ದವಸ ಧಾನ್ಯ ಮಳೆಗೆ ನೆನೆಯದಂತೆ ಕೊಠಡಿ ನೀಡಲು ಆಗ್ರಹ
-------------
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರಪ್ಪ ಬಣದಿಂದ ಸಂತೆ ಮೈದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ. ರೈತರ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ರೈತರು ಕಳೆದ ಎರಡು ಹಂತದ ಚಳುವಳಿಗಳ ನಂತರ ಇದೀಗ ಮೂರನೇ ಬಾರಿಯ ಅಹೋರಾತ್ರಿ ಧರಣಿಯನ್ನು ಎಂಟನೇ ದಿನಕ್ಕೆ ಮುಂದುವರಿಸಿದ್ದಾರೆ. ಈ ಹಿಂದೆ ತುಮಕೂರು ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ನಾಳೆಯಿಂದಲೇ' ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ಇತ್ತ ತಲೆ ಹಾಕಿಲ್ಲ ಮತ್ತು ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಅಧಿಕಾರಗಳು ಸ್ಪಂದಿಸುತ್ತಿಲ್ಲ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ (ಚೀಫ್ ಆಫೀಸರ್) ಅವರು ರೈತರ ಹೋರಾಟಕ್ಕೆ ಸ್ಪಂದಿಸದೆ, ಇಲ್ಲಸಲ್ಲದ ಪಿತೂರಿಗಳನ್ನು ಮಾಡುತ್ತಿದ್ದಾರೆ, ರೈತರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಬೇರೆ ಸಂಘ-ಸಂಸ್ಥೆಗಳಿಗೆ ಪಿತೂರಿ ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ದೂರಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದ ಅಧಿಕಾರಿಗಳು, ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ, ಹಾಗಾಗಿ ನಾವು ಆಕ್ರೋಶದಿಂದ ಮಾತನಾಡಲು ತಲುಪಿದ್ದೇವೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಪದಾರ್ಥಗಳು ನೆನೆಯದಂತೆ, ಕೊಠಡಿಗೆ ಆಗ್ರಹ :
ಕಳೆದ ಎರಡು ದಿನಗಳಿಂದ ಮೋಡದ ವಾತಾವರಣ ಉಂಟಾಗಿದ್ದು, ಮಳೆ ಮತ್ತು ಗಾಳಿಗೆ ತಾವುಗಳು ದಾನಿಗಳಿಂದ ಸಂಗ್ರಹಿಸಿ ತಂದಿರುವ ಅಕ್ಕಿ, ಬೇಳೆ, ತರಕಾರಿ, ಆಹಾರ ಪದಾರ್ಥಗಳು ನೆನೆದು ಹಾಳಾಗುವ ಸಂಭವವಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈ ಆಹಾರ ಪದಾರ್ಥಗಳನ್ನು ಜೋಪಾನಮಾಡಬೇಕಾಗಿರುವುದರಿಂದ, ಹುಳಿಯಾರು ಪಟ್ಟಣ ಪಂಚಾಯಿತಿಯವರಲ್ಲಿ ಕೂಡಲೇ ಒಂದು ಕೊಠಡಿಯನ್ನು (ಕೋಣೆಯನ್ನು) ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಡುವಂತೆ ರೈತ ಸಂಘದವರು ಮನವಿಯನ್ನು ಸಲ್ಲಿಸಿದ್ದಾರೆ. ಆಹಾರ ಪದಾರ್ಥಗಳನ್ನು ಇಡಲು ತಕ್ಷಣ ಕೊಠಡಿ ನೀಡುವಂತೆ ತಮ್ಮ ಬೇಡಿಕೆಯನ್ನು ರೈತರು ಇಟ್ಟಿದ್ದಾರೆ.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ : ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ, ಇನ್ನು ಮೂರು ದಿನಗಳ ನಂತರ ಅಹೋರಾತ್ರಿ ಧರಣಿಯನ್ನು 'ಅಮರಣಾಂತ ಉಪವಾಸ' ಸತ್ಯಾಗ್ರಹವನ್ನಾಗಿ ಪರಿವರ್ತಿಸಲು ರೈತರು ತಯಾರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ