ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ; ಶಾಂತಿಯುತ ಆಚರಣೆಗೆ ಸಿಪಿಐ ಜನಾರ್ಧನ್ ಕರೆ ಹುಳಿಯಾರು : ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವವನ್ನು ಯಾವುದೇ ಅಹಿತಕರ ಘಟನೆ ಅಥವಾ ಸಮಸ್ಯೆಗೆ ಎಡೆಮಾಡಿಕೊಡದಂತೆ, ಸೌಹಾರ್ದಯುತವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಜನಾರ್ದನ್ ಅವರು ಸಾರ್ವಜನಿಕರಿಗೆ ಸೂಚನೆ ನೀಡಿದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಹನುಮ ಜಯಂತಿ ಹಬ್ಬದ ಪೂರ್ವಭಾವಿಯಾಗಿ, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ಸೌಹಾರ್ದಯುತ ಆಚರಣೆಗೆ ಒತ್ತು : ಪಟ್ಟಣದಲ್ಲಿ ಇದುವರೆಗೂ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮವು ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಸೌಹಾರ್ದಯುತವಾಗಿ ನಡೆಯಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದು ಜನಾರ್ದನ್ ತಿಳಿಸಿದರು. ಸಾರ್ವಜನಿಕರ ಸಹಕಾರವೇ ಅಪರಾಧ ನಿಯಂತ್ರಣದಲ್ಲಿ ಶೇ. 90ರಷ್ಟು ಪಾತ್ರ ವಹಿಸುತ್ತದೆ. ಪೊಲೀಸರ ಪಾತ್ರ ಕೇವಲ ಶೇ. 10ರಷ್ಟು ಮಾತ್ರ ಇರುತ್ತದೆ. ಆದ್ದರಿಂದ ಸಾರ್ವಜನಿಕರ ಸಹಕಾರವೇ ನಮಗೆ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ಶಿಸ್ತು ಮತ್ತು ಕಾ...