ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಡವರ ಆಶಾಕಿರಣ: ವಿ. ಹೆಚ್. ರೇವಣ್ಣ
---------------------------
ಹುಳಿಯಾರು : ಕರ್ನಾಟಕ ಗ್ರಾಮೀಣ ಬ್ಯಾಂಕ್ ಗ್ರಾಮೀಣ ಪ್ರದೇಶದ ಬಡವರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬೋರನಕಣಿವೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿ.ಹೆಚ್.ರೇವಣ್ಣ ಹೇಳಿದರು.
ಆರ್ಥಿಕ ಸಾಕ್ಷರತಾ ಶಿಬಿರಕ್ಕೆ ಚಾಲನೆ : ಇತ್ತೀಚೆಗೆ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೊಯ್ಸಳಕಟ್ಟೆ ಶಾಖೆ ಜಂಟಿಯಾಗಿ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಪ್ರತಿ ಹಳ್ಳಿಯ ಮೂಲೆ ಮೂಲೆಯಲ್ಲಿರುವ ಕಡುಬಡವರನ್ನು ಗುರುತಿಸಿ ಸಾಲ ನೀಡುತ್ತಿರುವ ಏಕೈಕ ಬ್ಯಾಂಕ್ ಕರ್ನಾಟಕ ಗ್ರಾಮೀಣ ಬ್ಯಾಂಕ್," ಎಂದು ಅವರು ಶ್ಲಾಘಿಸಿದರು..
ಬ್ಯಾಂಕಿಂಗ್ ಸೌಲಭ್ಯಗಳ ಕುರಿತು ಮಾಹಿತಿ : ಹೊಯ್ಸಳಕಟ್ಟೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ತಿರುಮಲೇಶ್ ಮಾತನಾಡಿ, "ನಮ್ಮ ಬ್ಯಾಂಕು ಬಡ ಜನರಿಗಾಗಿ ಜೀರೋ ಅಕೌಂಟ್/ಜನಧನ್ ಖಾತೆಗಳನ್ನು ತೆರೆಯುತ್ತಿದೆ. ಶಾಲಾ ಮಕ್ಕಳು ಹಾಗೂ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು," ಎಂದು ತಿಳಿಸಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್. ಎಂ. ಕುಮಾರಸ್ವಾಮಿ ಮಾತನಾಡಿ, ಡಿಜಿಟಲ್ ಬ್ಯಾಂಕಿಂಗ್ನ ಮಹತ್ವವನ್ನು ವಿವರಿಸಿದರು. ಮೊಬೈಲ್ ಮೂಲಕವೇ ಬ್ಯಾಲೆನ್ಸ್ ಪರಿಶೀಲಿಸುವುದು, ಸ್ಟೇಟ್ಮೆಂಟ್ಗಳನ್ನು ನೋಡುವುದು, ಹಣ ವರ್ಗಾವಣೆ ಮಾಡುವುದು ಮುಂತಾದ ಸೌಲಭ್ಯಗಳನ್ನು ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಉಪನ್ಯಾಸಕರಾದ ಎ. ವಿ. ನರಸಿಂಹಸ್ವಾಮಿ, ಯೋಗೀಶ್, ಅಜಯ್ ಕುಮಾರ್ , ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ