ಹುಳಿಯಾರು ಪಟ್ಟಣ ಪಂಚಾಯಿತಿ ಎದುರು ಕೆ.ಆರ್.ಎಸ್. ಪಕ್ಷದಿಂದ ಅಧಿಕಾರಿಗಳಿಗೆ ಕಸ ರಮಾನಿಸುವ ಮೂಲಕ ವಿನೂತನ ಪ್ರತಿಭಟನೆ;
ಭಟ್ಟರಹಳ್ಳಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಆಡಳಿತದ ಲೋಪಗಳ ವಿರುದ್ಧ ಆಕ್ರೋಶ
--------
✍️ ವರದಿ : ನರೇಂದ್ರಬಾಬು-ಹುಳಿಯಾರು 9448760070
---------
ಹುಳಿಯಾರು:
ಹುಳಿಯಾರು ಪಟ್ಟಣದಲ್ಲಿ ಕಳೆದ ಏಳು ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಜಾಗ ಒದಗಿಸದ ಮತ್ತು ಕಸದ ಸಮಸ್ಯೆಯನ್ನು ಬಗೆಹರಿಸದ ಜಿಲ್ಲಾಡಳಿತದ ವಿರುದ್ಧ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ಕಛೇರಿಯ ಕಾರ್ಯವೈಖರಿ ಮತ್ತು ಸ್ಥಳೀಯ ಸಮಸ್ಯೆಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಸೋಮವಾರ ವಿನೂತನ ಪ್ರತಿಭಟನೆ ನಡೆಸಿತು.
ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ ಈಗಾಗಲೇ ಚಂದ್ರಪ್ಪ ಬಣದ ರೈತ ಸಂಘವು 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ KRS ಪಕ್ಷವು ಈ ವಿನೂತನ ಪ್ರತಿಭಟನೆಗೆ ಮುಂದಾಯಿತು.ಕೆ.ಆರ್.ಎಸ್. ಪಕ್ಷದ ಪ್ರಮುಖ ಕಾರ್ಯಕರ್ತರಾದ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು,ಮಹಿಳೆಯರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.ಪಟ್ಟಣ ಪಂಚಾಯಿತಿ ಕಛೇರಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಏಳು ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಜಾಗವನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಸ ವಿಲೇವಾರಿಗೆ ಸೂಕ್ತ ಸೌಲಭ್ಯ ನೀಡದೆ, ಪಟ್ಟಣ ಪಂಚಾಯಿತಿಯು ಮಾತ್ರ ಸಾರ್ವಜನಿಕರಿಂದ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.ಸ್ಥಳೀಯ ಕುಂದುಕೊರತೆಗಳು, ಅಭಿವೃದ್ಧಿ ಕಾಮಗಾರಿಗಳ ವಿಳಂಬ ಮತ್ತು ಪಾರದರ್ಶಕತೆಯ ಕೊರತೆಯ ಕುರಿತು ಮಲ್ಲಿಕಾರ್ಜುನ್ ಅವರು ಮಾತನಾಡಿ ಕಸವನ್ನು ಈ ರೀತಿ 'ದೀಪಾವಳಿ ಉಡುಗೊರೆ'ಯಾಗಿ ಕಳುಹಿಸುವುದು, ಕರ್ತವ್ಯ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳಿಗೆ ಜನರು ವ್ಯಕ್ತಪಡಿಸುತ್ತಿರುವ ಅಸಮಾಧಾನದ ಸಂಕೇತವಾಗಿದೆ.ಅಧಿಕಾರಿಗಳಿಗೆ ಈಗಲಾದರೂ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳಾದ ತಹಸಿಲ್ದಾರ್ರವರ ಅಧಿಕಾರ ವೈಫಲ್ಯತೆ ವಿರುದ್ಧ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತೀವ್ರ ವಾಗ್ದಾಳಿ ನಡೆಸಿದರುಪ್ರತಿಭಟನೆಯ ಭಾಗವಾಗಿ ಮಹಿಳೆಯರು ಮನೆಯಿಂದ ತಂದಿದ್ದ ಕಸವನ್ನು ಉಡುಗೊರೆ ರೂಪದಲ್ಲಿ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಅವರಿಗೆ ರವಾನಿಸಲಾಯಿತು.ಪಂಚಾಯಿತಿಯಲ್ಲಿನ ಸಮಸ್ಯೆಗಳ ಕುರಿತು ಪಕ್ಷವು ಕಣ್ಣಿಟ್ಟಿದ್ದು, ಸ್ಥಳೀಯರ ಹಕ್ಕುಗಳಿಗಾಗಿ ಕೆ.ಆರ್.ಎಸ್. ಪಕ್ಷವು ಸದಾ ಹೋರಾಟ ನಡೆಸಲಿದೆ," ಎಂದು ಭರವಸೆ ನೀಡಿದರು.ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ನೀಡಲು ಆಗ್ರಹಿಸಿ ನಡೆದ ಈ ಪ್ರತಿಭಟನೆಯಿಂದಾಗಿ ಜಿಲ್ಲಾಡಡಳಿತ, ಹುಳಿಯಾರು ಪಟ್ಟಣ ಪಂಚಾಯಿತಿ ಆಡಳಿತದ ಮೇಲೆ ತೀವ್ರ ಒತ್ತಡವಿದ್ದು, ಜಿಲ್ಲಾಡಳಿತ ಹಾಗೂ ಪಂಚಾಯಿತಿ ಆಡಳಿತವು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ