ಕಣ್ಣೀರ ಕಥೆ: ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ
------------------------
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಎಸ್.ಸಿ. ಕಾಲೋನಿಯ ಕರಿಯಮ್ಮ ಅಜ್ಜಿ (70) ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಅಜ್ಜಿಯ ಕಣ್ಣೀರಿನ ಕಥೆ, ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ :ಈ ವೃದ್ಧಾಪ್ಯದಲ್ಲಿ ಅಜ್ಜಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ದೊರೆತಿಲ್ಲ ಎನ್ನಲಾಗಿದ್ದು ಮತದಾನದ ಹಕ್ಕು ಮಾತ್ರ ದೊರೆತಿದ್ದು, ಜೀವನಕ್ಕೆ ಅಗತ್ಯವಾದ ಇತರೆ ಎಲ್ಲಾ ಹಕ್ಕುಗಳನ್ನು ಪಡೆಯಲು ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಸತಿ, ಶುದ್ಧ ಕುಡಿಯುವ ನೀರು, ವಯೋವೃದ್ಧ ಪಿಂಚಣಿ ಅಥವಾ ವಿಧವಾ ವೇತನ, ಶೌಚಾಲಯ ಮತ್ತು ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ನಾರಿಶಕ್ತಿ ಮುಂತಾದ ಪ್ರಮುಖ ಯೋಜನೆಗಳಿಂದ ಈ ಅಜ್ಜಿ ವಂಚಿತರಾಗಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.
ದಾಖಲೆಗಳ ಕೊರತೆಯೇ ಸಮಸ್ಯೆಯೇ :ಅಜ್ಜಿಯ ಬಳಿ ಗುರುತಿನ ಚೀಟಿಗಳಾದ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ಗಳೂ ಇಲ್ಲ. ಅವರ ಗಂಡ ನಿಧನರಾದ ನಂತರ ರೇಷನ್ ಕಾರ್ಡ್ ರದ್ದುಗೊಂಡಿದೆ. ಮಕ್ಕಳು ಇಲ್ಲದ ಅಜ್ಜಿ, ನೆರೆಹೊರೆಯವರ ಸಹಾಯದಿಂದ ದಿನ ದೂಡುತ್ತಿದ್ದಾರೆ.
ಗಮನ ಹರಿಸದ ಅಧಿಕಾರಿಗಳು : ಸೂರು ಇಲ್ಲದವರಿಗೆ ವಸತಿ ಒದಗಿಸಲು ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದ್ದರೂ, ಮಳೆ, ಗಾಳಿಗೆ ಸೋರುವ ಮನೆಯಲ್ಲಿ ವಾಸಿಸುತ್ತಿರುವ ಕರಿಯಮ್ಮಜ್ಜಿಗೆ ಇದುವರೆಗೂ ಏಕೆ ವಸತಿ ಮಂಜೂರಾಗಿಲ್ಲ.
ಹಲವಾರು ಬಾರಿ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ್, ಪಿಡಿಒ ಮತ್ತು ಇತರ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ,ಯಾರು ಇದಕ್ಕೆ ಹೊಣೆ ಎಂದು ಸ್ಥಳಿಯರು ಪ್ರಶ್ನಿಸುತ್ತಾರೆ.
ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ನ ಒತ್ತಾಯ :
ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಗಣಿಭಾದಿತ ಪ್ರದೇಶಗಳಿಗೆ ಭೇಟಿ ನೀಡಿ ಇಂತಹ ಅನೇಕ ನೊಂದ ಕುಟುಂಬಗಳನ್ನು ಬೆಳಕಿಗೆ ತರುತ್ತಿದೆ. ಸರ್ಕಾರದಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾದರೂ, ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಕರಿಯಮ್ಮಜ್ಜಿಗೆ ವಸತಿ ಯೋಜನೆ, ಪಿಂಚಣಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತ್ತು ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಟ್ರಸ್ಟ್ನ ಸದಸ್ಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಕರಿಯಮ್ಮ ಅಜ್ಜಿಯ ಬದುಕಿಗೆ ಆಶಾಕಿರಣವಾಗಬೇಕಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ