ಹುಳಿಯಾರು:ಗಾಂಧಿ, ಅಂಬೇಡ್ಕರ್ ಮೊದಲಾದ ಮಹನೀಯರ ಶ್ರಮದಿಂದಾಗಿ ಇಂದು ನಾವು ಗಣರಾಜ್ಯವನ್ನು ಅನುಭವಿಸುತ್ತಿದ್ದೇವೆ. ರಾಜಪ್ರಭುತ್ವದಲ್ಲೂ ಇರಬಹುದಾದ ಕೆಲವೊಂದು ಒಳ್ಳೆಯ ಅಂಶಗಳೂ ಸೇರಿದಂತೆ ದೇಶ ವಿದೇಶಗಳ ಸಂವಿಧಾನವನ್ನು ಪರಾಮರ್ಶಿಸಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.
ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಸಾಂಸ್ಕೃತಿಕ ಸಂಘದ ವತಿಯಿಂದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ "ರಾಷ್ಟ್ರೀಯ ಮತದಾರರ ದಿನ" ಮತ್ತು "72ನೆಯ ಗಣರಾಜ್ಯೋತ್ಸವ"ದ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ "ಮತದಾರರ ಪ್ರತಿಜ್ಞಾ ವಿಧಿ"ಯನ್ನು ಬೋಧಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗಾಗಿ "ಗಣರಾಜ್ಯೋತ್ಸವ" ಕುರಿತು ಭಾಷಣ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. "ಸಂವಿಧಾನ ಮತ್ತು ಮಹಿಳೆ", "ಸಂವಿಧಾನದ ಮಹತ್ವ", "ಹಕ್ಕು ಮತ್ತು ಕರ್ತವ್ಯಗಳು", "ಸಂವಿಧಾನ ರಚನೆ - ಒಂದು ನೋಟ", "ಸಂವಿಧಾನ ಮತ್ತು ಅಂಬೇಡ್ಕರ್"- ಹೀಗೆ ಸಂವಿಧಾನ ಸಂಬಂಧಿ ವಿಭಿನ್ನ ವಿಷಯಗಳ ಮೇಲೆ ವಿದ್ಯಾರ್ಥಿಗಳು ಮಾತನಾಡಿದರು.ಸವಿತಾ ಎಸ್.ಟಿ. "ಪ್ರೇರಣಾ ಗೀತೆ"ಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ "ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಆಯೋಜಿಸಿದ್ದ ಅಂತಿಮ ಬಿ.ಎ. ವಿದ್ಯಾರ್ಥಿಗಳ ಮೆಂಟರ್ ಆದ ಪ್ರೊ. ಮೋಹನ್ ಕುಮಾರ್ ಎಂ.ಜೆ. ಅವರು ಸಂವಿಧಾನದ ಪೀಠಿಕೆಯನ್ನು ಅರ್ಥೈಸಿದರು.
ಭಾಷಣ ಸ್ಪರ್ಧೆಯಲ್ಲಿ ಚೈತ್ರ ಹೆಚ್.ಡಿ. ಪ್ರಥಮ, ಕಾವ್ಯ ಎಲ್.ಎಸ್. ದ್ವಿತೀಯ ಮತ್ತು ಸವಿತಾ ಎಸ್.ಟಿ. ತೃತೀಯ ಬಹುಮಾನವನ್ನು ಪಡೆದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ