ಚಿಕ್ಕನಾಯಕನಹಳ್ಳಿ ತಾಲೂಕು ಕಲೆ, ಸಂಸ್ಕೃತಿಯ ತವರೂರು: ಡಾ. ಲಕ್ಷ್ಮಣದಾಸ್
ಹುಳಿಯಾರು : ಈ ನೆಲವು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಜಾನಪದ, ರಂಗಕಲೆ ಮತ್ತು ಶಿಲ್ಪ ಕಲೆಗಳ ತವರೂರು. ಇಲ್ಲಿ ಹಲವಾರು ದಿಗ್ಗಜ ಕಲಾವಿದರು ಜನಿಸಿದ್ದಾರೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದಸೂಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮ ಪಂಚಾಯಿತಿ ದಸೂಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್.ಬಿ. ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 'ಸಾಂಸ್ಕೃತಿಕ ಸೌರಭ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಹಲವು ದಿಗ್ಗಜರನ್ನು ನಾಡಿಗೆ ನೀಡಿದೆ. ತೀನಂಶ್ರೀ, ಸಾ.ಶಿ. ಮರುಳಯ್ಯ, ಎಸ್.ಜಿ. ಸಿದ್ದರಾಮಯ್ಯ, ನಟರಾಜ್ ಹುಳಿಯಾರು ಅವರಂತಹ ಮಹನೀಯರು ಇಲ್ಲಿ ಜನಿಸಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜಾನಪದ ಅಕಾಡೆಮಿ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ ಅವರು ಜಾನಪದ ಉಳಿಸುವ ಕೆಲಸ ಮಾಡುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾಪ್ರದರ್ಶನಗಳ ಮೂಲಕ ಸಂಸ್ಕೃತಿ ರಕ್ಷಣೆ
ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿರುವ ದಸೂಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸಂಗೀತ, ಸಾಹಿತ್ಯ, ಜಾನಪದ, ಯಕ್ಷಗಾನ, ಗೊಂಬೆಯಾಟ, ಬಯಲಾಟ ಮತ್ತು ರಂಗಕಲೆಗಳ ಬಗ್ಗೆ ನೃತ್ಯದ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಕಲಾಭಿಮಾನಿಗಳಿಗೆ ಮನರಂಜನೆ ನೀಡುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿದೆ ಎಂದು ಹೇಳಿದರು.
ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ಅಗತ್ಯ
ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದು ಸಂತೋಷ ತಂದಿದೆ. ಕಲಾಭಿಮಾನಿಗಳು ಕೇವಲ ಸಿನಿಮಾ ಮಾತ್ರವಲ್ಲದೆ ಜನಪದ, ಹರಿಕಥೆ, ಸುಗಮ ಸಂಗೀತ, ಯಕ್ಷಗಾನಗಳಂತಹ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ರಾಜ್ಯ, ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸುಮಾರು 200ಕ್ಕೂ ಹೆಚ್ಚು ಕಲಾವಿದರು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡಲು ಬಂದಿರುವುದು ವಿಶೇಷ ಎಂದರು.
ಕಲಾ ಪ್ರಕಾರಗಳ ಸಂಭ್ರಮ
ಕಾರ್ಯಕ್ರಮದಲ್ಲಿ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಂಡವು. ತುಮಕೂರಿನ ಡಾ. ಲಕ್ಷ್ಮಣದಾಸ್ ತಂಡದ ರಂಗಗೀತೆ, ಕೆಂಕೆರೆ ಮಲ್ಲಿಕಾರ್ಜುನ ತಂಡದ ಸುಗಮ ಸಂಗೀತ, ಕಲಾಶ್ರೀ ನರಸಿಂಹದಾಸ್ ತಂಡದ ಕಥಾ ಕೀರ್ತನ, ಸಂತೋಷ್ ತಂಡದ ಗಾರುಡಿಗೊಂಬೆ, ಲಿಂಗದೇವರು ತಂಡದ ನಾಸಿಕ್ ಡೋಲು, ದಸೂಡಿ ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘದ ಸೋಬಾನೆ ಪದ, ಉಮ್ಲಾನಾಯ್ಕನ ತಾಂಡ್ಯದ ಸೇವಾಲಾಲ್ ಸಂಘದಿಂದ ಲಂಬಾಣಿ ನೃತ್ಯ, ಕೆ.ಜಿ. ಹಟ್ಟಿ ತಂಡದ ಸೋಬಾನೆ ಪದ ಮತ್ತು ದಸೂಡಿ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಂದ ಚಿಟ್ಟಿಮೇಳ ಹಾಗೂ ಕಳಸದ ನೃತ್ಯಗಳು ವಿಜೃಂಭಣೆಯಿಂದ ನಡೆದವು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ. ನಾಗೇಶ್ ದಸೂಡಿ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರನ್ನು ಸನ್ಮಾನಿಸಿದರು. ಶಿಕ್ಷಣ ಕ್ಷೇತ್ರದಿಂದ ಡಾ. ಶಿವರಾಜ್, ರೈತ ಚಳುವಳಿಯಿಂದ ನಾಗರಾಜ್, ರಂಗಕಲೆಯಿಂದ ದಬ್ಬಗುಂಟೆ ಮೂರ್ಕಣ್ಣಪ್ಪ, ಪ್ರಗತಿಪರ ರೈತ ಹನುಮಯ್ಯ, ಸಾಹಿತ್ಯದಿಂದ ಕೆ. ಮರಿಯಪ್ಪ, ರಂಗ ನಿರ್ದೇಶನದಿಂದ ಡಿ.ಎಂ. ರಂಗನಾಥಪ್ಪ, ಜಾನಪದ ಭಜನೆಯಿಂದ ಡಿ.ಎಚ್. ಕಾಂತರಾಜು ಮತ್ತು ಪ್ರಗತಿಪರ ರೈತ ಅಂಜಿನಪ್ಪ ಅವರನ್ನು ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಮಂಜುಳಚೆನ್ನಯ್ಯ, ಉಪಾಧ್ಯಕ್ಷ ನಾಗರಾಜ್, ವಿ.ಎಸ್.ಎಸ್.ಎನ್. ಅಧ್ಯಕ್ಷ ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ತಾಲ್ಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ, ಸಾಹಿತಿ ಮರಿಯಪ್ಪ, ಪಿಡಿಒ ಮುದ್ದಲಿಂಗಯ್ಯ, ಕನ್ವಿನಿಯರ್ ಡಿ.ಕೆ. ರಂಗನಾಥಪ್ಪ, ರೈತ ಸಂಘದ ಕೆಂಕೆರೆ ಸತೀಶ್, ಗುರುಮೂರ್ತಿ ಮತ್ತು ಮಂಜುನಾಥ್ ಅರಸ್ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ