ಹುಳಿಯಾರು ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ 40 ನೇ ವರ್ಷದ ರಥೋತ್ಸವವು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ನೆರವೇರಿತು.ಮಂಗಳವಾಧ್ಯದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರನ್ನು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದೇವತೆ ಹುಳಿಯಾರಮ್ಮ,ಕೆಂಚಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ಗೌಡಗೆರೆಯ ದುರ್ಗಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮನವರೊಂದಿಗೆ ಭೇಟಿ ಮಾಡಿಸಿ ಭಕ್ತಾಧಿಗಳ ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು ಹಾಗೂ ಹೂವಿನ ಹಾರಗಳಿಂದ ಸರ್ವಾಲಂಕೃತಗೊಂಡ ರಥಕ್ಕೆ ಏರಿಸಲಾಯಿತು.ಮದ್ಯಾಹ್ನ ೨ ಗಂಟೆಗೆ ಹೊಸದುರ್ಗ ಕನಕಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು, ಧರ್ಮದರ್ಶಿ ಹನುಮಂತಯ್ಯ,ಕನ್ವೀನರ್ ಎಲೆಬಳ್ಳಿ ಜಯಣ್ಣ,ದೇವಸ್ಥಾವದ ಸಮಿತಿ ಸದಸ್ಯರು ಹಾಗೂ ಗಣ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಬೇಸಿಗೆಯ ಸುಡುಬಿಸಿಲನ್ನು ಲೆಕ್ಕಿಸದೆ ಮುಂಜಾನೆಯಿಂದಲೇ ಕಿಕ್ಕಿರಿದು ನೆರದಿದ್ದ ಭಕ್ತಾಧಿಗಳು ಜಯಘೋಷದೊಂದಿಗೆ ತೇರನ್ನೆಳದು ಸಂಭ್ರಮಿಸಿದರು. ಮಂಗಳವಾಧ್ಯದೊಂದಿಗೆ ಸಾಗಿಬಂದ ರಥಕ್ಕೆ ಬಾಳೆಹಣ್ಣು,ಧವನ ತೂರುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಹಾಗೂ ಹರಕೆಯನ್ನು ಸಮರ್ಪಿಸಿದರು.ನಂತರ ನೆರದಿದ್ದ ಭಕ್ತಾಧಿಗಳು ಹಾಗೂ ಹೆಣ್ಣುಮಕ್ಕಳು ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟ ದೈವವನ್ನು ಕಣ್ಣಿಗೆ ತುಂಬಿಕೊಂಡರು.ರಥೋತ್ಸವದ ಅಂಗವಾಗಿ ಪಾನಕ,ಕೋಸುಂಬರಿ ವಿತರಿಸಲಾಯಿತು.ಬೆಂಗಳೂರು ಕಾಡಿಗಾನಹಳ್ಳಿಯ ಸುಬ್ರಹ್ಮಣ್ಯ ಅವರಿಂದ ಭಕ್ತಾಧಿಗಳಿಗೆ ಹಾಗೂ ವಿಪ್ರಸಂಘದಿಂದ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ