ಅಪಾಯಕಾರಿ ಕೆಲಸ ನಿರ್ವಹಿಸುವ ಇವರಿಗೆ ಒಪ್ಪತ್ತಿನ ಊಟಕ್ಕೂ ತತ್ವಾರ
---------------------------------------------------------
ವರದಿ:ಡಿ.ಆರ್.ನರೇಂದ್ರ ಬಾಬು
ಹುಳಿಯಾರು: ತಿಪಟೂರು ಬೆ.ವಿ.ಕಂ ವಿಭಾಗದ ಮಾನ್ಸೂನ್ ಗ್ಯಾಂಗ್ಮನ್ ಉದ್ಯೋಗಿಗಳಿಗೆ ಇತ್ತ ಕೆಲಸವೂ ಇಲ್ಲ,ಅತ್ತ ಸಂಬಳವೂ ಇಲ್ಲ ಎಂಬ ತ್ರಿಶುಂಕು ಸ್ಥಿತಿ ನಿರ್ಮಾಣವಾಗಿದೆ.
ಯಾರಿವರು:ಮಳೆಗಾಲದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಇಲಾಖೆ ಮಾನ್ಸೂನ್ ಸಿಬ್ಬಂದಿಯನ್ನು ಅಲ್ಪ ಅವಧಿಗಾಗಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತದೆ. ಮಳೆಗಾಳಿಯಿಂದ ವಿದ್ಯುತ್ ತಂತಿಗಳ ಮೇಲೆ ಬೀಳುವ ಮರಗಳು ಅಥವಾ ಹೊಸದಾಗಿ ಸಂಪರ್ಕ ಮಾರ್ಗದ ಕಾಮಗಾರಿ ಕೈಗೊಳ್ಳುವಾಗ ಅಡ್ಡವಾಗುವ ಮರಗಳ ತೆರವಿಗೆ ಇವರುಗಳನ್ನು ಬಳಸಿಕೊಳ್ಳಲಾಗುತ್ತದೆ.ಇದಕ್ಕಾಗಿ ಹೊರಗುತ್ತಿಗೆ ಪಡೆಯುವ ಖಾಸಗಿ ಕಂಪೆನಿಗಳು ಮೇ ತಿಂಗಳಿನಿಂದ ಅಕ್ಟೋಬರ್ವರೆಗೆ ಅಂದರೆ ಮಾನ್ಸೂನ್ ಆರಂಭದ ಸಮಯದಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಿದ್ದು ಇವರುಗಳನ್ನು 'ಮಾನ್ಸೂನ್ ಗ್ಯಾಂಗ್ ಮನ್ಗಳು' ಎನ್ನುತ್ತಾರೆ.
ಹುಳಿಯಾರು ಬೆ.ವಿ.ಕಂ ಕಚೇರಿ. |
ವರ್ಷಕ್ಕೆ ೬ ತಿಂಗಳಿಗೆ ಮಳೆಗಾಲದ ಅವಧಿಗೆ ಮಾತ್ರ ಕೆಲಸ ನೀಡುವ ಗುತ್ತಿಗೆದಾರರು ಇವರನ್ನು ಮೂರು ತಿಂಗಳಿನ ನಂತರ ಮುಂದಿನ ಆರು ತಿಂಗಳಿಗೆ ಪುನಃ ನೇಮಿಸಿಕೊಳ್ಳುತ್ತದೆ.
ತಿಪಟೂರು ಬೆ.ವಿ.ಕಂ ವಿಭಾಗದಲ್ಲಿ ೬೦ ಮಂದಿ ಮಾನ್ಸೂನ್ ಗ್ಯಾಂಗ್ಮನ್ ಗಳಿದ್ದು ಮೂರು ಉಪವಿಭಾಗಗಳಾದ ತುರುವೇಕೆರೆ, ಚಿ.ನಾ ಹಳ್ಳಿ ಹಾಗೂ ತಿಪಟೂರುನಲ್ಲಿ ತಲಾ ೨೦ರಂತೆ ಗ್ಯಾಂಗ್ಮನ್ ಉದ್ಯೋಗಿಗಳು ಕೆಲಸಮಾಡುತ್ತಿದ್ದಾರೆ. ಇವರುಗಳನ್ನು ದಾವಣಗೆರೆಯ ಶ್ರೀ ಮಂಜುನಾಥಸ್ವಾಮಿ ಎಲೆಕ್ಟ್ರಿಕಲ್ಸ್ ೨೦೦೯-೧೦ ರಿಂದಲೂ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಟ್ಟಿದೆ.
ಇದೀಗ ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ಉಪವಿಭಾಗದ ವ್ಯಾಪ್ತಿಯ ೨೦ ಮಂದಿ ಗ್ಯಾಂಗ್ಮನ್ ಅವಧಿ ಡಿಸಂಬರ್ ಗೆ ಮುಗಿದಿದ್ದು ಫೆಬ್ರವರಿಯವರೆಗೆಅವಧಿ ವಿಸ್ತರಿಸಲಾಗಿತ್ತು. ಇದೀಗ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಪುನಹ ಕೆಲಸಕ್ಕೆ ತೆಗೆದುಕೊಳ್ಳದ ಗುತ್ತಿಗೆದಾರರು ಡಿಸಂಬರ್ ನಿಂದ ಕೊಡಬೇಕಿದ್ದ ಮೂರು ತಿಂಗಳ ಸಂಬಳವನ್ನು ಹಾಗೂ ಒಂದೂವರೆ ವರ್ಷದ ಪಿ.ಎಫ್ ಅನ್ನು ಇದುರೆಗೂ ನೀಡಿಲ್ಲ.ಇತ್ತ ಸಂಬಳವೂ ಇಲ್ಲದೆ ಪುನಃ ಕೆಲಸಕ್ಕೂ ತೆಗೆದುಕೊಳ್ಳದಿರುವುದರಿಂದ ಇವರುಗಳಿಗೆ ಒಪ್ಪತ್ತಿನ ಊಟಕ್ಕೂ ತತ್ವಾರವಾಗಿದೆ.
ವಿದ್ಯುತ್ ಕೆಲಸವೇ ಅಪಾಯ.ಅದರಲ್ಲೂ ಮಳೆಗಾಲದಲ್ಲಿ ಕೆಲಸಮಾಡುವುದು ಇನ್ನೂ ಹೆಚ್ಚಿನ ಅಪಾಯಕಾರಿಯಾಗಿದ್ದು ಇವರುಗಳ ಜೀವಕ್ಕೆ ಹಾಗೂ ಕೆಲಸಕ್ಕೆ ಯಾವುದೇ ಭದ್ರತೆಯಿರುವುದಿಲ್ಲ
ಇವರಿಗೆ ಕಾನೂನು ಪ್ರಕಾರ ಭವಿಷ್ಯನಿಧಿ, ವೈದ್ಯಕೀಯ ಸೌಲಭ್ಯವಿದ್ದರೂ ಸಹ ಈ ಬಗ್ಗೆ ಅರಿವಿಲ್ಲದಿರುವುದರಿಂದ ಗುತ್ತಿಗೆದಾರರಿಂದ ಶೋಷಣೆ ತಪ್ಪಿಲ್ಲ.
ಹೋಗಲಿ ಸಂಬಳವಾದರೂ ಸರಿಯಾಗಿ ನೀಡುತ್ತಾರಾ ಎಂದರೆ ಅದರಲ್ಲೂ ಅರ್ಧ ವೇತನಕ್ಕೆ ತೃಪ್ತಿಗೊಳ್ಳುವಂತಾಗಿದೆ.ಇಲಾಖೆಯು ಒಬ್ಬರಿಗೆ ತಲಾ 8,729 ರೂ ನಂತೆ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಟ್ಟರೂ ಸಹ ಗುತ್ತಿಗೆದಾರ ಇವರಿಗೆ ನೀಡುವ ಸಂಬಳ ಕೇವಲ ರೂ. 4,500 ಮಾತ್ರ.ಮಳೆ ಮತ್ತೊಂದು ಕಾರಣಕ್ಕೂ ಒಂದಿನವೇನಾದರೂ ಕೆಲಸಕ್ಕೆ ಹಾಜರಾಗದಿದ್ದರೆ ಆ ದಿನದ ವೇತನ ಸಹ ಕಡಿತ ಮಾಡುತ್ತಾರೆ.ಪಗಾರವೇ ಅರ್ಧ ಎಂಬತ್ತಾಗಿರುವುದರಿಂದ ಇನ್ನೂ ಭತ್ಯೆಗಳು ದೂರದ ಮಾತಾಗಿದೆ.
ಮಳೆ ಚಳಿಯೆನ್ನದೆ ,ಹಗಲು ರಾತ್ರಿಯೆನ್ನದೆ ಹೊರ ಗುತ್ತಿಗೆಯಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುವ ಶೋಚನೀಯ ಸ್ಥಿತಿಯಲ್ಲಿರುವ ಮಾನ್ಸೂನ್ ಗ್ಯಾಂಗ್ ಕಾಯಂ ನೌಕರರನ್ನಾಗಿ ಇಲಾಖೆ ಪರಿಗಣಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆಯುವುದಾ ಕಾದು ನೋಡಬೇಕಿದೆ.
------------------------------------
ಗ್ಯಾಂಗ್ ಮನ್ ಗಳ ಸಮಸ್ಯೆ ಬಗ್ಗೆ ಅರಿವಿದೆ.ಹಾಗೂ ಸಂಬಳ ನೀಡಿಲ್ಲದ್ದರ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರ ವಿರುದ್ದ ಕ್ರಮಕೈಗೊಳ್ಳಲು ಸೂಚಿಸಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಗ್ಯಾಂಗ್ ಮನ್ ಗಳ ಅವಶ್ಯಕತೆಯಿದೆ.ಆದರೆ ಮುಂದಿನ ಆರು ತಿಂಗಳ ಅವಧಿಗೆ ಇವರುಗಳ ಅಪ್ರೂವಲ್ ಆಗದಿರುವುದರಿಂದ ಸಮಸ್ಯೆಯಾಗಿದೆ: ಉಮೇಶ್ ನಾಯಕ್ ,ಸೆಕ್ಷನ್ ಆಫೀಸರ್,ಬೆಸ್ಕಾಂ
---------
ಹುಳಿಯಾರು ಸಬ್ ಸ್ಟೇಶನ್ ನಲ್ಲಿ ಎಂಟಕ್ಕೂ ಹೆಚ್ಚು ಹೊರ ಗುತ್ತಿಗೆಯ ಗ್ಯಾಂಗ್ಮನ್ ಗಳಿದ್ದು ಕಳೆದ ಆರುವರ್ಷಗಳಿಂದಲೂ ಮಳೆಚಳಿಯೆನ್ನದೆ ಕೆಲಸ ನಿರ್ವಹಿಸ್ಸುತ್ತಿರುವ ಇವರನ್ನು ಮುಂದಿನ ಅವಧಿಗೆ ನೇಮಿಸಿಕೊಳ್ಳುವುದಲ್ಲದೆ ಇವರನ್ನು ಕಾಯಂ ಮಾಡಬೇಕು.ಕಡೆ ಪಕ್ಷ ಎಲ್ಲಾ ಸವಲತ್ತುಗಳೊಂದಿಗೆ ಮಜುದೂರ್ ಗ್ಯಾಂಗ್ಮನ್ ಆಗಿ ನೇಮಿಸಿಕೊಳ್ಳಬೇಕು.ಈ ಬಗ್ಗೆ ಕಾನೂನು ಸಚಿವ ಜಯಚಂದ್ರ ಅವರಲ್ಲೂ ಸಹ ಮನವಿ ಮಾಡಲಾಗಿದೆ.ದಬ್ಬಗುಂಟೆ ರವಿಕುಮಾರ್- ಮಾಜಿ ಗ್ರಾಪಂ ಅಧ್ಯಕ್ಷ ,ದಸೂಡಿ,
----------------------------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ