ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 20 ಲಕ್ಷ ರೂ. ಸಾಲ ವಿತರಣೆ
*ಮತ್ತಿಘಟ್ಟದಲ್ಲಿ ಜನ ಸುರಕ್ಷಾ ಶಿಬಿರ ಹಾಗೂ ಸಾಲ ವಿತರಣಾ ಸಮಾರಂಭ ಯಶಸ್ವಿ*
ಹುಳಿಯಾರು: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟದ ಶಾಖೆಯಿಂದ ಮತ್ತಿಘಟ್ಟ ಅಮೃತಬಿಂದು ಸಂಜೀವಿನಿ ಒಕ್ಕೂಟದ ಸಭಾಂಗಣದಲ್ಲಿ ಇತ್ತೀಚೆಗೆ, ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲ ವಿತರಣಾ ಸಮಾರಂಭ ಮತ್ತು ಜನ ಸುರಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿದ್ಧಿ ವಿನಾಯಕ, ಫಾತಿಮಾಭೀ, ಪಾರ್ವತಿ ಮತ್ತು ಶಂಕರಿ ಸ್ವಸಹಾಯ ಸಂಘಗಳಿಗೆ ಒಟ್ಟು 20 ಲಕ್ಷ ರೂ.ಗಳಷ್ಟು ಸಾಲ ಮಂಜೂರು ಮಾಡಲಾಯಿತು.
ಸಾಲ ಸದ್ಬಳಕೆಯ ಮಹತ್ವದ ಕುರಿತು ಮಂಜುನಾಥ್ ಸಲಹೆ : ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಮತ್ತಿಘಟ್ಟ ಶಾಖೆಯ ವ್ಯವಸ್ಥಾಪಕ ಮಂಜುನಾಥ್, ಸ್ವಸಹಾಯ ಸಂಘಗಳ ಸದಸ್ಯರು ಪ್ರತಿ ವಾರವೂ ನಿಯಮಿತವಾಗಿ ಸಭೆ ಸೇರಿ ಹಣಕಾಸು ನಿರ್ವಹಣೆ, ಸಾಲದ ಸದ್ಬಳಕೆ, ಸದಸ್ಯರ ಸೇರ್ಪಡೆ ಹಾಗೂ ಬದಲಾವಣೆಗಳ ಬಗ್ಗೆ ನಡಾವಳಿ ಪುಸ್ತಕದಲ್ಲಿ ನಮೂದಿಸಬೇಕು ಎಂದು ತಿಳಿಸಿದರು. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ತಮ್ಮ ಮೊಬೈಲ್ ಮತ್ತು ಆಧಾರ್ ಕಾರ್ಡ್ಗಳ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
*ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಕರೆ* : ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿಯವರ ಸುರಕ್ಷಾ ವಿಮಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಬ್ಯಾಂಕ್ ಮೂಲಕ ನೋಂದಾಯಿಸಿಕೊಂಡು ಅವುಗಳ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕರೆ : ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಹಾಗೂ ಉದ್ಯಮಿಯೂ ಆಗಿರುವ ಲೀಲಾವತಿ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜೊತೆಗೆ ಬ್ಯಾಂಕ್ನ ಸಹಕಾರದೊಂದಿಗೆ ಹೊಸ ಉದ್ಯಮಗಳನ್ನು ಪ್ರಾರಂಭಿಸಿ, ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸಿ.ಎಸ್. ಭರತ್, ಮತ್ತಿಘಟ್ಟ ಗ್ರಾಮ ಪಂಚಾಯಿತಿ ಮಟ್ಟದ ಅಮೃತಬಿಂದು ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷ ಜಯಶೀಲ, ಎಂಬಿಕೆ ವಿನುತಾ, ಎಲ್.ಸಿ.ಆರ್.ಪಿ.ಗಳಾದ ಶ್ವೇತಾ, ಕಾವ್ಯ, ಕಾಂಚನ, ಪಶು ಸಖಿ ಕವಿತಾ, ಕೃಷಿ ಸಖಿ ಶೈಲಾ, ಬಿ.ಸಿ. ಸಖಿ ಮಧುಕುಮಾರಿ, ಬಂದ್ರೆಹಳ್ಳಿ ಬಿ.ಡಿ.ಎಸ್.ಪಿ. ರೇಣುಕಮ್ಮ, ಗ್ರಂಥಾಲಯ ಮೇಲ್ವಿಚಾರಕ ಷಡಕ್ಷರಿ, ಬ್ಯಾಂಕಿನ ಬಿ.ಸಿ. ಸುದರ್ಶನ್ ಮತ್ತು ಇನ್ಸೂರೆನ್ಸ್ ಏಜೆಂಟ್ ಯಶ್ವಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬ್ಯಾಂಕಿನ ಸ್ವಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ