ಹುಳಿಯಾರು ಪಟ್ಟಣ ಪಂಚಾಯಿತಿಯ 2024- 25 ನೇ ಸಾಲಿನ ಆಯವ್ಯಯ ಮಂಡನೆ
ಕೋರಂ ಕೊರತೆಯಿಂದ ತಡವಾಗಿ ಆರಂಭವಾದ ಸಭೆ
ಆಯವ್ಯಯದ ಪ್ರಮುಖ ಅಂಕಿ ಅಂಶ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಣೆ ನೀಡಿದ ಅಧ್ಯಕ್ಷ ಕಿರಣ್ ಕುಮಾರ್
------------------------------
✍️ ನರೇಂದ್ರಬಾಬು-ಹುಳಿಯಾರು- 9448760070
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ 2024- 25 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷ ಕಿರಣ್ ಕುಮಾರ್ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು 16,91,63,000 ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ 16,58,51,000 ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 65,40,586 ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು.
ಗುರುವಾರ ಬೆಳಗ್ಗೆ 11 ಗಂಟೆಗೆ ಆಯವ್ಯಯ ಸಭೆ ಕರೆಯಲಾಗಿದ್ದು ಪಂಚಾಯಿತಿಯ ಪೌರಕಾರ್ಮಿಕರಾದ ರಾಜಣ್ಣ ನಿಧನರಾಗಿದ್ದ ಹಿನ್ನೆಲೆಯಲ್ಲಿ ಸಭೆ ತಡವಾಗಿ ಪ್ರಾರಂಭವಾಯಿತಾದರೂ ಪಂಚಾಯಿತಿ ಮಳಿಗೆ ಹರಾಜು ಮಾಡಲು ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂಬ ಕಾರಣವೊಡ್ಡಿ, ಕೆಲವರು ಗೈರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ 16 ಸದಸ್ಯರ ಪೈಕಿ ಕೇವಲ 8 ಜನ ಸದಸ್ಯರು ಪಾಲ್ಗೊಳ್ಳುವುದರ ಮೂಲಕ ಸಭೆ ಕಡೆಗೂ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪ್ರಾರಂಭವಾಯಿತು.
ಅಧ್ಯಕ್ಷ ಕಿರಣ್ ಕುಮಾರ್ 2024-25 ನೇ ಸಾಲಿನ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜನೆಯ ಪಟ್ಟಿಯನ್ನು ಓದುವುದರ ಮೂಲಕ ಬಜೆಟ್ ಮಂಡಿಸಿದರು.
ಬಜೆಟ್ ಪ್ರಮುಖ ಅಂಶಗಳು :
ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 95 ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿಂದ 27 ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 45 ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ- ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ 1 ಕೋಟಿ 32 ಲಕ್ಷ ರೂಪಾಯಿ,ಎಸ್ ಎಫ್ ಸಿ ವಿಶೇಷ ಮತ್ತು ಇತರೆ ಮೂಲಗಳಿಂದ 3 ಕೋಟಿ 19 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
ಖರ್ಚು-ವೆಚ್ಚ : ಹುಳಿಯಾರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ವೇತನಕ್ಕೆ 1 ಕೋಟಿ 20 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
ಪಟ್ಟಣ ಪಂಚಾಯಿತಿ ಆಡಳಿತ ವೆಚ್ಚ ಮತ್ತು ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನ ಖರೀದಿ ಇನ್ನಿತರ ವೆಚ್ಚಗಳಿಗಾಗಿ 82.14 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 50 ಲಕ್ಷ ರೂಪಾಯಿ, ಉದ್ಯಾನವನ ನಿರ್ಮಿಸಲು 25 ಲಕ್ಷ ರೂಪಾಯಿ, ಕಚೇರಿ ಉಪಯೋಗ ಮತ್ತು ಅಗತ್ಯ ಪೀಠೋಪಕರಣ ಖರೀದಿಗೆ 9 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
ಹುಳಿಯಾರು ಪಟ್ಟಣ ಪಂಚಾಯಿತಿಯ ನಾಗರೀಕರಿಗೆ ದಿನನಿತ್ಯದ ಅತ್ಯವಶ್ಯಕವಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ ರಸ್ತೆ ಮತ್ತು ಚರಂಡಿ ಬೀದಿ ದೀಪ ಸ್ವಚ್ಛತೆ ನಿರ್ವಹಣೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಕೊಳವೆಬಾವಿ ಕೊರೆಸುವುದು, ಪೈಪ್ಲೈನ್ ನಿರ್ಮಾಣ, ವಿದ್ಯುತ್ ವೆಚ್ಚ, ಶುದ್ಧ ಕುಡಿಯುವ ನೀರಿನ ಘಟಕ ,ಸಾಮಗ್ರಿ ಖರೀದಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಒಟ್ಟು ಅಂದಾಜು 293 ಲಕ್ಷ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ ಎಂದರು.
2024 25 ನೇ ಸಾಲಿನ ಪಟ್ಟಣ ಪಂಚಾಯಿತಿಯ ಆಯವ್ಯಯದ ಘೋಷ್ವಾರೆ ಹೀಗಿದೆ.
ಪ್ರಾರಂಭಿಕ ಶಿಲ್ಕು ರೂ 32,28,586
ನೀರಿಕ್ಷಿತ ಆದಾಯ. ರೂ.16,91,63,000
ನಿರೀಕ್ಷಿತ ಖರ್ಚು ರೂ.16,58,51,000
ಆಖೈರು ಶಿಲ್ಕು ರೂ. 65,40,586
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರುತಿ ಸನತ್, ಸದಸ್ಯರುಗಳಾದ ಹೇಮಂತ ಕುಮಾರ್, ಚಂದ್ರಶೇಖರರಾವ್, ಬೀಬೀ ಫಾತಿಮಾ, ರತ್ನಮ್ಮ ,ಸಂಧ್ಯಾ ಕಿರಣ್ ಕುಮಾರ್, ಪ್ರೀತಿ ರಾಘವೇಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗಭೂಷಣ್, ಇಂಜಿನಿಯರ್ ಮಂಜುನಾಥ್ ಸೇರಿದಂತೆ ಸಿಬ್ಬಂದಿಗಳಿದ್ದರು.
-------------------------------
ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳು ಹರಾಜು ಮಾಡಲು ಕೋರ್ಟ್ ಆದೇಶವಿದ್ದರೂ ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲು ನಿರ್ಲಕ್ಷಿಸುತ್ತಿದ್ದಾರೆ.ಮೊದಲು ಪಂಚಾಯಿತಿ ಮಳಿಗೆ ಹರಾಜು ಹಾಕಿಸಿದ ನಂತರ ಆಯವ್ಯಯ ಸಭೆ ಮಾಡಿ ಎಂದು ಆರೋಪಿಸಿ ಬಹುತೇಕ ಸದಸ್ಯರು ಗೈರಾಗಿದ್ದು ಇಂದಿನ ಸಭೆಯ ವಿಶೇಷವಾಗಿತ್ತು.
---------------------------------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ