ಶಾಸಕ ಸಿ.ಬಿ. ಸುರೇಶ್ಬಾಬು ಅವರಿಂದ ಸಂತೆ ಸ್ಥಳ ವೀಕ್ಷಣೆ: ಎಪಿಎಂಸಿ ಮುಂಭಾಗದಲ್ಲಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ
ಕಾಯಂ ಸಂತೆ ನಿರ್ಮಾಣಕ್ಕೆ ಒತ್ತು: ಎಪಿಎಂಸಿ ಮುಂಭಾಗದ ಜಾಗವನ್ನು ಕಾಯಂ ಸಂತೆ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವಂತೆ ಈ ಹಿಂದೆ ಒತ್ತಾಯಿಸಲಾಗಿತ್ತು. ಶಾಸಕರು ಈ ಬೇಡಿಕೆಗೆ ಸಮ್ಮತಿಸಿದ್ದು, ಕಳೆದ ಎರಡು ದಿನಗಳಿಂದ ಟಿಪ್ಪರ್ಗಳ ಮೂಲಕ ಮಣ್ಣು ಸುರಿಸಿ ಸ್ಥಳವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶಾಸಕರು, ಕಾಮಗಾರಿ ಗುಣಮಟ್ಟದಿಂದ ಹಾಗೂ ತ್ವರಿತವಾಗಿ ನಡೆಯುವಂತೆ ಇಂಜಿನಿಯರ್ಗಳಿಗೆ ಸೂಚಿಸಿದರು.
ಚರಂಡಿ ಬಗ್ಗೆ ಗಮನ: ಸಂತೆ ಸ್ಥಳದ ಪಕ್ಕದಲ್ಲಿ ಹರಿಯುತ್ತಿರುವ ಚರಂಡಿಯ ಸಮಸ್ಯೆ ಬಗ್ಗೆಯೂ ಶಾಸಕರು ಗಮನಹರಿಸಿದರು. ಈ ಕುರಿತು ರಾಷ್ಟ್ರೀಯ ಹೆದ್ದಾರಿ (NH) ಇಂಜಿನಿಯರ್ ಅವರೊಂದಿಗೆ ತಕ್ಷಣ ಮಾತನಾಡಿ, ಚರಂಡಿ ಮುಚ್ಚುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಮಾರುಕಟ್ಟೆಗೆ ಬರುವ ಜನರಿಗೆ ಯಾವುದೇ ತೊಂದರೆ ಆಗದಂತೆ, ಸ್ಥಳವು ಸಂಪೂರ್ಣ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಲು ಶಾಸಕರು ಆದೇಶಿಸಿದರು.
ಅಧಿಕಾರಿಗಳ ಭೇಟಿ :ಈ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಪ್ತಶ್ರೀ ಮತ್ತು ತಹಸೀಲ್ದಾರ್ ಪುರಂದರ ಅವರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತೆ ಸ್ಥಳಾಂತರ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕೌನ್ಸಿಲರ್ ಹೇಮಂತ್, ಮಾಜಿ ಸದಸ್ಯ ರಾಘವೇಂದ್ರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎನ್. ಕುಮಾರ್, ಮಾಜಿ ಉಪಾಧ್ಯಕ್ಷ ಗಣೇಶ್, ಪಟ್ಟಣ ಪಂಚಾಯಿತಿ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಇತರ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ