ಹುಳಿಯಾರಿನ ಪಟ್ಟಣ ಪಂಚಾಯಿತಿ ಮುಂದೆ ನಡೆಯುತ್ತಿರುವ ಪ್ರತಿಭಟನೆ 23ನೇ ದಿನಕ್ಕೆ
ನಾಳೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ನಿರ್ಧಾರ
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಚಂದ್ರಪ್ಪ ಅವರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ಇಂದು 23ನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸ್ಪಂದಿಸದ ಕಾರಣ, ನಾಳೆ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಬೆಳಿಗ್ಗೆ 6 ಗಂಟೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ.ಆರೋಪ: ತಹಸಿಲ್ದಾರ್, ತುಮಕೂರು ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾಧಿಕಾರಿ, ಜಿಲ್ಲಾ ಎಪಿಎಂಸಿ ಉಪನಿರ್ದೇಶಕರು, ಶಾಸಕರು ಮತ್ತು ಉಪ ವಿಭಾಗಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ದಂಡೇ ಬಂದು ಮಾತುಕತೆ ನಡೆಸಿದರೂ, ಬೇಡಿಕೆಗಳ್ಯಾವುವೂ ಸಂಪೂರ್ಣವಾಗಿ ಈಡೇರಿಲ್ಲ. ಅರ್ಧಂಬರ್ಧವಾಗಿದ್ದು ಯಾವುದೂ ಪೂರ್ಣರೂಪಕ್ಕೆ ಜಾರಿಯಾಗಿಲ್ಲ ಮತ್ತು ಆಗುವ ಲಕ್ಷಣವೂ ಕಾಣುತ್ತಿಲ್ಲ ಎಂದು ಚಂದ್ರಪ್ಪ ಆರೋಪಿಸಿದ್ದಾರೆ.
ಎಚ್ಚರಿಕೆ: ಜಿಲ್ಲಾಡಳಿತಕ್ಕೆ ಮತ್ತು ಶಾಸಕರಿಗೆ ಬೇಡಿಕೆ ಈಡೇರಿಸಲು ಎಂಟು ದಿನ ಮತ್ತು ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಕಸ ವಿಲೇವಾರಿ ಘಟಕ ನಿರ್ಮಾಣ ಅಥವಾ ಇತರೆ ಬೇಡಿಕೆಗಳು ಈಡೇರಿಲ್ಲ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳಿಗೆ ನೀಡಿದ್ದ ಗಡುವು ಮುಗಿದಿದ್ದು, ಬೇಡಿಕೆಗಳು ಈಡೇರಿಸುವ ಮನಸ್ಸಿದ್ದರೆ ರಾತ್ರಿಯೊಳಗೆ ಬಂದು ಮಾತನಾಡಬೇಕು ಎಂದು ಚಂದ್ರಪ್ಪ ಆಗ್ರಹಿಸಿದ್ದಾರೆ.
ದೃಢ ನಿಲುವು: ಉಪವಾಸ ಕುಳಿತ ಮೇಲೆ ಯಾವುದೇ ಕಾರಣಕ್ಕೂ ಏಳುವುದಿಲ್ಲ. ಮುಖ್ಯಮಂತ್ರಿಯೇ ಬಂದು ಮಾತನಾಡಿದರೂ ಪ್ರಯೋಜನವಿಲ್ಲ. ಬೇಡಿಕೆ ಈಡೇರಿಸುವ ಆದೇಶ ಪತ್ರ ತಂದರಷ್ಟೇ ಉಪವಾಸ ಅಂತ್ಯಗೊಳ್ಳುತ್ತದೆ. ಕೇವಲ ಬಾಯಿಮಾತಿಗೆ ಜಗ್ಗುವುದಿಲ್ಲ ಎಂದು ಅವರು ದೃಢವಾಗಿ ನುಡಿದಿದ್ದಾರೆ. "ಜೀವ ಹೋದರೂ ಸರಿ, ನಮ್ಮ ಧ್ಯೇಯ ಈಡೇರಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ಚಂದ್ರಪ್ಪ ತಿಳಿಸಿದರು.
ಬೆಂಬಲ ಮತ್ತು ಸಮ್ಮುಖ: ಇಂದಿನ 23ನೇ ದಿನದ ಹೋರಾಟಕ್ಕೆ ಯಳನಾಡು-ಅರಸೀಕೆರೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿ ಕೇಂದ್ರ ಮಹಾಸ್ವಾಮಿಜಿಗಳು ಆಗಮಿಸಿದ್ದರು. ಅವರ ಸಮ್ಮುಖದಲ್ಲಿಯೇ ಚಂದ್ರಪ್ಪ ಈ ನಿರ್ಣಯವನ್ನು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಡಗಿ ರಾಮಣ್ಣ, ಕಾರ್ಯದರ್ಶಿ ಧನಂಜಯ ಮೂರ್ತಿ, ಪೈಲ್ವಾನ್ ಜಯಣ್ಣ, ನಂದಾವಾಡಗಿ, ಎಬಿವಿಪಿ ಗುರುಪ್ರಸಾದ್, ಬಸವರಾಜು, ಪ್ರಶಾಂತ್, ಲಕ್ಷ್ಮಿ, ಜಯಲಕ್ಷ್ಮಮ್ಮ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.











ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ