ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳ ಆಗಮನ
------------------------------------------
ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ರಾಜ್ಯಮಟ್ಟದ ಶಿಬಿರವೊಂದು ಬೋರನಕಣಿವೆಯಂತಹ ಕುಗ್ರಾಮದಲ್ಲಿ ಆಯೋಜಿಸಲಾಗಿದ್ದು ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳು ಇಲ್ಲಿಗೆ ಆಗಮಿಸಿರುವುದು ಗ್ರಾಮೀಣಭಾಗದಲ್ಲೂ ಸಹ ಕಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ.
ಹುಳಿಯಾರು ಸಮೀಪದ ಬೋರನಕಣಿವೆಯ ಸೇವಾಚೇತನ ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಾಹಿತಿಗಳಾದ ಪ್ರೋ ಎಸ್.ಜಿ.ಸಿದ್ದರಾಮಯ್ಯ ಹಾಗೂ ಕಾರ್ಯದರ್ಶಿ ವಿಠಲ್ ಅವರ ಪ್ರಯತ್ನದ ಫಲವಾಗಿ ರಾಜ್ಯಮಟ್ಟದ ಎರಡುವಾರಗಳ ಕಾಲದ ಶಿಬಿರ ನಡೆಯುತ್ತಿದ್ದು ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿದೆ.
ಕೆತ್ತನೆಯಲ್ಲಿ ತೊಡಗಿಕೊಂಡಿರುವ ಶಿಲ್ಪಿಗಳು |
ಹಿರಿಯ ಶಿಲ್ಪಿಗಳಾಗಿರುವ ಚಿತ್ರದುರ್ಗ ಜಿಲ್ಲೆಯ ತುಪ್ಪದಹಳ್ಳಿಯ ಹಿರಿಯ ಶಿಲ್ಪಿ ಟಿ.ಎಂ.ತೀರ್ಥಾಚಾರ್ ಸಂಚಾಲಕತ್ವದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಮಂದಿ ಹಿರಿಯ ಶಿಲ್ಪಿಗಳು ಹಾಗೂ ಹತ್ತು ಮಂದಿ ಕಿರಿಯ ಶಿಲ್ಪಿಗಳು ಭಾಗವಹಿಸಿದ್ದು ನೆಲಮಂಗಲದ ಶಿಲ್ಪಿ ಎಸ್.ಮರಿಸ್ವಾಮಿ ಶಿಬಿರದ ನಿರ್ದೇಶಕರಾಗಿದ್ದಾರೆ.
ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ಹುಳಿಯಾರು ಹೋಬಳಿಯ ಬೋರನಕಣಿವೆಯ ಸೇವಾಚೇತನದಲ್ಲಿ ಅ.೧೯ರಿಂದ ನ.೨ ಎರಡು ವಾರಾವಧಿ ಶಿಲಾ ಶಿಲ್ಪಕಲಾ ಶಿಬಿರವನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಅವರು ಅ.೧೯ರಂದು ಶಿಬಿರಕ್ಕೆ ಚಾಲನೆ ನೀಡಿದ್ದು ನ.೨ ರಂದು ಸಮಾರೋಪ ಸಮಾರಂಭ ನಡೆಯಲಿದೆ.ಶಿಬಿರದ ಕೊನೆಯ ದಿನವಾದ ನ.೨ ರಂದು ಈ ಶಿಬಿರದಲ್ಲಿ ಶಿಲ್ಪಿಗಳು ನಿರ್ಮಿಸಿದ ಕಲಾಕೃತಿಗಳನ್ನು ನಿವೃತ್ತ ಜಿಲ್ಲಾಧಿಕಾರಿ ಎಸ್.ಆರ್.ವೆಂಕಟೇಶ್ ಲೋಕಾರ್ಪಣೆ ಮಾಡಲಿದ್ದಾರೆ.
ಶಿಲ್ಪಿಗಳ ಕೈಚಳಕದಿಂದ ಮೂಡಿಬರುತ್ತಿರುವ ಕಲಾಕೃತಿಗಳು |
ಕರ್ನಾಟಕ ಶಿಲ್ಪಾಕಲಾ ಆಕಾಡೆಮಿ ನಾಡಿನ ನಾನಾ ಜಿಲ್ಲೆಗಳಿಂದ ಶಿಲ್ಪಿಗಳನ್ನು ಆಹ್ವಾನಿಸಿದ್ದು ಎಲ್ಲರು ನುರಿತ ಕಲಾವಿದರಾಗಿದ್ದಾರೆ.ಇಪ್ಪತ್ತು ಮಂದಿ ಶಿಲ್ಪಿಗಳಿಂದ ಅಂಬೇಡ್ಕರ್,ವಿವೇಕಾನಂದ,ಕುವೆಂಪು,
ಕನಕದಾಸ,ಬಾಪುಲೆ,ಸಾವಿತ್ರಿ ಬಾಪುಲೆ,ಅಬ್ದುಲ್ ಕಲಾಂ,ಧ್ಯಾನಮಗ್ನ ಗಾಂಧಿ,ನಾಲ್ವಡಿ ಕೃಷ್ಣರಾಜ ಒಡೆಯರ್,ಶರಣ ಬಸವೇಶ್ವರರ ಶಿಲ್ಪಗಳನ್ನು ಕೆತ್ತನೆ ಮಾಡಿಸಲಾಗುತ್ತಿದೆ.ಹಿರಿ ಕಿರಿಯ ಶಿಲ್ಪಿಗಳು ಕೃಷ್ಣ ಶಿಲೆಯಲ್ಲಿ ಕೆತ್ತನೆ ಮಾಡುತ್ತಿದ್ದು ಕಲಾಕೃತಿಗಳಾಗಿ ಅರಳುತ್ತಿರುವ ಇವುಗಳು ಬೆರಗುಮೂಡಿಸುತ್ತಿದೆ.
ಗೌರವ ಧನ:ಇಂತಹ ಶಿಬಿರಗಳನ್ನು ವರ್ಷಕ್ಕೆ ಎರಡುಮೂರು ಬಾರಿ ಆಯೋಜಿಸಲಾಗುವುದಿದ್ದು ಭಾಗವಹಿಸುವ ಶಿಲ್ಪಿಗಳಿಗೆ ಗೌರವ ಧನ ನೀಡಲಾಗುವುದು. ಹಿರಿಯ ಶಿಲ್ಪಿಗಳಿಗೆ ೩೦ ಸಾವಿರ ಹಾಗೂ ಕಿರಿಯ ಶಿಲ್ಪಿಗಳಿಗೆ ೨೫ ಸಾವಿರ ಗೌರವ ಧನದ ಜೊತೆಗೆ ಪ್ರಶಂಸ ಪತ್ರ ನೀಡಲಾಗುತ್ತದೆ.
ಹಿರಿಯ ಶಿಲ್ಪಿ ಟಿ.ಮಂಜಣ್ಣನ ಪ್ರಕಾರ ಕೆತ್ತನೆಗೆ ಬೇಕಾದ ಕೃಷ್ಣ ಶಿಲೆ ಮೈಸೂರು ಬಳಿಯ ಹೆಗ್ಗಡದೇವನ ಕೋಟೆಯಿಂದ ತರಬೇಕಿದ್ದು ಗಣಿಇಲಾಖೆಯ ಸಮಸ್ಯೆಯಿಂದಾಗಿ ಕಲ್ಲು ತರುವುದೆ ಕಷ್ಟಕರವಾಗಿದೆ.ಬೇರೆಲ್ಲೂ ಇಂತಹ ಕಲ್ಲು ಲಭ್ಯವಿಲ್ಲದೆ ಕೆತ್ತನೆ ಕಾರ್ಯಕ್ಕೆ ತೊಡಕುಂಟಾಗುತ್ತಿದೆ.ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ.
ಕಡೆಗಣನೆ:ಕಲೆಗೆ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು ಶಿಲ್ಪಿಗಳ ಜೀವನ ದುಸ್ತರವಾಗುತ್ತಿದೆ.ನಮ್ಮನ್ನು ಗುರ್ತಿಸಿ ಗೌರವಿಸುವುದು ದೂರದ ಮಾತು. ಪ್ರಶಸ್ತಿಗೆ ಪರಿಗಣಿಸಬೇಕಾದರೆ ಅರ್ಹತೆಯೆ ಮಾನದಂಡವಾಗಬೇಕೆ ಹೊರತು ವಶೀಲಿಬಾಜಿಯಲ್ಲ.ಪ್ರಶಸ್ತಿ ನೀಡುವಲ್ಲೂ ರಾಜಕೀಯ ನಡೆಯುತ್ತಿದ್ದು ಅರ್ಹರಿಗೆ ಪ್ರಶಸ್ತಿ ನೀಡಬೇಕು.ಇಲ್ಲದಿದ್ದಲ್ಲಿ ಪ್ರಶಸ್ತಿಯ ಮೌಲ್ಯ ಕಳೆದುಕೊಳ್ಳುತ್ತದೆ ಎಂಬ ನೋವಿನ ಮಾತು ಕಲಾವಿದರಿಂದ ಕೇಳಿಬಂತು.
ಕಿರಿಯ ಶಿಲ್ಪಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಹಿರಿಯ ಶಿಲ್ಪಿಗಳು |
ಪ್ರಸ್ತುತ ಸನ್ನಿವೇಶದಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಇಲ್ಲವಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಕಲಾವಿದರನ್ನು ಗುರ್ತಿಸಿ ಬೆಳಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅವಶ್ಯವಾಗುತ್ತಿದ್ದು ಅಕಾಡೆಮಿ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
-------------------------------------------------
ಕಲೆಯ ದೃಷ್ಟಿಯಲ್ಲಿ ಇದೊಂದು ಉತ್ತಮ ವೇದಿಕೆಯಾಗಿದ್ದು ಕಲೆಯ ಉಳಿವು ಹಾಗೂ ಬೆಳವಣಿಗೆಗೆ ಇಂಥ ಶಿಬಿರಗಳು ಪ್ರಯೋಜನಕಾರಿಯಾಗಿದ್ದು ಕಿರಿಯ ಕಲಾವಿದರಿಗೆ ಉತ್ತಮ ಅವಕಾಶ ಕಲ್ಪಿಸಿದಂತಾಗುತ್ತುದೆ.ಈ ಶಿಬಿರದಲ್ಲಿ ಭಾಗವಹಿಸುವುದರಿಂದ ಎಲ್ಲಾರೀತಿಯ ಶಿಲ್ಪಿಗಳ ಕಲಾರಚನೆ ಅಭ್ಯಸಿಸಲು ಅನುಕೂಲವಾಗುತ್ತದೆ.ಕಾರ್ಕಳದಲ್ಲಿ ಶಿಲ್ಪಕಲೆ ಬಗ್ಗೆ ನಾನು ಕಲಿತಿದ್ದು ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ನಮ್ಮ ಬೆಳವಣಿಗೆಗೆ ಪೂರಕವಾಗುತ್ತದೆ: ಶಿಲ್ಪಿ ಮಹಾದೇವ್,ಬಾದಾಮಿ
---------------------------------------
ಶಿಲ್ಪಕಲೆಗೆ ಒಳ್ಳೆಯ ಪ್ರೋತ್ಸಾಹ
ಪ್ರತ್ಯುತ್ತರಅಳಿಸಿ