ಹುಳಿಯಾರು ರೈತ ಸಂಘದ ಧರಣಿ 12ನೇ ದಿನಕ್ಕೆ: ಕರ್ನಾಟಕ ರಕ್ಷಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯಿಂದ ಸಂಪೂರ್ಣ ಬೆಂಬಲ- ಪ್ರತಿಭಟನೆಯ ಕಾವು ಹೆಚ್ಚಳ
ಹುಳಿಯಾರನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಗ್ರಾಮದ ಕಸ ವಿಲೇವಾರಿ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೈತ ಸಂಘದ ಅಧ್ಯಕ್ಷ ಚಂದ್ರಣ್ಣನವರ ನೇತೃತ್ವದಲ್ಲಿ ರೈತರು ಸ್ವಚ್ಛತೆ ಹಾಗೂ ಕಸ ವಿಲೇವಾರಿಗೆ ಸೂಕ್ತ ಜಾಗ ಒದಗಿಸುವಂತೆ ಹಾಗೂ ವಾರಕ್ಕೊಮ್ಮೆ ನಡೆಯುವ ಸಂತೆ ಎಪಿಎಂಸಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಧರಣಿ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ಗವಿರಂಗನಾಥ ಗೌಡಿ ಅವರು ಸುಮಾರು 5-10 ಕಿಲೋಮೀಟರ್ ವ್ಯಾಪ್ತಿಯೊಳಗೆ ಕಸ ವಿಲೇವಾರಿಗೆ ಜಾಗ ಲಭ್ಯವಿದೆ. ಆದರೆ ಅಧಿಕಾರಿಗಳು 'ಇದು ಅರಣ್ಯ ಇಲಾಖೆಗೆ ಸಂಬಂಧಿಸಿದೆ' ಎಂದು ಹೇಳುತ್ತಾ ನಿಷ್ಕಾಳಜಿ ತೋರುತ್ತಿದ್ದಾರೆ. ಅಧಿಕಾರಿಗಳು ಈ ರೀತಿ ತಪ್ಪು ಮಾಹಿತಿ ನೀಡುವುದೇಕೆ ಎಂದು ಪ್ರಶ್ನಿಸಿದರು. ರೈತರ ಧರಣಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಅವರು ರೈತ ಸಂಘದವರ ಈ ಹೋರಾಟ ಯಶಸ್ವಿಯಾಗುವವರೆಗೆ ತಾವು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಿಮ್ಮಗಳ ಜೊತೆ ಇರುವುದಾಗಿ ಭರವಸೆ ನೀಡಿದರು. ಈ ದೀಪಾವಳಿಯನ್ನು ಕೂಡ ರೈತರ ಜೊತೆ ಧರಣಿ ಸ್ಥಳದಲ್ಲೇ ಆಚರಿಸಿದ್ದಾಗಿ ಅವರು ತಿಳಿಸಿದರು.
ಆಡಳಿತಕ್ಕೆ ತೀವ್ರ ತರಾಟೆ:
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ ಕಳೆದ 12 ದಿನಗಳಿಂದ ಜಿಲ್ಲಾಡಳಿತವಾಗಲೀ, ತಾಲ್ಲೂಕು ಆಡಳಿತವಾಗಲೀ, ಯಾವುದೇ ಅಧಿಕಾರಿಗಳಾಗಲೀ ಸ್ಥಳಕ್ಕೆ ಬಂದು ಸ್ಪಂದಿಸಿಲ್ಲ. ಚಳಿ, ಮಳೆ, ಗಾಳಿ, ಮನೆ, ಮಠ ಎಲ್ಲವನ್ನೂ ಬಿಟ್ಟು ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಚ್ಚಗೆ ಊಟ ಮಾಡಿ ಮಲಗುವ ಅಧಿಕಾರಿಗಳಿಗೆ ರೈತರ ಕಷ್ಟ ಅರ್ಥವಾಗುವುದಿಲ್ಲವೇ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಸದ ಸಮಸ್ಯೆಯನ್ನು ಬಗೆಹರಿಸಲಾಗದ ನೀವು ಏನನ್ನು ಮಾಡಲು ಸಾಧ್ಯ.ಇಕ್ಕಟ್ಟಾಗಿರುವ ಸಂತೆ ಸ್ಥಳವನ್ನು ಎಪಿಎಂಸಿಗೆ ವರ್ಗಾಯಿಸಿ ಎಂದು ರೈತರು ಕೇಳುತ್ತಿದ್ದಾರೆ. ಇದನ್ನು ಬಗೆಹರಿಸಲು ಇವರಿಗೆ 12 ದಿನವಾದರೂ ಸಾಧ್ಯವಾಗುತ್ತಿಲ್ಲ ಏಕೆ? ಎಂದು ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರಿಗೆ ಮನವಿ :
ಸ್ಥಳೀಯ ಶಾಸಕರು ಕೂಡ 12 ದಿನಗಳಿಂದ ನಡೆಯುತ್ತಿರುವ ಈ ಸತ್ಯಾಗ್ರಹಕ್ಕೆ ಗಮನ ಹರಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್ ನಿಮಗೆ ಮತ ಒಂದೇ ಸಾಕಾ? ಜನರ ಕಷ್ಟ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ನೀವು ಆದಷ್ಟು ಬೇಗ ಕಸ ವಿಲೇವಾರಿಗೆ ಒಂದು ಜಾಗ ಮಾಡಿಕೊಡದಿದ್ದರೆ, ಮುಂದೆ ದೊಡ್ಡ ಹೋರಾಟಗಳನ್ನು ಮಾಡಬೇಕಾಗುತ್ತದೆ. ಹುಳಿಯಾರನ್ನು ಬಂದ್ ಮಾಡುವ ಪರಿಸ್ಥಿತಿ ಬರಬಹುದು. ಅದರ ಎಲ್ಲ ಜವಾಬ್ದಾರಿಯೂ ನೀವೇ ಹೊರಬೇಕಾಗುತ್ತದೆ ಎಂದು ಅವರು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ಘೋಷಿಸಿದ್ದು, ಫಲಿತಾಂಶ ಸಿಗುವವರೆಗೂ ರೈತ ಸಂಘದೊಂದಿಗೆ ನಿಲ್ಲುವುದಾಗಿ ಸಂಘಟನೆಗಳ ಮುಖಂಡರು ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಘಟಕದ ಸಂಚಾಲಕ ತಮ್ಮಡಿಹಳ್ಳಿ ನಾಗರಾಜು ಮಾತನಾಡಿ ರೈತ ಸಂಘದ ವತಿಯಿಂದ ಹುಳಿಯಾರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
ವಿಶಾಲವಾದ ಜಾಗದಲ್ಲಿ ಮಾರುಕಟ್ಟೆ ನಡೆದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ ಮತ್ತು ರೈತರು ವ್ಯಾಪಾರ ಮಾಡಲು ವ್ಯವಸ್ಥಿತ ಜಾಗ ಲಭ್ಯವಾಗುತ್ತದೆ, ಅಧಿಕಾರಿಗಳು ಈ ಕೂಡಲೇ ರೈತರ ಬೇಡಿಕೆಗೆ ಸ್ಪಂದಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮೆಡಿಕಲ್ ಚನ್ನಬಸವಯ್ಯ, ನಂದಾವಡಗಿ ಮಾತನಾಡಿದರು.
ಇಂದಿನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ, ತಾಲೂಕು ಅಧ್ಯಕ್ಷ ಕರಿಯಪ್ಪ, ದಲಿತ ಸಂಘರ್ಷ ಸಮಿತಿಯ ಹುಳಿಯಾರಿನ ಸಂಚಾಲಕ ತಮ್ಮಡಿಹಳ್ಳಿ ನಾಗರಾಜು ,ಕಾರ್ಯದರ್ಶಿ ಪುಟ್ಟಯ್ಯ, ಓಂಕಾರಮ್ಮ, ಕೆಂಕೆರೆ ಗೊಲ್ಲರಹಟ್ಟಿಯ ಪೆದ್ದಾ ಭೋವಿ, ವಳಗೆರೆಹಳ್ಳಿ ಚಂದ್ರಶೇಖರ್, ಹೂವಿನ ತಿಮ್ಮಯ್ಯ,ನೀರಾ ಈರಣ್ಣ ,ಸಾಹಿತಿ ರಘು ತಿಮ್ಮರಾಜು ಮೊದಲಾದವರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ