ಶೃಂಗೇರಿ ಜಗದ್ಗುರುಗಳಿಂದ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನಕ್ಕೆ 2 ಲಕ್ಷ ರೂ. ದೇಣಿಗೆ
-----------------------
ಸುಮಾರು 750 ವರ್ಷಗಳ ಇತಿಹಾಸವಿರುವ ದೇವಿಯ ನೂತನ ದೇವಾಲಯ ನಿರ್ಮಾಣಕ್ಕೆ ಆಶೀರ್ವಾದ
--------------------
ಹುಳಿಯಾರು : ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರದ ಕೋಟೆಬಾಗಿಲು ಹೊಸಬೀದಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಯವರ ನೂತನ ದೇವಾಲಯ ನಿರ್ಮಾಣಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತಿ ತೀರ್ಥ ಮಹಾ ಸ್ವಾಮೀಜಿ ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು 2 ಲಕ್ಷ ರೂಪಾಯಿ ದೇಣಿಗೆಯ ಚೆಕ್ ಅನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಆಶೀರ್ವದಿಸಿದ್ದಾರೆ.
750 ವರ್ಷಗಳ ಇತಿಹಾಸ : ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆಬಾಗಿಲು ಹೊಸಬೀದಿಯಲ್ಲಿ ನೆಲೆಸಿರುವ ಸುಮಾರು 750 ವರ್ಷಗಳ ಇತಿಹಾಸವಿರುವ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿ, ಕಾರಣಿಕ ದೈವ ಧೂತರಾಯ ಸ್ವಾಮಿ, ನಾಗ ಪರಿವಾರ ದೇವತೆ, ಮುಖ್ಯಪ್ರಾಣ ಅಭಯಆಂಜನೇಯಸ್ವಾಮಿ, ಮತ್ತು ಮಹಾ ಶಕ್ತಿ ಗಣಪತಿ ದೇವರ ದೇವಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಮ್ಮನವರ ಅಪ್ಪಣೆಯಂತೆ ಕೇರಳ ಮಾದರಿಯಲ್ಲಿ ವಿನೂತನವಾಗಿ ದೇವಾಲಯ ನಿರ್ಮಿಸಲಾಗುತ್ತಿದ್ದು, ದೇವಾಲಯ ಜೀರ್ಣೋದ್ಧಾರ ಸಮಿತಿ, ಟ್ರಸ್ಟ್, ಸದ್ಭಕ್ತರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಈಗಾಗಲೇ ಶೀಲಾಸ್ಥಾಪನೆ ಮತ್ತು ಷಡಾಧಾರ ಪ್ರತಿಷ್ಠಾಪನೆ ಪೂರ್ಣಗೊಂಡಿದೆ. ಇನ್ನುಳಿದ ಕಟ್ಟಡ ಕಾಮಗಾರಿ ಕೆಲಸ ಪ್ರಾರಂಭಿಸಲು ಸಿದ್ಧತೆ ನಡೆದಿದೆ.
ಈ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿಯವರು ಶೃಂಗೇರಿ ಜಗದ್ಗುರುಗಳ ಸಹಕಾರ ಹಾಗೂ ಆಶೀರ್ವಾದ ಕೋರಿ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಜಗದ್ಗುರುಗಳು, ಶ್ರೀ ಶಾರದಾ ಪರಮೇಶ್ವರಿ ಸಹಿತ ಚಂದ್ರಮೌಳೇಶ್ವರ ಸ್ವಾಮಿಯ ಆಶೀರ್ವಾದದೊಂದಿಗೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ಜೀರ್ಣೋದ್ಧಾರ ಮಾಡಲು ಸಂಕಲ್ಪಿಸಿರುವ ವಿಚಾರವು ಅತೀವ ಸಂತೋಷ ತಂದಿದ್ದು ದೇವಾಲಯದ ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ಆಶಿಸಿ ದೇವಾಲಯದ ನವೀಕರಣ ಕಾರ್ಯಕ್ಕೆ ಆಶೀರ್ವಾದದೊಂದಿಗೆ ₹2,00,000 (ಎರಡು ಲಕ್ಷ ರೂಪಾಯಿ) ದೇಣಿಗೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಠದ ಆಡಳಿತ ಅಧಿಕಾರಿಗಳಾದ ಪೂಜ್ಯ ಶ್ರೀ ಮುರಳಿ ಅವರು ಮಾತನಾಡಿ, "ಪೂಜ್ಯರ ಆಶೀರ್ವಾದದಿಂದ ಅಮ್ಮನವರ ದೇವಾಲಯದ ಕಾರ್ಯ ಶೀಘ್ರವಾಗಿ ನೆರವೇರಲಿ" ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಚಿ.ನಿ ಪುರುಷೋತ್ತಮ್, ಖಜಾಂಚಿ ರಂಗರಾಜ ಅರಸ್, ಟ್ರಸ್ಟಿಗಳಾದ ರವಿಕುಮಾರ್, ರಾಜಶೇಖರ್, ಅಕ್ಷತ, ಲಕ್ಷ್ಮೀಶ, ಬ್ರಿತಿ, ರಾಘವ್ ಉಪಸ್ಥಿತರಿದ್ದರು. ಶ್ರೀ ಮಠದ ಸಹಕಾರಕ್ಕೆ ದೇವಾಲಯದ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರಂಗಸ್ವಾಮಿ ಸಿ.ಎನ್. ರವರು ಗೌರವಪೂರ್ವಕವಾಗಿ ಜಗದ್ಗುರುಗಳ ಪಾದಕಮಲಗಳಿಗೆ ನಮನ ಸಲ್ಲಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ