ಹುಳಿಯಾರು ಪತ್ರಕರ್ತನಿಗೆ ಮಾನವೀಯ ನೆರವು: ಮಾಜಿ ತಹಸೀಲ್ದಾರ್ ಟಿ.ಸಿ. ಕಾಂತರಾಜು ಅವರ ಮಾದರಿ ನಡೆ
ಹುಳಿಯಾರು: ದೃಷ್ಟಿಹೀನತೆಯಿಂದ ಬಳಲುತ್ತಿರುವ ಹುಳಿಯಾರಿನ ಪತ್ರಕರ್ತ ರಮೇಶ್ ಅವರಿಗೆ ಮಾಜಿ ತಹಸೀಲ್ದಾರ್ ಮತ್ತು ನಿವೃತ್ತ ಅಧಿಕಾರಿಯಾಗಿರುವ ಟಿ.ಸಿ. ಕಾಂತರಾಜು ಅವರು ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಬಂದಿದ್ದ ಗೌರವ ಸಂಭಾವನೆಗೆ ಇನ್ನಷ್ಟು ಮೊತ್ತವನ್ನು ಸೇರಿಸಿ, ರಮೇಶ್ ಅವರ ಚಿಕಿತ್ಸೆಗೆ ನೀಡಿದ್ದಾರೆ.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಚೀನಿ ಪುರುಷೋತ್ತಮ್ ಅವರು ಈ ಕುರಿತು ಮಾತನಾಡಿ, ಟಿ.ಸಿ. ಕಾಂತರಾಜು ಅವರು ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಈ ಕಾರ್ಯಕ್ಕೆ ಅವರಿಗೆ ನೀಡಿದ ಗೌರವ ಧನವನ್ನು ಸ್ವೀಕರಿಸಲು ಮೊದಲು ನಿರಾಕರಿಸಿದ್ದ ಅವರು, ರಾಜ್ಯ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಸಂಭಾವನೆ ಪಡೆದಿದ್ದರು. ಆದರೆ, ಆ ಸಂಪೂರ್ಣ ಸಂಭಾವನೆಯ ಹಣಕ್ಕೆ ಮತ್ತಷ್ಟು ಮೊತ್ತವನ್ನು ಸೇರಿಸಿ, ಅದನ್ನು ರಮೇಶ್ ಅವರ ಚಿಕಿತ್ಸೆಗಾಗಿ ನೀಡಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಮಾಜಿ ತಹಸೀಲ್ದಾರರಾದ ಕಾಂತರಾಜು ಅವರು ಮೊದಲಿನಿಂದಲೂ ಪತ್ರಕರ್ತರ ಸ್ನೇಹಿತರಾಗಿದ್ದು, ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವ ಉದಾರ ಗುಣವನ್ನು ಹೊಂದಿದ್ದಾರೆ ಎಂದು ಪುರುಷೋತ್ತಮ್ ತಿಳಿಸಿದರು.
ಪ್ರಜಾಪ್ರಗತಿ ಪತ್ರಿಕೆಯ ಸಹ ಸಂಪಾದಕರೂ ಮತ್ತು ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರೂ ಆದ ಟಿ.ಎನ್. ಮಧುಕರ್ ಅವರು ಸಹ ರಮೇಶ್ ಅವರಿಗೆ ಧನ ಸಹಾಯ ಮಾಡಿದರು. ಅಷ್ಟೇ ಅಲ್ಲದೆ, ರಮೇಶ್ ಅವರ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಒದಗಿಸಲು ಮಧುಕರ್ ಅವರು ಪಾವಗಡದ ಸ್ವಾಮಿ ಜಪಾನಂದಜಿ ಮಹಾರಾಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಗತ್ಯ ವ್ಯವಸ್ಥೆ ಮಾಡಿದರು.
ಸ್ವಾಮೀಜಿ ಅವರು ಸಹ ಅಗತ್ಯ ಚಿಕಿತ್ಸೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಶಾಶ್ವತ ನೆರವಿಗೆ ಸಂಘದ ಚಿಂತನೆ :ಈ ಸಂದರ್ಭದಲ್ಲಿ ಮಾತನಾಡಿದ ಹುಳಿಯಾರಿನ ಪತ್ರಕರ್ತ ಕಿರಣ್ ಕುಮಾರ್ , "ಕಾಂತರಾಜು ಮತ್ತು ಮಧುಕರ್ ಅವರ ನೆರವು ಗ್ರಾಮೀಣ ಪತ್ರಕರ್ತರಿಗೆ 'ಯಾರೋ ಒಬ್ಬರು ಆಸರೆಯಾಗಿರುತ್ತಾರೆ' ಎಂಬ ದೊಡ್ಡ ಭರವಸೆ ಮತ್ತು ನೈತಿಕ ಸ್ಥೈರ್ಯವನ್ನು ನೀಡಿದೆ. ಇದುವರೆಗೂ ಗ್ರಾಮೀಣ ಪತ್ರಕರ್ತರ ಕಷ್ಟವು ಅರಣ್ಯರೋದನ ಆಗಿತ್ತು. ಆದರೆ ಜಿಲ್ಲೆಯಿಂದ ಬಂದ ಎಲ್ಲ ಪತ್ರಕರ್ತರು ಸಹಾಯ ಹಸ್ತ ಚಾಚುತ್ತಿರುವುದು ವೃತ್ತಿಯಲ್ಲಿ ಮತ್ತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು.
ಪತ್ರಕರ್ತ ರಮೇಶ್ ಅವರ ಕುಟುಂಬಕ್ಕೆ ಕೇವಲ ನಗದು ಸಹಾಯ ನೀಡಿದರೆ ಅದು ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಕಾರಣಕ್ಕೆ, ಸಂಘವು ಅವರಿಗೆ ಶಾಶ್ವತ ಜೀವನೋಪಾಯದ ಯೋಜನೆ ರೂಪಿಸಲು ಚಿಂತನೆ ನಡೆಸಿದೆ. ಪಿ.ಎಂ.ಎಫ್.ಎಂ.ಇ.ಜಿ. (PM FMEG) ಯೋಜನೆ ಅಡಿಯಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಲು ನೆರವು ನೀಡಲು ತೀರ್ಮಾನಿಸಲಾಗಿದ್ದು, ಈ ಯೋಜನೆಗೆ ಬೇಕಾಗುವ ಡೌನ್ಪೇಮೆಂಟ್ ಹಣವನ್ನು ಹಾಲಿ ಮತ್ತು ಹೊಸ ಸದಸ್ಯರ ಸಹಾಯದಿಂದ ಸಂಗ್ರಹಿಸಿ, ರಮೇಶ್ ಕುಟುಂಬಕ್ಕೆ ಶಾಶ್ವತ ಬದುಕು ಕಲ್ಪಿಸುವುದು ಸಂಘದ ಆಶಯವಾಗಿದೆ ಎಂದು ಕಿರಣ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚೀನಿ ಪುರುಷೋತ್ತಮ್, ಟಿ.ಎನ್. ಮಧುಕರ್, ಚಿಕ್ಕನಾಯಕನಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ್,ಚಿಕ್ಕಣ್ಣ ಸೇರಿದಂತೆ ಹುಳಿಯಾರಿನ ಪತ್ರಕರ್ತರುಗಳಾದ ನರೇಂದ್ರ ಬಾಬು, ಕಿರಣ್, ಆರ್.ಸಿ. ಮಹೇಶ್, ದೇವರಾಜ್,ಶೇಖರ್, ಮತಿಘಟ್ಟ ಆನಂದ್ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ