ಸವಾಲುಗಳೇ ಇಂದಿನ ಯಶಸ್ಸಿಗೆ ಭದ್ರ ಬುನಾದಿ: ದೊಡ್ಡಬಿದರೆಯಲ್ಲಿ ಇಸ್ರೋ ವಿಜ್ಞಾನಿ ಡಾ. ಆರ್. ಶ್ರೀನಿವಾಸ್ ಸ್ಫೂರ್ತಿದಾಯಕ ನುಡಿ
---------------------
ಹುಳಿಯಾರು : ಸಮೀಪದ ದೊಡ್ಡಬಿದರೆಯಲ್ಲಿರುವ ಜೆ.ಸಿ.ಎಂ. ಇಂಟರ್ನ್ಯಾಷನಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ತಾರಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬಾಹ್ಯಾಕಾಶ ವಿಜ್ಞಾನ ಜಾಗೃತಿ' ಕಾರ್ಯಕ್ರಮದಲ್ಲಿ ಹೈದರಾಬಾದಿನ ಇಸ್ರೋ ವಿಜ್ಞಾನಿ ಡಾ. ಆರ್. ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರೇರಣೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಇಸ್ರೋ ಪಯಣದ ರೋಚಕ ಇತಿಹಾಸ :ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಆರ್. ಶ್ರೀನಿವಾಸ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಅತ್ಯಂತ ಕಠಿಣ ಹಾದಿಯನ್ನು ದಾಟಿ ಇಂದು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದರು.
1963ರಲ್ಲಿ ಕೇರಳದ ತುಂಬಾದಲ್ಲಿರುವ ಒಂದು ಸಣ್ಣ ಚರ್ಚ್ನಲ್ಲಿ ಆರಂಭವಾದ ಭಾರತದ ಬಾಹ್ಯಾಕಾಶ ಪಯಣ, ಇಂದು ಚಂದ್ರಯಾನ ಮತ್ತು ಮಂಗಳಯಾನದಂತಹ ಬೃಹತ್ ಸಾಧನೆಗಳನ್ನು ಮಾಡಿದೆ ಎಂದು ಹೆಮ್ಮೆಯಿಂದ ಸ್ಮರಿಸಿದರು.ಆರಂಭದಲ್ಲಿ ವಿಜ್ಞಾನಿಗಳು ರಾಕೆಟ್ ಬಿಡಿಭಾಗಗಳನ್ನು ಸೈಕಲ್ ಮತ್ತು ಎತ್ತಿನ ಬಂಡಿಗಳ ಮೇಲೆ ಸಾಗಿಸುತ್ತಿದ್ದ ಶ್ರಮವನ್ನು ಸ್ಮರಿಸಿದ ಅವರು, ಅಂದಿನ ಆ ಸವಾಲುಗಳೇ ಇಂದಿನ ಜಾಗತಿಕ ಯಶಸ್ಸಿಗೆ ಭದ್ರ ಬುನಾದಿಯಾಗಿದೆ ಎಂದರು.ತಾಂತ್ರಿಕ ಮಾಹಿತಿ: ರಾಕೆಟ್ಗಳು ಭೂಮಿಯಿಂದ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ತಲುಪಿಸಲು ಸಾರಿಗೆ ವಾಹನಗಳಂತೆ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಸರಳವಾಗಿ ವಿವರಿಸಿದರು. ವಿವಿಧ ಮಾದರಿಯ ರಾಕೆಟ್ ಉಡಾವಣೆ, ಸ್ಯಾಟಲೈಟ್ ಅಪ್ಲಿಕೇಶನ್ ಸೆಂಟರ್ನ ಕಾರ್ಯವೈಖರಿ ಹಾಗೂ ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಮೂಲಕ ಸಿಗುವ ಹವಾಮಾನ ವರದಿ ಮತ್ತು ಸಂವಹನ ಸೇವೆಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.ವಿದ್ಯಾರ್ಥಿಗಳಿಗೆ ಕರೆ: 'ಸ್ಟೂಡೆಂಟ್ ಔಟ್ರೀಚ್' ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಭವಿಷ್ಯದ ವಿಜ್ಞಾನಿಗಳಾಗಲು ಇಂದಿನಿಂದಲೇ ಕುತೂಹಲ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜ್ಞಾನದ ಹಸಿವು ಬೆಳೆಸಿಕೊಳ್ಳಿ:ತಾರಾ ಫೌಂಡೇಶನ್ನ ವಿಶ್ವೇಶ್ವರಯ್ಯ ಅವರು ಮಾತನಾಡಿ, ಕೇವಲ ಮಾಹಿತಿ ಸಂಗ್ರಹಣೆಗಿಂತ ಅದನ್ನು ಜ್ಞಾನವಾಗಿ ಪರಿವರ್ತಿಸಿ ಪ್ರಬುದ್ಧತೆ ಸಾಧಿಸುವ ಮೂಲಕ 'ಜೀನಿಯಸ್' ಆಗಿ ರೂಪುಗೊಳ್ಳಬೇಕು. ನಮ್ಮ ರಕ್ತದಲ್ಲೇ ಇರುವ ಜ್ಞಾನದ ಶಕ್ತಿಯಿಂದಾಗಿ ಇಂದು ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭಾರತೀಯರೇ ವಿಜ್ಞಾನಿಗಳಾಗಿ, ಪ್ರೊಫೆಸರ್ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಸೀಮಿತವಾಗದೆ, ಅಮೆರಿಕದಂತಹ ದೇಶಗಳ ಮಾದರಿಯಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಹೊಸ ಆವಿಷ್ಕಾರಗಳನ್ನು ಮಾಡುವ ಸಂಶೋಧಕರಾಗಿ ಬೆಳೆಯಬೇಕು. ಹಣ ಸಂಪಾದನೆಗಿಂತ ದೇಶ ಕಟ್ಟುವ ಕೆಲಸಕ್ಕೆ ಜ್ಞಾನ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ. ಮಾಧುಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾರಾ ಫೌಂಡೇಶನ್ನ ಸುರೇಶ್, ಬಸವರಾಜು, ಜೆ.ಸಿ.ಎಂ ಇಂಟರ್ನ್ಯಾಷನಲ್ ಸ್ಕೂಲ್ ಮುಖ್ಯಸ್ಥ ನಿರಂಜನ ಆರಾಧ್ಯ, ಪ್ರಿನ್ಸಿಪಾಲ್ ರಘು, ಕಾಡಶೆಟ್ಟಿಹಳ್ಳಿ ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ್, ಪಟ್ಟಣ ಪಂಚಾಯಿತಿ ಸದಸ್ಯೆ ಬಿಬಿ ಫಾತಿಮಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ