ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ರೈತ ಸಂಘದ ಮುಖಂಡ ಚಂದ್ರಪ್ಪ ಅವರ ನೇತೃತ್ವದಲ್ಲಿ ಕಳೆದ 26 ದಿನಗಳಿಂದಲೂ ನಡೆಯುತ್ತಿದ್ದ ಅಹೋರಾತ್ರಿಯ ಧರಣಿ ಸೋಮವಾರ ಸಂಜೆ ನಿರ್ಣಾಯಕ ಹಂತಕ್ಕೆ ತಲುಪಿತು.
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ರೈತ ಸಂಘದ ಚಂದ್ರಪ್ಪ ನೇತೃತ್ವದಲ್ಲಿ ಕಳೆದ 26 ದಿನಗಳಿಂದಲೂ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ, ಸೋಮವಾರ ಸಂಜೆ ಶಾಸಕ ಸಿಬಿ ಸುರೇಶ್ ಬಾಬು ಅವರು ತಹಸಿಲ್ದಾರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.
ಧರಣಿ ನಿರತರ ಮೂರು ಬೇಡಿಕೆಗಳು ಮತ್ತು ಅವುಗಳ ಈಡೇರಿಕೆಗೆ ಶಾಸಕರು ನೀಡಿದ ಭರವಸೆಗಳು ಹೀಗಿದೆ:
1. ಶೌಚಾಲಯದ ಸಮಸ್ಯೆ:
ಶಾಸಕರ ಭರವಸೆಯಂತೆ, ಶೌಚಾಲಯದ ನಿರ್ವಹಣೆ ಮಾಡಲು ಈಗಾಗಲೇ ಮುಂದಾಗಿದ್ದು, ನಾಳೆಯಿಂದಲೇ ಅದು ಪ್ರಾರಂಭವಾಗಲಿದೆ ಎಂದರು.
2. ಸಂತೆ ಸ್ಥಳಾಂತರ:
ವಾರಕ್ಕೊಮ್ಮೆ ನಡೆಯುವ ಸಂತೆಯನ್ನು ಎಪಿಎಂಸಿ ಮುಂಭಾಗದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಗುರುತಿಸಲಾದ ಜಾಗವನ್ನು ವ್ಯಾಪಾರದಾರರಿಗೆ ಅನುವು ಮಾಡಿಕೊಡಲು ಮಣ್ಣು ಹೊಡೆಸಿ ಸಮತಟ್ಟು ಮಾಡಿಸಲಾಗುತ್ತಿದ್ದು, ಇದು ಮುಗಿಯಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ ಎಂದರು.
ಸಮತಟ್ಟುಗೊಳಿಸಿದ ತಕ್ಷಣವೇ ತಾವೇ ಖುದ್ದಾಗಿ ತಹಸೀಲ್ದಾರ್ ಅವರೊಂದಿಗೆ ಸ್ಥಳದಲ್ಲಿಯೇ ನಿಂತು ಮಾರ್ಕಿಂಗ್ ಮಾಡಿಸಿ ಸಂತೆ ವ್ಯಾಪಾರಿಗಳಿಗೆ ಹಂಚಿಕೆ ಮಾಡಿಸಿಕೊಡುವೆ ಎಂದರು.ಅಕಸ್ಮಾತ್ ಈ ಬುಧವಾರದೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ, ಈ ವಾರಕ್ಕೆ ಮಾತ್ರ ಪ್ರಸ್ತುತ ಸ್ಥಳದಲ್ಲಿ ಸಂತೆ ನಡೆಯಲಿದೆ. ಆದರೆ, ಮುಂದಿನ ಗುರುವಾರದಿಂದ ಕಡ್ಡಾಯವಾಗಿ ಹೊಸ ಜಾಗದಲ್ಲಿಯೇ ಸಂತೆ ನಡೆಸಲು ಸೂಚಿಸಲಾಗಿದ್ದು, ಅದು ನಿಶ್ಚಿತವಾಗಿದ್ದು , ಈ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ಬೇಡ ಎಂದರು.
3. ತ್ಯಾಜ್ಯ ವಿಲೇವಾರಿ ಘಟಕ (ಕಸ ವಿಲೇವಾರಿ ಘಟಕ):
ಪ್ರಮುಖ ಬೇಡಿಕೆಯಾದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ, ತಹಸಿಲ್ದಾರ್ ಅವರು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಿದ್ದು, ಇದೀಗ ಕಡೆಯದಾಗಿ ನಾಲ್ಕು ಎಕರೆ ಜಾಗವನ್ನು ಗುರುತಿಸಿದ್ದಾರೆ.ಗುರುತಿಸಿದ ಜಾಗಕ್ಕೆ ಮಂಗಳವಾರದಂದು ಎಸಿ ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು, ಇನ್ನು 10 ದಿನಗಳ ಒಳಗಾಗಿ ಆರ್.ಟಿ.ಸಿ ಯಲ್ಲಿ ಎಂಟ್ರಿ ಮಾಡಿಸಲಾಗುವುದು ಎಂದರು.
ಒಮ್ಮೆ ಜಾಗ ಗುರುತಾದ ನಂತರ, ಮುಂದಿನ ಆರು ತಿಂಗಳ ಒಳಗಾಗಿ ನಗರೊತ್ಥಾನ ಇಲಾಖೆಯಿಂದ ಸಂಪೂರ್ಣ ಕಾಮಗಾರಿ ಮುಗಿಸಿ, ಘಟಕ ಕಾರ್ಯಾರಂಭ ಮಾಡುತ್ತದೆ ಎಂದು ಶಾಸಕರು ಭರವಸೆ ನೀಡಿದರು.
ಎಲ್ಲಾ ಮೂರು ಬೇಡಿಕೆಗಳನ್ನು ಇವಾಗಲೇ ಶೇಕಡ 80 ರಷ್ಟು ಮುಗಿಸಿದ್ದು ಇನ್ನು 10 ದಿನದ ಒಳಗೆ ನಿಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲಿದ್ದು, ಈ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಸ್ ತೆಗೆದುಕೊಳ್ಳುವಂತೆ ಶಾಸಕರು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಘದ ಮುಖಂಡ ಚಂದ್ರಪ್ಪ ಅವರು, ಈಗಾಗಲೇ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ಗಮನವಿದೆ. ಧರಣಿ ವಾಪಸ್ ತೆಗೆದುಕೊಳ್ಳುವ ಬಗ್ಗೆ ಇಂದು (ಮಂಗಳವಾರ) ನನಗೆ ಬೆಂಬಲ ನೀಡಿರುವ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ, ಎಲ್ಲರ ಅಭಿಪ್ರಾಯದೊಂದಿಗೆ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು. ಈ ಮೂಲಕ, ರೈತ ಸಂಘದ ಧರಣಿಯ ಅಂತಿಮ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.




ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ