ವಿಷಯಕ್ಕೆ ಹೋಗಿ

ದಾಖಲೆ ಬರೆದ ಹುಳಿಯಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೇವಲ ಒಂದೂಕಾಲು ಗಂಟೆಯಲ್ಲಿ 60 ಅಜೆಂಡಾಗಳಿಗೆ ಒಪ್ಪಿಗೆ!

ದಾಖಲೆ ಬರೆದ ಹುಳಿಯಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೇವಲ ಒಂದೂಕಾಲು ಗಂಟೆಯಲ್ಲಿ 60 ಅಜೆಂಡಾಗಳಿಗೆ ಒಪ್ಪಿಗೆ!

------------------

ಹುಳಿಯಾರು: ಅತಿ ಹೆಚ್ಚಿನ ವಿಷಯಗಳಿದ್ದರೂ ಯಾವುದೇ ಗದ್ದಲ, ಗೊಂದಲವಿಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದ ಹುಳಿಯಾರು ಪಟ್ಟಣ ಪಂಚಾಯಿತಿಯ ಇಂದಿನ ಸಾಮಾನ್ಯ ಸಭೆಯು ಹೊಸ ದಾಖಲೆ ಬರೆದಿದೆ. ನೂತನ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 60 ಪ್ರಮುಖ ವಿಷಯಗಳನ್ನು ಕೇವಲ ಒಂದೂಕಾಲು ಗಂಟೆಯೊಳಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ಸಾಮಾನ್ಯವಾಗಿ ಹುಳಿಯಾರು ಪಂಚಾಯಿತಿ ಸಭೆ ಎಂದರೆ ಇಡೀ ದಿನ ಗದ್ದಲ-ಕೋಲಾಹಲಗಳಿಂದ ಕೂಡಿರುತ್ತಿತ್ತು. ಆದರೆ ಇಂದು ಎಲ್ಲಾ ಕೌನ್ಸಿಲರ್‌ಗಳ ಸಹಕಾರದೊಂದಿಗೆ ಅಭಿವೃದ್ಧಿ ಪರ ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವ ಮೂಲಕ ಸಭೆ ವಿಶೇಷ ಗಮನ ಸೆಳೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಆಯ್ಕೆ : ಸಭೆಯ ಆರಂಭದಲ್ಲಿ ಸರ್ಕಾರಿ ಸುತ್ತೋಲೆಗಳನ್ನು ಮಂಡಿಸಲಾಯಿತು. ಇತ್ತೀಚೆಗೆ ಅಕಾಲಿಕ ನಿಧನರಾದ ಸ್ಥಾಯಿ ಸಮಿತಿ ಅಧ್ಯಕ್ಷ ಒಳಗೆ ಚಂದ್ರಶೇಖರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕೌನ್ಸಿಲರ್ ಎಸ್.ಆರ್.ಎಸ್ ದಯಾನಂದ್ ಅವರನ್ನು ಸದಸ್ಯರನ್ನಾಗಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಅಬೂಬಕ್ಕರ್ ಸಿದ್ದೀಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೇಮಕಾತಿ : ಕಸದ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳಿಗೆ ಖಾಲಿ ಇರುವ ಡ್ರೈವರ್‌ಗಳು ಮತ್ತು ಪೌರಕಾರ್ಮಿಕರ ನೇಮಕಾತಿಗೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು. ಈ ವೇಳೆ ಖಾಲಿ ಹುದ್ದೆಗಳಿಗೆ ಸ್ಥಳೀಯರಿಗೇ ಆದ್ಯತೆ ನೀಡಬೇಕೆಂದು ಸದಸ್ಯರು ಸೂಚಿಸಿದರು.

ತೆರಿಗೆ ಪರಿಷ್ಕರಣೆ : 2025-26ನೇ ಸಾಲಿನ ಕಂದಾಯ ತೆರಿಗೆಯನ್ನು ನಿಯಮಾನುಸಾರ 5% ರಷ್ಟು ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಯಿತು.

ಸ್ವಚ್ಛತೆ ಮತ್ತು ಕುಡಿಯುವ ನೀರು : ಪಟ್ಟಣದ ಎಲ್ಲಾ ಮನೆಗಳಿಗೆ ಹಸಿ ಹಾಗೂ ಒಣ ಕಸದ ಡಸ್ಟ್ ಬಿನ್‌ಗಳನ್ನು ವಿತರಿಸುವುದು, ನೀರು ಶುದ್ಧೀಕರಣ ಘಟಕಕ್ಕೆ ಬ್ಲೀಚಿಂಗ್ ಪುಡಿ ಖರೀದಿ ಹಾಗೂ ನೀರಿನ ಟ್ಯಾಂಕ್‌ಗಳ ಸ್ವಚ್ಛತೆಗೆ ಆದ್ಯತೆ ನೀಡಲು ನಿರ್ಧರಿಸಲಾಯಿತು.

ಸಂತೆ ಮೈದಾನ ಸ್ಥಳಾಂತರ : ಎಪಿಎಂಸಿ ಬಳಿಯ ಸಂತೆ ಮೈದಾನಕ್ಕೆ ಮಣ್ಣು ಹಾಕಿದ ಬಿಲ್ ಪಾವತಿಗೆ ಸದಸ್ಯರಾದ ದಯಾನಂದ್ ಮತ್ತು ಕೆ.ಎಂ.ಎಲ್. ಕುಮಾರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುರೇಶ್ ಬಾಬು, ಸಂತೆ ಸ್ಥಳಾಂತರದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.

ನಗರ ಸೌಂದರ್ಯೀಕರಣ ಮತ್ತು ನಾಮಫಲಕ : ಪಟ್ಟಣದ ಎಲ್ಲಾ ಸರ್ಕಲ್‌ಗಳಿಗೆ ದಾರ್ಶನಿಕರ ಹೆಸರನ್ನು ಇಡಲು ರೆಸಲ್ಯೂಷನ್ ಮಾಡಲು ತೀರ್ಮಾನಿಸಲಾಯಿತು. ಜಿಲ್ಲಾ ಕೇಂದ್ರಗಳ ಮಾದರಿಯಲ್ಲಿ ಹುಳಿಯಾರಿನ ಎಲ್ಲಾ ವಾರ್ಡ್‌ಗಳಲ್ಲೂ ವಾರ್ಡ್ ಸಂಖ್ಯೆ, ಶಾಸಕರು ಹಾಗೂ ಕೌನ್ಸಿಲರ್‌ಗಳ ಹೆಸರಿರುವ ಸ್ವಾಗತ ಮತ್ತು ನಾಮಫಲಕಗಳನ್ನು ಅಳವಡಿಸಲು ಒಪ್ಪಿಗೆ ಸೂಚಿಸಲಾಯಿತು.

               ಬಸ್ ನಿಲ್ದಾಣ ಮತ್ತು ಮೂಲಭೂತ ಸೌಕರ್ಯ : ಖಾಸಗಿ ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಿ ಬಸ್ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಹಾಗೂ ಮುಂಭಾಗದ ಜಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಸಮ್ಮತಿ ನೀಡಲಾಯಿತು.

            1 ರಿಂದ 16ನೇ ವಾರ್ಡ್‌ವರೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಪ್ರಮುಖ ರಸ್ತೆ, ದೇವಸ್ಥಾನ, ಸರ್ಕಲ್‌ಗಳಿಗೆ ಸಿಸಿ ಕ್ಯಾಮೆರಾ ಮತ್ತು ಬೀದಿ ದೀಪ ಅಳವಡಿಸಲು ತೀರ್ಮಾನಿಸಲಾಯಿತು.

          ಹಿಂದಿನ ಮುಖ್ಯಾಧಿಕಾರಿಗಳ ಕಾಲದಿಂದ ಬಾಕಿ ಇರುವ ಬಿಲ್‌ಗಳ ಪಾವತಿಗೆ ಅನುಮೋದನೆ ದೊರೆಯಿತು.

          ಪಂಚಾಯಿತಿ ಕಚೇರಿ ಹಿಂಭಾಗದ ಗೋಡೌನನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸ್ನಾನದ ಹಾಗೂ ಅಡುಗೆ ಕೋಣೆ ಕಾರ್ಯಕ್ಕೆ ಬಳಸಿಕೊಳ್ಳಲು ಬಿಟ್ಟುಕೊಡಲು ನಿರ್ಧರಿಸಲಾಯಿತು. ಅಲ್ಲಿದ್ದ ಶುದ್ಧ ನೀರಿನ ಘಟಕವನ್ನು ಗಾಂಧಿ ಪೇಟೆಯ ಬಿಸಿಎಂ ಹಾಸ್ಟೆಲ್ ಮುಂಭಾಗಕ್ಕೆ ಸ್ಥಳಾಂತರಿಸಲು ಒಪ್ಪಿಗೆ ನೀಡಲಾಯಿತು.

         ವಾಣಿಜ್ಯ ಸಂಕೀರ್ಣ ಮತ್ತು ಹರಾಜು : ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲು ತೀರ್ಮಾನಿಸಲಾಯಿತು. ಹಾಗೆಯೇ, ಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶವಿದ್ದರೂ ವಾಣಿಜ್ಯ ಮಳಿಗೆ ಹರಾಜಿಗೆ ವಿಳಂಬ ಮಾಡುತ್ತಿರುವ ಬಗ್ಗೆ ಸದಸ್ಯರಾದ ಬಡಗಿರಾಜು ಮತ್ತು ದಯಾನಂದ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು.

           ಸಭೆಯಲ್ಲಿ ಉಪಾಧ್ಯಕ್ಷೆ ಕಾವ್ಯ ರಾಣಿ, ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್, ಕಂದಾಯ ಅಧಿಕಾರಿ ಶೃತಿ ಹಾಗೂ ಪಂಚಾಯಿತಿ ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

----------

16ನೇ ಹಣಕಾಸು ಆಯೋಗದ ಅನುದಾನ : 2026-27ನೇ ಸಾಲಿಗೆ ಹುಳಿಯಾರು ಪಟ್ಟಣ ಪಂಚಾಯಿತಿಗೆ 16ನೇ ಹಣಕಾಸು ಆಯೋಗದಿಂದ 273 ಲಕ್ಷ ರೂ. ಹಂಚಿಕೆಯಾಗಿದ್ದು, ಮಾರ್ಗಸೂಚಿಯಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.

----------

ಕಾಮೆಂಟ್‌ಗಳು