ಹುಳಿಯಾರು: ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಕೆಂಕೆರೆ ಗ್ರಾಮದ ಓಂಕಾರ ಸಂಜೀವಿನಿ ಒಕ್ಕೂಟದ ಆವರಣದಲ್ಲಿ ಜನ ಸುರಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸ್ವಸಹಾಯ ಗುಂಪುಗಳಿಗೆ ₹20 ಲಕ್ಷದವರೆಗಿನ ಜಾಮೀನುರಹಿತ ಸಾಲ ಸೌಲಭ್ಯ ಹಾಗೂ ಕೇವಲ ₹20 ವಾರ್ಷಿಕ ಕಂತಿನಲ್ಲಿ ₹2 ಲಕ್ಷದ ಅಪಘಾತ ವಿಮೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹುಳಿಯಾರು ಎಸ್ಬಿಐ ವ್ಯವಸ್ಥಾಪಕ ವೈ. ಸುರೇಶ್ ಬಾಬು, ಸ್ವಸಹಾಯ ಸಂಘಗಳಿಗೆ ನಮ್ಮ ಬ್ಯಾಂಕ್ನಲ್ಲಿ ಯಾವುದೇ ಜಾಮೀನು ಇಲ್ಲದೆ ₹20 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಇದೇ ವೇಳೆ ಬ್ಯಾಂಕ್ನ ಕ್ಷೇತ್ರ ಮೇಲ್ವಿಚಾರಕ ಸತೀಶ್ ಮಾತನಾಡಿ, ಎಸ್ಬಿಐ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಮೊಬೈಲ್ ಮೂಲಕವೇ ಬ್ಯಾಲೆನ್ಸ್ ಪರಿಶೀಲನೆ, ಸ್ಟೇಟ್ಮೆಂಟ್ ಪಡೆಯುವುದು, ವಿಳಾಸ ಬದಲಾವಣೆ, ಹಣ ವರ್ಗಾವಣೆ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ವ್ಯವಸ್ಥಾಪಕ ರವಿ, ಸಂಜೀವಿನಿ ಒಕ್ಕೂಟಗಳು ಇಂದು ಮಿನಿ ಬ್ಯಾಂಕ್ಗಳಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ವಿವರಿಸಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ, ಕೇವಲ ₹20 ವಾರ್ಷಿಕ ಕಂತು ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದು. ಇದರಿಂದ ಅಪಘಾತದಲ್ಲಿ ಅಕಸ್ಮಿಕ ಮರಣ ಹೊಂದಿದರೆ ₹2 ಲಕ್ಷ, ಮತ್ತು ಶಾಶ್ವತ ಅಂಗವೈಕಲ್ಯ ಉಂಟಾದರೆ ₹1 ಲಕ್ಷ ವಿಮಾ ಮೊತ್ತ ದೊರೆಯುತ್ತದೆ ಎಂದು ತಿಳಿಸಿದರು.
ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಗಳು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಓಂಕಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗಿರಿಜಮ್ಮ, ಎಂ.ಬಿ.ಕೆ. ಗಾಯತ್ರಿ, ಕೃಷಿ ಸಖಿ ಶಶಿಕಲಾ, ಪಶು ಸಖಿ ಜಯಲಕ್ಷ್ಮಿ, ಸಿ.ಎಸ್.ಸಿ. ಶಾರದಮ್ಮ, ಪ್ರಬಂಧಕಿ ಚಂದ್ರಕಲಾ, ಗಣಿಬಾಧಿತ ಸಂಸ್ಥೆಯ ಜ್ಯೋತಿ ಮತ್ತು ಮೇಘನ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ