-------------------
ಹುಳಿಯಾರಿನಲ್ಲಿ ಕಿರಣ್ ಕುಮಾರ್ ಅಭಿಮಾನಿ ಬಳಗದಿಂದ ಕೆಎಸ್ಕೆ ಜನ್ಮದಿನದ ಅಂಗವಾಗಿ ಧಾರ್ಮಿಕ ಸಮಾರಂಭ,ಬೈಕ್ ರ್ಯಾಲಿ
---------------------------
ಹುಳಿಯಾರು:ಸಾಕಷ್ಟು ಟೀಕೆಗಳ ನಡುವೆಯೂ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆಯು ಸಾಕಾರಗೊಳ್ಳಲು ಮಾಜಿ ಶಾಸಕ ಕಿರಣ್ ಕುಮಾರ್ ಕಾರಣರಾಗಿದ್ದು, ಅವರ ಕಲ್ಪನೆಯ ಕೂಸಾದ ಹೇಮಾವತಿಯಿಂದ ಜಿಲ್ಲೆಯ ಶೇಕಡ 50ರಷ್ಟು ಕೆರೆಗಳು ತುಂಬಲಿದ್ದು,ಸಂಕಷ್ಟಕ್ಕೆ ಈಡಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಲು ಕಾರಣವಾಗಿದೆ ಎಂದು ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು.
ಹುಳಿಯಾರಿನಲ್ಲಿ ಕೆ.ಎಸ್.ಕಿರಣ್ ಕುಮಾರ್ ಅಭಿಮಾನಿ ಬಳಗದಿಂದ ಮಾಜಿ ಶಾಸಕರು ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಕೆ.ಎಸ್.ಕಿರಣ್ ಕುಮಾರ್ ಅವರ 59ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕಿಗೆ ಹೇಮಾವತಿ ನೀರು ಹರಿಸಲು ಕಿರಣ್ ಕುಮಾರ್ ಹೋರಾಟಗಾರರೊಂದಿಗೆ ಕೈಜೋಡಿಸಿ ಮಂಜೂರಾತಿ ದೊರಕಿಸಿಕೊಳ್ಳಲು ಕಾರಣರಾದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಜಿಎಸ್ ಬಸವರಾಜು ಅವರ ಪರಿಶ್ರಮ ಹಾಗೂ ಕಿರಣ್ ಕುಮಾರ್ ಅವರ ಹೋರಾಟದಿಂದ ಇಂದು ನೀರಿನ ಸಮಸ್ಯೆ ಬಗ್ಗೆ ಹರಿದಿದೆ. 14 ವರ್ಷದಿಂದ ಯಾವುದೇ ಅಧಿಕಾರ ಸಿಗದಿದ್ದರೂ ಸಹ ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗದೆ, ಬಿಜೆಪಿ ಗೆಲ್ಲಿಸಲು ಶ್ರಮಿಸಿದ್ದಾರೆ.ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಕಿರಣ್ ಕುಮಾರ್ ಅವರಾಗಿದ್ದು ಇವರ ಜನಪರ ಕೆಲಸಗಳೇ ಕಿರಣ್ ಕುಮಾರ್ ಅವರಿಗೆ ಶ್ರೀರಕ್ಷೆಯಾಗಿದ್ದು,ಮುಂದಿನ ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಬರಪೀಡಿತ ಪ್ರದೇಶವಾಗಿದ್ದ ಚಿಕ್ಕನಾಯಕನಹಳ್ಳಿಗೆ ಬರಪೂರ ನೀರು ಹರಿಯಲು ಕಿರಣ್ ಕುಮಾರ್ ಅವರು ಕಾರಣರಾಗಿದ್ದು, ಮುಂದಿನ ದಿನಗಳಲ್ಲಿ ಹೇಮಾವತಿ- ಎತ್ತಿನಹೊಳೆ- ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳುವ ಮೂಲಕ ಮೂರರ ಸಂಗಮ ಕ್ಷೇತ್ರ ಚಿಕ್ಕನಾಯಕನಹಳ್ಳಿಯಾಗಲಿದ್ದು, ಇದರಿಂದ ತಾಲೂಕು ಕರ್ನಾಟಕದಲ್ಲಿ ಅತಿ ಉತ್ಪೃಷ್ಟ ನೀರಾವರಿ ತಾಣವಾಗಲಿದೆ ಎಂದರು.ಇಲ್ಲಿನ ನೀರಾವರಿ ಯೋಜನೆಗೆ ಕಿರಣ್ ಕುಮಾರ್ ಅವರ ಕಾಣಿಕೆ ನೆನಪಿನಲ್ಲಿಡುವಂತದ್ದು ಎಂದು ಶ್ಲಾಘಿಸಿದರು.ರಾಜ್ಯ ಬಿಜೆಪಿ ಉಪಾಧ್ಯಕ್ಷ ನಂದೀಶ್ ಮಾತನಾಡಿ ಸೂರ್ಯನಿಗೂ ಗ್ರಹಣ ಕಾಡುತ್ತದೆ. ಹಾಗೆಯೇ ಕಿರಣನಿಗೂ ಗ್ರಹಣ ಕಾಡಿದ್ದು ಸಹಜ. ಇಂದಿನ ಹುಟ್ಟುಹಬ್ಬಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿರುವ ಇಲ್ಲಿರುವ ಅಪಾರ ಜನಸ್ತೋಮ ನೋಡಿದ ಮೇಲೆ ಅವರ ಗ್ರಹಣ ಬಿಟ್ಟಿರುವುದು ಎಲ್ಲರಿಗೂ ವೇದ್ಯವಾಗಿದ್ದು, ಸರ್ವ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವ ಅವರ ಮುಂದಿನ ಹುಟ್ಟುಹಬ್ಬವೂ ಅವರು ಶಾಸಕರಾಗುವ ಮೂಲಕ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಧಾರ್ಮಿಕ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಯಳನಾಡು ಅರಸೀಕೆರೆ ಮಹಾ ಸಂಸ್ಥಾನದ ಶ್ರೀ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿಗಳು ಜನಪರ ಕಾಳಜಿ ಇರುವ ವ್ಯಕ್ತಿ ಕಿರಣ್ ಕುಮಾರ್ ಸಹಸ್ರಾರು ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿರುವುದು ಸಂತೋಷಕರ.ಸಾಗರೋಪಾದಿಯಲ್ಲಿ ಆಗಮಿಸಿರುವ ಅಭಿಮಾನಿಗಳ ಪ್ರೀತಿ ಕಿರಣ್ ಕುಮಾರ್ ಅವರ ಮೇಲಿದ್ದು, ಪುನಹ ಅವರು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಜನ ಋಣ ತೀರಿಸಲಿ ಎಂದು ಆಶೀರ್ವದಿಸಿದರು.ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಚಿತ್ರದುರ್ಗ ಸಿಬಾರ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾ ಸ್ವಾಮೀಜಿ, ನೆಲಮಂಗಲ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾ ಸಂಸ್ಥಾನ ಮಠದ ವಿಭವ ವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ, ಬಿ.ಕೋಡಿಹಳ್ಳಿಯ ಶ್ರೀ ಬಸವ ಬೃಂಗೇಶ್ವರ ಮಹಾಮಠದ ಬಸವ ಬೃಂಗೇಶ್ವರ ಸ್ವಾಮೀಜಿ, ಶಿಡ್ಲೇಕೋಣ ಮಹಾಸಂಸ್ಥಾನದ ಡಾ.ಸಂಜಯಕುಮಾರ ಸ್ವಾಮೀಜಿ,ಚಿತ್ರದುರ್ಗ ಲಂಬಾಣಿ ಪೀಠದ ಸೇವಾಲಾಲ್ ಸರ್ದಾರ್ ಮಹಾ ಸ್ವಾಮೀಜಿ. ಮಾದಿಹಳ್ಳಿ ಶ್ರೀಗಳು. ಜಗಳೂರು ಶ್ರೀಗಳು ಮತ್ತಿತರ ಶ್ರೀಗಳು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬುಳ್ಳೆನಹಳ್ಳಿ ಶಿವಪ್ರಕಾಶ್, ಕಿರಣ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಎಂಎಂ ಜಗದೀಶ್ ,ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಶಂಕ್ರಣ್ಣ, ಮಧುಗಿರಿ ಮಂಜುನಾಥ್, ನಿಟ್ಟೂರು ಪ್ರಕಾಶ್, ಮೈಸೂರಪ್ಪ, ರಮೇಶ್, ತಿಮ್ಮರಾಯಪ್ಪ,ಬೆಳ್ಳಾರ,ಈರಣ್ಣ,ರಾಮಣ್ಣ, ಶಿವಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ಧಾರ್ಮಕ ಸಮಾರಂಭಕ್ಕೂ ಮುನ್ನ ಅಭಿಮಾನಿ ಬಳಗದಿಂದ ಬೈಕ್ ರ್ಯಾಲಿ,ಸಾಂಸ್ಕೃತಿಕ ತಂಡಗಳಿಂದ ವೀರಗಾಸೆ ಡೊಳ್ಳು ಕುಣಿತದೊಂದಿಗೆ ಮಠಾಧೀಶರ ಹಾಗೂ ಕಿರಣ್ ಕುಮಾರ್ ಅವರ ರಾಜಬೀದಿ ಮೆರವಣಿಗೆ ನಡೆಯಿತು. ಹುಳಿಯಾರಿನ ರಾಮ ಗೋಪಾಲ್ ಸರ್ಕಲ್ ಬಳಿ ಕ್ರೇನ್ ಮೂಲಕ ಹಾಕಲಾದ ಸೇಬಿನ ಹಾರ ಗಮನ ಸೆಳೆಯಿತು.
----------------------------------
ತಾಲೂಕಿನ ಬಹುತೇಕ ಕಾಮಗಾರಿಗಳು ಕಳಪೆ : ಕಿರಣ್ ಕುಮಾರ್
ಹುಳಿಯಾರು: ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಅಭಿಮಾನಿಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ 2023ರ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಕಣದಲ್ಲಿರುವುದು ನಿಶ್ಚಿತ.ನಿಮ್ಮೆಲ್ಲರ ಶುಭ ಹಾರೈಕೆಯಿಂದ ಚುನಾವಣೆಯಲ್ಲಿ ನನ್ನ ಗೆಲುವು ಸಹ ನಿಶ್ಚಿತ. ಅಧಿಕಾರ ಇಲ್ಲದಿದ್ದಾಗ ನೀರಾವರಿಗೆ ಹೋರಾಟ ಮಾಡಿ ನೀರು ಹರಿಸುವ ಕಾರ್ಯ ಮಾಡಿದ್ದೆ. ಆಗ ನೀರಾವರಿಗೆ ಸ್ವಾಮೀಜಿಗಳು ಹಾಗೂ ಸಂಘಟನೆಯೊಂದಿಗೆ ಹೋರಾಟ ಮಾಡಿದ್ದ ನನ್ನನ್ನು ಕೀಳಾಗಿ ದೂಷಣೆ ಮಾಡಿ,ಗೇಲಿಯಾಗಿ ಮಾತನಾಡಿದ ವ್ಯಕ್ತಿ ಇದೀಗ ನಮ್ಮ ಯೋಜನೆಗಳ ಫಲ ಅನುಭವಿಸಿ ತಾನೇ ನೀರಾವರಿ ಹರಿಕಾರ ಎಂದು ಬಿಂಬಿಸಿಕೊಳ್ಳ ಹೊರಟಿರುವುದು ನಾಚಿಕೆಗೇಡಿತನ.ನೀರಾವರಿ ಯೋಜನೆ ತರುವುದಾಗಿ ಎಲ್ಲಿಯೂ ಮಾತನಾಡದ ಅವರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಎಲ್ಲೂ ಹೆಸರು ಪ್ರಸ್ತಾಪ ಮಾಡದೆ ಸಚಿವರನ್ನು ಕುಟುಕಿದರು. ಹುಳಿಯಾರು ತಾಲೂಕು ಮಾಡುವುದು ನನ್ನ ಆಶಯವಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಪರ್ಸೆಂಟೇಜ್ ಆಸೆಗಾಗಿ ನಾನು ಯಾವುದೇ ಅಭಿವೃದ್ಧಿ ಮಾಡಲು ಹೊರಟಿಲ್ಲ ತಾಲೂಕಿನಲ್ಲಿ ಆಗಿರುವ ರಸ್ತೆ ಕಾಮಗಾರಿ, ಪೈಪ್ಲೈನ್ ಕಾಮಗಾರಿ, ಹೆದ್ದಾರಿ ಕಾಮಗಾರಿ ಎಲ್ಲಾ ಕಳಪೆಯಾಗಿದ್ದು ಇದನ್ನು ಪ್ರಶ್ನಿಸುವ ನೈತಿಕತೆ ಸಚಿವರು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ