ಅಧಿಕಾರಿಗಳ ವಚನಭ್ರಷ್ಟತೆ ವಿರುದ್ಧ ರೈತರ ಕಿಡಿ – ಸಮಸ್ಯೆ ಬಗೆಹರಿಯಲಿಲ್ಲವಾದರೆ ಚಳುವಳಿ ತೀವ್ರಗೊಳಿಸುವ ಎಚ್ಚರಿಕೆ.
ಹುಳಿಯಾರು: ಪಟ್ಟಣ ಪಂಚಾಯಿತಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ರೈತ ಸಂಘ ಮತ್ತೊಮ್ಮೆ ಹೋರಾಟದ ಹಾದಿ ಹಿಡಿದಿದೆ.ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ರಾಜ್ಯ ರೈತ ಸಂಘದ ಚಂದ್ರಪ್ಪ ಬಣದ ರೈತರು ಇಂದು ಪುನಃ ಪ್ರತಿಭಟನೆ ನಡೆಸಿ, ಬರುವ ಗುರುವಾರ (ಅಕ್ಟೋಬರ್ 9) ರಿಂದ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಭರವಸೆ ನೀಡಿ ಸ್ಪಂದಿಸಿಲ್ಲ : ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ಕೆಂಕೆರೆ ಬಸವರಾಜು ಮಾತನಾಡಿ ನಾವು ಕಳೆದ ಬಾರಿ ನಡೆಸಿದ ಪ್ರತಿಭಟನೆಯಲ್ಲಿ ಅಧಿಕಾರಿಗಳು ಪಾಲ್ಗೊಂಡು ಶೌಚಾಲಯ, ಕುಡಿಯುವ ನೀರು ಹಾಗೂ ಸಂತೆ ಸ್ಥಳದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ ಕಾರಣಕ್ಕೆ ನಾವು ಧರಣಿಯನ್ನು ಮುಂದೂಡಿದ್ದೆವು. ಆದರೆ ಗಡುವು ಮುಗಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗುರುವಾರದಿಂದ ಅಹೋರಾತ್ರಿ ಸತ್ಯಾಗ್ರಹ ಆರಂಭಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಹೋರಾಟ ತೀವ್ರಗೊಳ್ಳಲಿದೆ : ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ ಮಾತನಾಡಿ, “ನಾವು ಮೊದಲ ಹಾಗೂ ಎರಡನೇ ಬಾರಿ ಧರಣಿ ನಡೆಸಿದ್ದಾಗ ಅಧಿಕಾರಿಗಳು ಸ್ಪಂದಿಸುವಂತೆ ಕಂಡಿದ್ದರು. ಆದರೆ ಈಗ ಮತ್ತೆ ಮೌನವಾಗಿದ್ದಾರೆ. ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದರೂ ಕೂಡ ಸ್ಪಂದಿಸದಿರುವುದು ಬೇಸರದ ಸಂಗತಿ. ಹೀಗಾಗಿ ಗುರುವಾರ ಬೆಳಗ್ಗೆ 11 ಗಂಟೆಯಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಘೋಷಿಸಿದರು.
ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅವರು ಸೆಪ್ಟೆಂಬರ್ 29ರಂದು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಕೆ.ಪುರಂದರ ಮತ್ತು ತುಮಕೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಯೋಗಾನಂದ ಅವರುಗಳು ಬಂದಿದ್ದು, ಎಂಟು ದಿನಗಳ ಗಡುವು ಕೇಳಿದ್ದರು. ಆದರೆ ಈಗ ಗಡುವು ಮುಗಿಯುವ ಹೊತ್ತಿಗೆ ಯಾವುದೇ ಕ್ರಮವಾಗಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ 9-10-25ರಿಂದ ಅಹೋರಾತ್ರಿ ಚಳುವಳಿಯನ್ನು ಹಮ್ಮಿಕೊಂಡಿದ್ದೇವೆ. ಹಳ್ಳಿಗಳ ರೈತರು ದಿಂಬು ಹೊದಿಕೆ ಸಮೇತ ಬಂದು ಈ ಹೋರಾಟದಲ್ಲಿ ಭಾಗವಹಿಸುವರು ಎಂದು ಹೇಳಿದರು.
ರೈತರ ಹಕ್ಕಿಗಾಗಿ ಹೋರಾಟ : ಅಧಿಕಾರಿಗಳ ವಚನಭ್ರಷ್ಟತೆ ವಿರುದ್ಧ ಕಿಡಿ ಕಾರಿದ ಅವರು ನಾವು ಯಾರ ಸಹಾಯ ಕೇಳುತ್ತಿಲ್ಲ, ನಮ್ಮ ಹಕ್ಕು ಕೇಳುತ್ತಿದ್ದೇವೆ. ತೆರಿಗೆ ಕಟ್ಟುತ್ತಿರುವ ಜನರ ಬೇಡಿಕೆಗಳನ್ನು ಈಡೇರಿಸುವುದು ಆಡಳಿತದ ಕರ್ತವ್ಯ. ಆದರೆ ಅವರ ಪ್ರತಿಕ್ರಿಯೆ ಇಲ್ಲವಾದ್ದರಿಂದ ಈ ಚಳುವಳಿ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಹುಳಿಯಾರು ಪಟ್ಟಣದ ಸಂತೆ ಬೀದಿ, ಬಸ್ ನಿಲ್ದಾಣ ಹಾಗೂ ಫುಟ್ಪಾತ್ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡಬಾರದು ಎಂದು ರೈತ ಸಂಘ ಮನವಿ ರೂಪದಲ್ಲಿ ಹ್ಯಾಂಡ್ಬಿಲ್ಸ್ ಹಂಚುವ ನಿರ್ಧಾರವನ್ನೂ ಅವರು ಘೋಷಿಸಿದರು.
ಪ್ರಮುಖ ಬೇಡಿಕೆಗಳು :
1.ಹಾಲಿ ನಡೆಯುತ್ತಿರುವ ಕಿರಿದಾದ ಸಂತೆ ಸ್ಥಳವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾಗಕ್ಕೆ ಸ್ಥಳಾಂತರಿಸುವುದು
2.ಹಾಲಿ ಸಂತೆ ಜಾಗದಲ್ಲಿ ಕುಡಿಯುವ ನೀರು, ನೆರಳು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು
3.ಬಸ್ ನಿಲ್ದಾಣದ ಶೌಚಾಲಯವನ್ನು ಸಾರ್ವಜನಿಕರಿಗೆ ಮುಕ್ತಿಗೊಳಿಸುವುದು
ಹೋರಾಟದಲ್ಲಿ ಹುಳಿಯಾರು ಹೋಬಳಿ ಅಧ್ಯಕ್ಷ ಬಸವರಾಜು, ತಾಲೂಕು ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಪ್ರಶಾಂತ್, ಜಗದೀಶ್, ನಿಂಗಪ್ಪ, ಪುಟ್ಟಯ್ಯ, ಪುಷ್ಪಮ್ಮ, ಲಕ್ಷ್ಮಿ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.
---------------
ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಬೇಡಿಕೆಗಳ ಈಡೇರಿಕೆಯಾಗದಿದ್ದರೆ ಹುಳಿಯಾರಿನ ಜನಪರ ಸಂಘಟನೆಗಳ ಸಹಕಾರದೊಂದಿಗೆ ಅಹೋರಾತ್ರಿ ಚಳುವಳಿ ನಿರಂತರವಾಗಲಿದೆ : ಚಂದ್ರಪ್ಪ
--------------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ