ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಆರ್ಥಿಕವಾಗಿ ಸದೃಢರಾಗಿ: ಮಹೇಂದ್ರ
ತೀರ್ಥಪುರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ ಜನ ಸುರಕ್ಷಾ ಶಿಬಿರ
ಹುಳಿಯಾರು : ರೈತರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ತೀರ್ಥಪುರ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮಹೇಂದ್ರ ಕರೆ ನೀಡಿದರು.
ಆರ್ಥಿಕ ಸಾಕ್ಷರತಾ ಕೇಂದ್ರ (ಚಿಕ್ಕನಾಯಕನಹಳ್ಳಿ) ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿಸಿ ಟ್ರಸ್ಟ್ (ತೀರ್ಥಪುರ) ಜಂಟಿಯಾಗಿ ತೀರ್ಥಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಸಾಲವನ್ನು ಅವಧಿಗೆ ಮುನ್ನ ನವೀಕರಿಸಿದರೆ ಕೇವಲ ಶೇ.4ರಷ್ಟು ಬಡ್ಡಿ ವಿಧಿಸಲಾಗುವುದು ಎಂದ ಅವರು ಇದು ರೈತರಿಗೆ ಕಡಿಮೆ ವೆಚ್ಚದಲ್ಲಿ ಹಣಕಾಸಿನ ನೆರವು ಪಡೆಯಲು ಉತ್ತಮ ಅವಕಾಶವಾಗಿದ್ದು ಇದನ್ನು ಸಧ್ಬಳಕೆ ಮಾಡಿಕೊಳ್ಳಿ ಎಂದರು.
ಪ್ರಧಾನಮಂತ್ರಿ ಸುರಕ್ಷಾ ವಿಮಾ ನೊಂದಾಯಿಸಿ : ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ ವಾರ್ಷಿಕ ಕೇವಲ 20 ರೂ.ಗಳ ವಿಮಾ ಕಂತು ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಬ್ಯಾಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು. ಇದರಿಂದ, ಸಾವು ಸಂಭವಿಸಿದರೆ ನಾಮನಿರ್ದೇಶಿತರಿಗೆ 2 ಲಕ್ಷ ರೂ. ವಿಮಾ ಮೊತ್ತ ದೊರೆಯುತ್ತದೆ. ಅದೇ ರೀತಿ ಅಪಘಾತದಲ್ಲಿ ಕೈ, ಕಾಲು ಅಥವಾ ಯಾವುದೇ ಅಂಗ ಊನವಾದಲ್ಲಿ 1 ಲಕ್ಷ ರೂ. ವಿಮಾ ಮೊತ್ತ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ತೀರ್ಥಪುರ ಕಾರ್ಯಕ್ಷೇತ್ರದ ಅಕ್ಷರ ಜ್ಞಾನ ವಿಕಾಸ ಕೇಂದ್ರ ಸಮನ್ವಯ ಅಧಿಕಾರಿ ಕವಿತಾ ಮಾತನಾಡಿ, ಕೇಂದ್ರ ಸರ್ಕಾರವು ಬ್ಯಾಂಕುಗಳ ಮುಖಾಂತರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಮಹಿಳಾ ಸದಸ್ಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣ ಯೋಜನೆಯ ಕಾರ್ಯಕ್ಷೇತ್ರದ ಅಧ್ಯಕ್ಷೆ ಗೌರಮ್ಮ, ಸೇವಾ ಪ್ರತಿನಿಧಿಗಳಾದ ನಾಗರತ್ನ, ಲತಾ ಮತ್ತು ಕೇಂದ್ರದ ಎಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ