ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. |
ಹುಳಿಯಾರು : ಪರಿಷತ್ ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯನವರು ಇಂದು(ಗುರುವಾರ) ಪಟ್ಟಣಕ್ಕಾಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ತೇಪೆ ಹಚ್ಚಿ,ಕಸಕಡ್ಡಿ ತೆರವುಗೊಳಿಸಿ ಪಟ್ಟಣವನ್ನು ಸಿಂಗಾರಗೊಳಿಸಲಾಗಿದೆ.ಇದೇ ವೇಳೆ ರಸ್ತೆ ಗುಂಡಿಯ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದ ಲೋಕೋಪಯೋಗಿ ಇಲಾಖೆ ಇದೀಗ ಎಚ್ಚೆತ್ತು ಗುಂಡಿ ಮುಚ್ಚಲು ಮುಂದಾಗಿದ್ದು ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಕಳೆದೆರಡು ವರ್ಷಗಳಿಂದ ಅಪಘಾತಕ್ಕೆ ಕಾರಣವಾಗಿದ್ದ ಈ ರಸ್ತೆಗುಂಡಿ ಮುಚ್ಚಲು ನಡೆದ ಹೋರಾಟಗಳು ಸಫಲವಾಗದಿದ್ದು ಇದೀಗ ಮುಖ್ಯಮಂತ್ರಿಗಳ ಆಗಮನದ ಉದ್ದೇಶದಿಂದ ಗುಂಡಿಮುಕ್ತ ರಸ್ತೆಯಾಗಿಸಲು ಹೊರಟಿರುವ ಇಲಾಖೆಗೆ ಇದುವರೆಗೂ ಶ್ರೀಸಾಮಾನ್ಯರ ಸಾರ್ವಜನಿಕರ ಸಮಸ್ಯೆ ಕಾಡಿರಲಿಲ್ಲವೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿದೆ.
ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. |
ಹೌದು ಪಟ್ಟಣದಿಂದ ಹಾದುಹೋಗಿರುವ ಹೆದ್ದಾರಿಯ ಸಮಸ್ಯೆ ಇಂದುನಿನ್ನೆಯದಲ್ಲ.ಭಾರಿಗುಂಡಿಗಳಿಂದ ತುಂಬಿದ್ದ ಈ ರಸ್ತೆಯು ಬಳಸಲು ಯೋಗ್ಯವಾಗಿಲ್ಲದೆ ಇದಕ್ಕಾಗಿ ನಡೆದ ಹೋರಾಟಗಳು ಕೂಡ ಲೆಖ್ಖಕ್ಕಿಲ್ಲ.ಹುಳಿಯಾರಿನಿಂದ ಶಿರಾ,ಬಾಣಾವಾರ ಅಥವಾ ಹಾಸನಕ್ಕೆ ಹೋಗುವ ರಸ್ತೆ ಬೃಹತ್ ಗುಂಡಿ,ಹೊಂಡಗಳಿಂದ ತುಂಬಿದ್ದು ಇದೇ ಮಾರ್ಗವಾಗಿ ಅನಿವಾರ್ಯವಾಗಿ ಹೋಗಲೇಬೇಕಾಗಿದ್ದ ಪ್ರಯಾಣಿಕರು ಪ್ರಾಣಕಂತಕದಿಂದ ಈ ರಸ್ತೆಯಲ್ಲಿ ಹಾದುಹೋಗಬೇಕಿತ್ತು. ರಸ್ತೆ ಸಮಸ್ಯೆಯಿಂದಾದ ಅಪಘಾತದಿಂದ ಸತ್ತ ಮಂದಿ ಅಥವಾ ಬಿದ್ದು ಕೈಕಾಲು ಮುರಿದುಕೊಂಡವರು ಅದೆಷ್ಟು ಮಂದಿಯೋ ಗೊತ್ತಿಲ್ಲಾ.
ಮೊನ್ನೆಯಷ್ಟೆ ತುಮಕೂರು ಜಿಲ್ಲಾ ಸಚಿವರು ,ಸಂಸದರು ಹಾಗೂ ಶಾಸಕರು ಡೆಲ್ಲಿಯಿಂದ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಿಗೆ ಗುಂಡಿಗಳನ್ನು ಮುಚ್ಚಲು ಹಾಗೂ ಇತರೆ ಕಾಮಗಾರಿಗಳಿಗೆ ೧.೮೯ಕೋಟಿ ಅನುದಾನ ಮಂಜೂರು ಮಾಡಿಸಿರುವುದಾಗಿ ಹೇಳಿ ಕಾಮಗಾರಿಗೆ ಪೂಜಾಕಾರ್ಯಕ್ರಮದ ಮೂಲಕ ಚಾಲನೆ ಕೂಡ ನೀಡಿ ಪ್ರಚಾರ ಪಡೆದುಕೊಂಡಿದ್ದು ಸುಳ್ಳಲ್ಲ.ಆ ಕ್ಷಣಕ್ಕೆ ಮಾತ್ರ ಗುಂಡಿಗೆ ಜಲ್ಲಿ ತುಂಬಿದ ಗುತ್ತಿಗೆದಾರರು ನಂತರ ಅಕ್ಷರಶಹ ಮಾಯವಾಗಿಬಿಟ್ಟರು. ಈ ಬಗ್ಗೆ ಪುನಃ ಸಚಿವರು,ಸಂಸದರುರ ಬಳಿ ಎಡೆತಾಕಿದರೂ ಪ್ರಯೋಜನ ಮಾತ್ರ ಇಲ್ಲವಾಗಿ ಇಲ್ಲಿನ ನಿವಾಸಿಗಳು ಮಾರುದ್ದದ್ದ ಗುಂದಿಗಳಲ್ಲೆ ಓಡಾದುವುದನ್ನು ಅಭ್ಯಾಸಮಾಡಿಕೊಂಡಿದ್ದರು.
ಆದರೆ ಯಾವುದೇ ಹೋರಾಟಗಳಿಂದಲೂ ಆಗದ ಕಾರ್ಯ ಇದೀಗ ಸಿಎಂ ಆಗಮನದ ನಿಮಿತ್ತ ಸಾದ್ಯವಾಗುತ್ತಿದ್ದು ಇವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಬದಿಯಲ್ಲಿರುವ ಕೊರಕಲಿಗೆ ಮಣ್ಣು ಹಾಕಲಾಗುತ್ತಿದೆ.ರಸ್ತೆ ಅಕ್ಕಪಕ್ಕ ತಿಪ್ಪೆ ಹಾಗೂ ಕಸಕಡಿ ತ್ಯಾಜ್ಯಗಳನ್ನೆಲ್ಲಾ ಟ್ರಾಕ್ಟರ್ ಮೂಲಕ ದೂರಕ್ಕೆ ಸಾಗಿಸಲಾಗಿದೆ.ಮಣ್ಣುಹಾಕಿದ ಜಾಗವೆಲ್ಲಾ ರೋಲರ್ ಮೂಲಕ ಸಮತಟ್ಟು ಮಾಡಿ
ಬಿಗಿಮಾಡಲಾಗುತ್ತಿದೆ.ಪಟ್ಟಣದ ಪ್ರವೇಶದ್ವಾರದಿಂದ ಹಿಡಿದು ಬಸ್ ನಿಲ್ದಾನದವರೆಗೂ ರಸ್ತೆ ದುರಸ್ತಿ ಮಾಡಲಾಗಿದೆ. ಒಟ್ಟಾರೆ ಮುಖ್ಯಮಂತ್ರಿಗಳು ಹೆಲಿಪ್ಯಾಡ್ ನಿಂದ ಸಭೆ ನಡೆಯುವ ಜಾಗದವರೆಗೆ ಹಾಗೂ ಮಂತ್ರಿಮಹೋದಯರು ಆಗಮಿಸುವ ಪಟ್ತಣದ ಪ್ರವೇಶದ್ವಾರದವರೆಗೂ ರಸ್ತೆಯ ಗುಂದಿಮುಚ್ಚಿ ಹಾದಿ ಸುಗಮಗೊಳಿಸಲಾಗಿದೆ.
ಮುಖ್ಯಮಂತ್ರಿಗಳ ಅಧಿಕೃತ ಪ್ರವಾಸದ ಪಟ್ಟಿಯಂತೆ ಹುಳಿಯಾರಿಗೆ ೧೧ ಕ್ಕೆ ಆಗಮಿಸುತ್ತಿದ್ದು ಅವರೊಂದಿಗೆ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ತುಮಕೂರು ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಚಿತ್ರದುರ್ಗ ಸಂಸದರಾದ ಚಂದ್ರಪ್ಪ, ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್, ಶಾಸಕರುಗಳಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್,ವಿಧಾನಪರಿಷತ್ತು ಸದಸ್ಯರುಗಳಾದ ವಿ.ಎಸ್. ಉಗ್ರಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್,ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಿಜ್ವಾವಾನ್ ಹರ್ಷದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಷಫೀ ಅಹ್ಮದ್ ಮತ್ತಿತರರು ಉಪಸ್ಥಿತರಿರುವರು ಎನ್ನಲಾಗಿದೆ.
ವಾಸವಿ ಸ್ಕೂಲ್ ಮೈದಾನದಲ್ಲಿ ಹೆಲಿಪ್ಯಾಡ್ ಸಿದ್ದತೆ ಮಾಡಲಾಗಿದೆ.ಸಮಾರಂಭ ನಡೆಯುವ ಜಾಗದಲ್ಲಿ ಭಾರಿ ಪೋಲಿಸ್ ಬಂದೋಬಸ್ತು ಮಾಡಲಾಗಿದೆ. ಇದರ ಉಸ್ತುವಾರಿಯನ್ನು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ವಹಿಸಿಕೊಂಡು ಎರಡು ಬಾರಿ ಹುಳಿಯಾರಿಗೆ ಆಗಮಿಸಿ ಎಲ್ಲಾ ಕೆಲಸಗಳ ಪ್ರಗತಿಯನ್ನು ಗಮನಿಸಿ ಸಲಹೆ ಸೂಚನೆ ನೀಡಿದ್ದಾರೆ.
ಒಟ್ಟಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹುಳಿಯಾರಿಗೆ ವಿಶಿಷ್ಟ ಸ್ಥಾನವಿದ್ದು ಇಲ್ಲಿನ ಮತದಾರರ ಮನದಾಳ ಅರಿಯುವುದು ಯಾವ ಪಕ್ಷದವರಿಗೂ ಇದುವರೆಗೂ ಸಾಧ್ಯವಾಗಿಲ್ಲ.ಹಾಗಾಗಿ ಎಲ್ಲಾ ಚುನಾವಣೆಗಳಲ್ಲೂ ತಾಲ್ಲೂಕ್ ಕೇಂದ್ರವಾದ ಚಿಕ್ಕನಾಯಕನಹಳ್ಳಿಗಿಂತಲೂ ಹುಳಿಯಾರಿಗೆ ಪ್ರಾಮುಖ್ಯತೆ ಹೆಚ್ಚಾಗಿ ನೀಡುತ್ತಿದ್ದು ಇಲ್ಲಿಗೆ ಮಾಜಿ ಪ್ರಧಾನಿ ದೇವೆಗೌಡರಿಂದ ಹಿಡಿದು ರಾಮಕೃಷ್ಣ ಹೆಗ್ಗಡೆ,ಜೆ.ಹೆಚ್.ಪಟೇಲ್, ಬಂಗಾರಪ್ಪ,ಯಡಿಯೂರಪ್ಪ ಇದೀಗ ಸಿದ್ದರಾಮಯ್ಯನವರು ಸೇರಿದಂತೆ ಸಾಕಷ್ಟು ಮಂತ್ರಿಮಹೋದಯರುಗಳು ಹುಳಿಯಾರಿಗೆ ಆಗಮಿಸಿದ್ದರೂ ಸಹ ಇಲ್ಲಿನ ಮತದಾರ ಮಾತ್ರ ನಿರ್ದಿಷ್ಟವಾಗಿ ಇಂತಹುದೆ ಪಕ್ಷ ಎಂದು ಯಾವೊಂದು ಪಕ್ಷದವರಿಗೂ ಮಣೆ ಹಾಕದಿರುವುದು ಇಲ್ಲಿನ ವೈಶಿಷ್ಟ್ಯ.ಅಹಿಂದ ಮತದಾರರೆ ಹೆಚ್ಚಾಗಿರುವ ಹುಳಿಯಾರಿಗೆ ಮುಖ್ಯಮಂತ್ರಿಗಳ ಆಗಮನ ರಾಜಕೀಯ ಲಾಭ ತರಬಲ್ಲದೆ ಎಂದು ಕಾದು ನೋಡಬೇಕಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ