ಯವಸ್ಥೆ ಸರಿಯಾಗಿಲ್ಲದಿರುವುದು ಮತ್ತು ಕಸ ವಿಲೇವಾರಿಗೆ ಸೂಕ್ತ ಜಾಗದ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಲು ವಿಫಲರಾಗಿರುವ ಕಂದಾಯ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಾಡಕಚೇರಿ ಮುಂದೆ ಕಸವನ್ನು "ಉಡುಗೊರೆ"ಯಾಗಿ ಟ್ರ್ಯಾಕ್ಟರ್ನಲ್ಲಿ ತಂದು ಸುರಿಯುವ ಮೂಲಕ ಪ್ರತಿಭಟಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಸಮಸ್ಯೆಗಳು: ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಪಟ್ಟಣದಲ್ಲಿನ ಇತರ ಮೂಲಭೂತ ಸೌಕರ್ಯಗಳ ಕೊರತೆಯನ್ನು ಬಗೆಹರಿಸಲು ಒತ್ತಾಯಿಸಲಾಯಿತು.ಅಧಿಕಾರಿಗಳಿಗೆ ಗಡುವು ಮತ್ತು ಎಚ್ಚರಿಕೆ: ಸರ್ಕಾರಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು ನಾಡಕಚೇರಿ ಮುಂದೆ ಒಂದು ಟ್ರ್ಯಾಕ್ಟರ್ ಕಸವನ್ನು ಸುರಿದ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ಎರಡು-ಮೂರು ದಿನಗಳ ನಂತರ ಮೂರು-ನಾಲ್ಕು ಟ್ರ್ಯಾಕ್ಟರ್ ಕಸವನ್ನು ತಹಸೀಲ್ದಾರ್ ಕಚೇರಿ ಮುಂದೆ ಸುರಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೂ ಬಗೆಹರಿಯದಿದ್ದರೆ, ಹತ್ತು ಟ್ರ್ಯಾಕ್ಟರ್ಗಳನ್ನು ಉಪ ವಿಭಾಗಾಧಿಕಾರಿಗಳಿಗೆ ಕಳುಹಿಸಿ, ಕೊನೆಗೆ 20-30 ಟ್ರ್ಯಾಕ್ಟರ್ಗಳನ್ನು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಂದು ಸುರಿಯುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ:ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಡಿವೈಎಸ್ಪಿ ಜಯಲಕ್ಷ್ಮಮ್ಮ, ವೃತ್ತ ನಿರೀಕ್ಷಕ ನದಾಫ್ ಎಫ್ಕೆ, ಮತ್ತು ಪಿಎಸ್ಐ ಧರ್ಮಾಂಜಿ ಅವರು ಸಂಜೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಡಿವೈಎಸ್ಪಿ ಅವರು, ನಾಳಿನ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಶಾಂತಿ ಕಾಪಾಡುವ ಭರವಸೆ: ಕೆ ಆರ್ ಎಸ್ ಪಕ್ಷದ ಪ್ರಮುಖ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಅವರು ಮಾತನಾಡಿ ಪೊಲೀಸರಿಗೆ ಪ್ರತಿಭಟನೆ ಕುರಿತು ಸ್ಪಷ್ಟನೆ ನೀಡಿ, ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಯಾವುದೇ ನಷ್ಟ ಉಂಟು ಮಾಡುವುದಿಲ್ಲ. ವೈಯಕ್ತಿಕವಾಗಿ ಯಾರನ್ನೂ ಅವಹೇಳನಕಾರಿಯಾಗಿ ನಿಂದಿಸುವುದಿಲ್ಲ. ಪೊಲೀಸರಿಗೆ ಎಫ್ಐಆರ್ ದಾಖಲಿಸುವ ಕೆಲಸವನ್ನೇ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅಲ್ಲದೆ ಪ್ರತಿಭಟನೆ ಸಂದರ್ಭದಲ್ಲಿ ಎಲ್ಲೂ ಸಹ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ರುವುದಿಲ್ಲ ಅಥವಾ ಟ್ರಾಫಿಕ್ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ತಿಳಿಸಿದರು.
ಬೆಂಬಲ ವ್ಯಕ್ತಪಡಿಸಿದ ಸಂಘಟನೆಗಳು ಮತ್ತು ನಾಗರಿಕರು:
ನಾಡಕಚೇರಿ ಮುಂದೆ ನಡೆಯಲಿರುವ ಈ ವಿನೂತನ ಪ್ರತಿಭಟನೆಗೆ ಹುಳಿಯಾರಿನ ನಾಗರಿಕರು, ವಿವಿಧ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ಜಿಲ್ಲಾ ಕಾರ್ಯದರ್ಶಿ ಕಲ್ಲಹಳ್ಳಿ ಮಲ್ಲೇಶಯ್ಯ, ನಾಗರಿಕ ವೇದಿಕೆಯ ಇಂಜಿನಿಯರ್ ಲಿಂಗರಾಜು,ಶಂಕರೇಶ್, ಕಾಮನಬಿಲ್ಲು ಫೌಂಡೇಶನ್ನ ಚನ್ನಕೇಶವ, ನೀರಾ ಈರಣ್ಣ, ಉಪನ್ಯಾಸಕ ನರೇಂದ್ರಬಾಬು, ಸಾಮಾಜಿಕ ಹೋರಾಟಗಾರ ಹೊನ್ನಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ