ಸಮುದಾಯದ ಒಗ್ಗಟ್ಟೇ ಅಭಿವೃದ್ಧಿಗೆ ದಾರಿ ಎಂದು ವೆಂಕೋಬ ಕರೆ
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶ್ರೀಭಗೀರಥ ವಿದ್ಯಾನಿಧಿ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ತಾಲೂಕು ಭಗೀರಥ ಉಪ್ಪಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಭಗೀರಥ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಹುಳಿಯಾರಿನ ಕೋಡಿಪಾಳ್ಯದ ಸಮೀಪದ ಶ್ರೀ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಘಾಟನೆಯನ್ನು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ್ ನೆರವೇರಿಸಿದರು.
ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು, ಮಕ್ಕಳಲ್ಲಿ ಸ್ಪೂರ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಶೈಕ್ಷಣಿಕ ಸಾಧನೆಗೆ ನೀಡುವ ಪುರಸ್ಕಾರವು ಅತ್ಯುತ್ತಮ ವೇದಿಕೆ ಎಂದು ಹೇಳಿದರು. ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದು ಫಲಿತಾಂಶ ಬರುವಂತೆ ಮಾಡಲಾಗುವ ಪುರಸ್ಕಾರ ಕಾರ್ಯಕ್ರಮಗಳನ್ನು, ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವರ್ಷದವರೆಗೆ ಉತ್ತಮ ಸಾಧನೆ ಮಾಡುವ ಪ್ರೇರಣೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳು ದಿನಕ್ಕೆ ಕೇವಲ ಆರು ಗಂಟೆಗಳು ಶಾಲೆಯಲ್ಲಿ ಇರುತ್ತಾರೆ. ಉಳಿದ ಸಮಯ ಮನೆಯಲ್ಲಿ ಇರುತ್ತಾರೆ. ಪೋಷಕರ ನಡವಳಿಕೆ, ಮಾತನಾಡುವ ರೀತಿ ಮತ್ತು ಬದುಕಿನ ಮೌಲ್ಯಗಳೇ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಅವರು ಪೋಷಕರ ಜವಾಬ್ದಾರಿಯನ್ನು ನೆನಪಿಸಿದರು.
ಸಮಾಜದ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗಾಗಿ ತಮ್ಮ ಶಾಸಕರ ನಿಧಿಯಿಂದ ಈಗಾಗಲೇ ₹50 ಲಕ್ಷ ಬಿಡುಗಡೆ ಮಾಡಿರುವುದಾಗಿ ಸುರೇಶ್ ಬಾಬು ತಿಳಿಸಿದರು. ಭಗೀರಥ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿರುವುದಾಗಿ ಹೇಳಿದರು. ಹುಳಿಯಾರಿನ ಪೊಲೀಸ್ ಸರ್ಕಲ್ ಬಳಿ ಭಗೀರಥ ಪೀಠದ ಪುತ್ಥಳಿ ಮತ್ತು ದಾರ್ಶನಿಕರ ಪ್ರತಿಮೆ ಅನಾವರಣದ ಕೆಲಸ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ರಾಜಕೀಯದಿಂದ ಜಾತ್ಯಾತೀತ ವಾತಾವರಣಕ್ಕೆ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ, ಸಮಾಜದ ಎಲ್ಲಾ ವರ್ಗಗಳು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಮತ್ತು ದಾರ್ಶನಿಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬ ಅವರು ಭಗೀರಥ ಭಾವಚಿತ್ರವನ್ನು ಅನಾವರಣ ಮಾಡಿ ಮಾತನಾಡಿ, ಸಮುದಾಯದ ಬಲವೇ ಸಂಘಟನೆ ಎಂದು ಹೇಳಿದರು. ಸಮುದಾಯಕ್ಕೆ ನಾವು ಏನು ಕೊಡುಗೆ ನೀಡಬೇಕು ಎಂಬುದರ ಬಗ್ಗೆ ಮೊದಲಿಗೆ ಯೋಚಿಸಬೇಕು. ರಾಜಕೀಯ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಮುದಾಯದಲ್ಲಿ ಬಿರುಕುಂಟು ಮಾಡಬಾರದು. ಒಗ್ಗಟ್ಟೇ ನಮಗೆ ಹಕ್ಕುಗಳನ್ನು ತಂದುಕೊಡಬಲ್ಲ ಏಕೈಕ ಶಕ್ತಿ ಎಂದು ಹೇಳಿದರು. ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಸರ್ಕಾರ ಮತ್ತು ನಿಗಮ ನೀಡುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದೂ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಲೇಶ್ ಅವರು ಮಾತನಾಡಿ, ಭಗೀರಥ ಸಮುದಾಯದ ಮಕ್ಕಳು IAS, KAS ಮೊದಲಾದ ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಂಡು ಓದಬೇಕು ಎಂಬುದು ಸಮುದಾಯದ ಆಶಯ ಎಂದು ಹೇಳಿದರು. ಮಕ್ಕಳು ಉತ್ತಮ ವಿದ್ಯಾವಂತರಾಗಿ ಸಮುದಾಯಕ್ಕೆ ಮಾನ–ಗೌರವ ತರಬೇಕು ಎಂಬುದೇ ಕನಸು ಎಂದ ಅವರು ಸಮುದಾಯ ಮೊದಲು ಒಗ್ಗಟ್ಟಾಗಬೇಕು, ಸಂಘಟನೆ ಬಲವಾಗಬೇಕು, ಸರ್ಕಾರದ ಸೌಲಭ್ಯಗಳು ಸಮುದಾಯದ ಪ್ರತಿಯೊಬ್ಬರಿಗೂ ತಲುಪುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಧಾರವಾಡದ ಕ್ಲಾಸಿಕ್ ಸಮೂಹ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಎಸ್. ಉಪ್ಪಾರ್ ಅವರು ಈ ಸಂದರ್ಭದಲ್ಲಿ ಉಪನ್ಯಾಸ ನೀಡಿ, ಭಗೀರಥ ಸಮಾಜದ ಸಾಂಸ್ಕೃತಿಕ ಮತ್ತು ಆರ್ಥಿಕ ಪುನರುತ್ಥಾನದ ಅವಶ್ಯಕತೆ ಕುರಿತು ಪ್ರಸ್ತಾಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ವಹಿಸಿದ್ದರು. ತುಮಕೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಸಂಘದ ಅಧ್ಯಕ್ಷ ಹನುಮಂತಯ್ಯ, ಡಾ. ದೇವರಾಜು, ಸಂಘದ ಖಜಾಂಚಿ ರವೀಂದ್ರನಾಥ್, ತಮ್ಮಡಿಹಳ್ಳಿ ಶಿವಯ್ಯ, ನಂದಿಹಳ್ಳಿ ಸಿದ್ಬಸವಯ್ಯ, ಹೊಸಹಳ್ಳಿ ರಾಜಣ್ಣ, ಗೂಬೆಹಳ್ಳಿ ಬಸವರಾಜು, ರಂಗಾಪುರ ರಂಗಧಾಮಯ್ಯ, ಕಲ್ಲಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಕಾರ್ಯಕ್ರಮದ ವೇಳೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭಗೀರಥ ವಿದ್ಯಾನಿಧಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉನ್ನತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಮತ್ತು ನೂತನ ನೌಕರರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ