ಹುಳಿಯಾರಿನಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ
ಸಿಪಿಐ ನದಾಫ್ ಮಾತನಾಡಿ, ಯಾವುದೇ ಹಬ್ಬಗಳ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಸಮುದಾಯದವರು ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬೇಕೆಂಬುದು ಪೊಲೀಸ್ ಇಲಾಖೆಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಸಮಾಜಘಾತಕ ಶಕ್ತಿಗಳ ಬಗ್ಗೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
*ಪ್ರಮುಖ ನಿರ್ದೇಶನಗಳು:*
* *ರಾತ್ರಿ 10 ಗಂಟೆಯ ಗಡುವು:* ರಾಜ್ಯ ಸರ್ಕಾರದ ಆದೇಶದಂತೆ, ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ಹಗಲು ಸಮಯದಲ್ಲಿ ಹಬ್ಬದ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
* *ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆ:* ಡಿಜೆ ಬಳಕೆಗೆ ಅನುಮತಿ ಇಲ್ಲ. ರಾತ್ರಿ 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಮೈಕ್ ಅಥವಾ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
* *ಪರವಾನಗಿ ಮತ್ತು ನಿಯಮ ಪಾಲನೆ:* ಮೆರವಣಿಗೆಗಳ ಮಾರ್ಗಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪೊಲೀಸರು ಅನುಮತಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು, ಮಾರ್ಗವನ್ನು ಬದಲಿಸುವಂತಿಲ್ಲ.
* *ಏಕಗವಾಕ್ಷಿ ಪದ್ಧತಿ (Single Window System):* ಹಬ್ಬಗಳ ಆಚರಣೆಗೆ ಅಗತ್ಯವಿರುವ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ, ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ, ಮತ್ತು ಪಟ್ಟಣ ಪಂಚಾಯಿತಿಯಿಂದ ಫ್ಲೆಕ್ಸ್, ಬಂಟಿಂಗ್ಸ್ ಹಾಕಲು ಅನುಮತಿ ಪಡೆಯುವುದು ಕಡ್ಡಾಯ.
* *ಮೆರವಣಿಗೆ ಸಮಯ:* ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ವಿಸರ್ಜನಾ ಮೆರವಣಿಗೆಯನ್ನು ರಾತ್ರಿ 10:00 ಗಂಟೆಯೊಳಗೆ ಮುಗಿಸಬೇಕು. ಸಾಧ್ಯವಾದಷ್ಟು ಕಾರ್ಯಕ್ರಮಗಳನ್ನು ಹಗಲಿನ ಸಮಯದಲ್ಲಿ ಮುಗಿಸಿಕೊಳ್ಳುವುದು ಉತ್ತಮ.
* *ಶಿಸ್ತು ಮತ್ತು ಸೌಹಾರ್ದತೆ:* ಹಬ್ಬದ ಮೆರವಣಿಗೆಗಳಲ್ಲಿ ಯುವಕರು ಯಾವುದೇ ತೊಂದರೆ ಮಾಡದಂತೆ ನೋಡಿಕೊಳ್ಳಬೇಕು. ಕುಡಿದು ಗಲಾಟೆ ಮಾಡುವ ಪ್ರಕರಣಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು.
ಸಭೆಯಲ್ಲಿ ಹುಳಿಯೂರಿನ ಪ್ರಸನ್ನ ಗಣಪತಿ ದೇವಾಲಯ, ಬೆಂಕಿ ಗಣಪತಿ ದೇವಾಲಯ ಮತ್ತು ವಿವಿಧ ದೇವಸ್ಥಾನಗಳ ಸಮಿತಿಯವರು, ಜಾಮಿಯಾ ಮಸೀದಿ, ನೂರಾನಿ ಮಸೀದಿ ಮತ್ತು ಬಿಲಾಲ್ ಮಸೀದಿಯ ಮೌಲಿಗಳು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಶೃತಿ, ಜಾಮಿಯ ಮಸೀದಿ ಮುತುವಲ್ಲಿ ಆರಿಫ್ ಉಲ್ಲಾಖಾನ್, ಮದೀನಾ ಮಸೀದಿಯ ಸಾಧತ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ತಮ್ಮಯ್ಯ, ಕೆ.ಎಂಎಲ್ ಮೂರ್ತಿ, ಬೆಂಕಿ ಗಣಪತಿ ದೇವಸ್ಥಾನದ ಕಾರ್ಯದರ್ಶಿ ಅರುಣ್ ರಾಜ್, ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಬಡಿಗಿ ರಾಮಣ್ಣ, ಕಾರ್ಯದರ್ಶಿ ಧನಂಜಯ ಮೂರ್ತಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ದಸ್ತಗಿರಿ ಸಾಬ್ ಸೇರಿದಂತೆ ಹಿಂದೂ ಮತ್ತು ಮುಸ್ಲಿಂ ಸಮಾಜದ ವಿವಿಧ ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ