-------------
ಭಾರತವು ದೇವಾನುದೇವತೆಗಳು ಅವತರಿಸಿದ ಏಕೈಕ ಕರ್ಮಭೂಮಿ
-------------
ಹುಳಿಯಾರು: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ಎಸ್ಎಸ್ ಜಿಲ್ಲಾ ಸಹ ಕಾರ್ಯವಾಹಿಯಾದ ಭರತ್ ಅವರು ರಕ್ಷಾ ಬಂಧನದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ ಕಲಿಯುಗದಲ್ಲಿ ಸಂಘಟನೆಯೇ ದೈವೀ ಶಕ್ತಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಭಗವದ್ಗೀತೆ ಜೀವನದ ಮಾರ್ಗದರ್ಶಿ: ಭಾರತವನ್ನು ಕರ್ಮಭೂಮಿ ಎಂದು ಬಣ್ಣಿಸಿದ ಅವರು ವಿಶ್ವದ ಇತರ ರಾಷ್ಟ್ರಗಳನ್ನು ಭೋಗಭೂಮಿ ಎಂದು ಕರೆಯಲಾಗುತ್ತದೆ. ಆದರೆ ದೇವಾನುದೇವತೆಗಳು ಅವತರಿಸಿದ ಏಕೈಕ ಪುಣ್ಯಭೂಮಿ ಭಾರತವಾಗಿದೆ ಎಂದರು. ಭಗವದ್ಗೀತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಜೀವನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಭಗವದ್ಗೀತೆ ಯುಸರ್ ಮ್ಯಾನುಯಲ್ ಇದ್ದಂತೆ. ನಾವು ಯಾವುದೇ ಉಪಕರಣ ತಂದಾಗ ಅದರ ಬಳಕೆಯ ವಿಧಾನವನ್ನು ತಿಳಿಸುವಂತೆ ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿ ಭಗವದ್ಗೀತೆ ಇದೆ ಎಂದರು.
ಯದ್ಭಾವಂ ತದ್ಭವತಿ ಅಂದರೆ ನಾವು ಹೇಗೆ ನೋಡುತ್ತೇವೋ ಹಾಗೆಯೇ ಪ್ರಪಂಚವು ಕಾಣುತ್ತದೆ ಎಂದ ಅವರು ರಕ್ಷಾ ಬಂಧನವನ್ನು ಕೇವಲ ಒಂದು ಸಿಹಿ ಬಂಧನವಾಗಿ ನೋಡದೆ ಅದರ ಆಳವಾದ ಅರ್ಥವನ್ನು ಅರಿತುಕೊಳ್ಳುವಂತೆ ಕರೆ ನೀಡಿದರು.
ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿಕೆ ಗೀತಕ್ಕನವರು ರಕ್ಷಾ ಬಂಧನದ ಸಂದೇಶ ನೀಡಿದರು.ಚಿಕ್ಕನಾಯಕನಹಳ್ಳಿ ಆಶ್ರಮದ ಸಂಚಾಲಕರಾದ ಸುಹಾಸಿನಿ ಅಕ್ಕನವರು ಉಪಸ್ಥಿತರಿದ್ದ ಸರ್ವರಿಗೂ ಪವಿತ್ರ ಶ್ರೀ ರಕ್ಷೆಯನ್ನು ಕಟ್ಟಿ ಹರಸಿದರು.
ಕಾರ್ಯಕ್ರಮದಲ್ಲಿ ಹುಳಿಯಾರಿನ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಂಜಿ , ಆರ್ಎಸ್ಎಸ್ ಜಿಲ್ಲಾ ಪ್ರಚಾರ ಪ್ರಮುಖರಾದ ಬಾಲಾಜಿ ಸಿಂಗ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಾದ ದುರ್ಗರಾಜು, ಬಸವರಾಜು, ಹನುಮಂತಣ್ಣ, ನಟರಾಜ್ ಮತ್ತು ಪ್ರಿಯಾಂಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವೈ.ಆರ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿ, ಪ್ರೇಮ ಲೀಲಕ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಬಿಕೆ ಚಂದನಕ್ಕ ಪುಷ್ಪ ಮತ್ತು ಪನ್ನೀರಿನಿಂದ ಎಲ್ಲರನ್ನೂ ಗೌರವಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ