ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 67ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಶುಕ್ರವಾರ ರಾತ್ರಿ ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶನಿವಾರದಂದು ವಿಸರ್ಜಿಸಲಾಯಿತು.
ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಕೇಶವಾಪುರದ ಕೆರೆಯ ದೊಡ್ಡಗುಂಡಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. |
ಸ್ವಾಮಿಯ ಗಂಗಾಪ್ರವೇಶದ ಅಂಗವಾಗಿ ಕಳೆದ ಮೂರು ದಿನಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರ ಮತ್ತು ಶುಕ್ತವಾರದಂದು ಸಾಂಸ್ಕೃತಿಕಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು.
ದೇವಾಲಯದಿಂದ ಆರಂಭಗೊಂಡ ಸ್ವಾಮಿಯ ಉತ್ಸವ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ, ರಾಂಗೋಪಾಲ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು, ಮೆರವಣಿಗೆ ಸಂದರ್ಭದಲ್ಲಿ ಚಿಟ್ಟಿಮೇಳ, ನಾದಸ್ವರ,ನಾಸಿಕ್ ಡೋಲು,ಲಾರಿ ಡ್ಯಾನ್ಸ್ ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ನಿಲ್ಲಿಸಿ ಗಣಪತಿಗೆ ಹಾಕಿದ್ದ ಹೂವಿನ ಹಾಗೂ ಮೋದಕದ ಹಾರವನ್ನು ಹರಾಜು ಹಾಕಲಾಯಿತು.ನಂತರ ಭಕ್ತರ ಜಯಘೋಶದೊಂದಿಗೆ ಸಮೀಪದ ಹುಳಿಯಾರು ಕೇಶವಾಪುರದ ಕೆರೆಯ ದೊಡ್ಡಗುಂಡಿಯಲ್ಲಿ ಮೂರ್ತಿಯ ಗಂಗಾಪ್ರವೇಶ ಮಾಡಿಸಲಾಯಿತು.
ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಕುಮಾರ್,ತಾಪಂ ಸದಸ್ಯ ಕುಮಾರ್,ವೆಂಕಟರಾಯ, ತಾಂಡವಮೂರ್ತಿ, ಬಾಳೆಕಾಯಿ ಮೂರ್ತಿ,ರಾಜೇಂದ್ರ,ಹೂವಿನ ಬಸವರಾಜು,ಮೆಡಿಕಲ್ ಚಂಬಣ್ಣ, ತಮ್ಮಯ್ಯ, ಕೆಎಂಎಲ್ ಮೂರ್ತಿ,ಕಲ್ಪತರು ಆಗ್ರೋ ಸತೀಶ್,ಅರ್ಚಕ ರಾಜಗೋಪಾಲ್ ಸೇರಿದಂತೆ ಹಲವಾರು ಮಂದಿ ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು.ಮೆರವಣಿಗೆ ಶಾಂತಿಯುತವಾಗಿ ಸಾಗಲು ಪೋಲಿಸ್ ಭದ್ರತೆ ಏರ್ಪಡಿಸಲಾಗಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ