ವಿಷಯಕ್ಕೆ ಹೋಗಿ

ಸೀಗೆಬಾಗಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಶಿಕ್ಷಕ ಸಂಯೋಜನಾ ಘಟಕ’ ಉದ್ಘಾಟನೆ ಹಾಗೂ ‘ಲಂಕೇಶ್ ನೆನಪು’ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ‘ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು’ ಮತ್ತು ‘ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆ’, ಸೀಗೆಬಾಗಿ ಗೇಟ್ ಇವರ ಸಂಯುಕ್ತಾಶ್ರಯದಲ್ಲಿ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆಯಲ್ಲಿ  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಶಿಕ್ಷಕ ಸಂಯೋಜನಾ ಘಟಕ’ದ ಉದ್ಘಾಟನೆ ಹಾಗೂ ‘ಲಂಕೇಶ್ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಶಿಕ್ಷಕ ಸಂಯೋಜನಾ ಘಟಕ’ದ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಘಟಕವನ್ನು ಉದ್ಘಾಟಿಸಿದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಎಸ್. ರವಿಕುಮಾರ್ ಕಟ್ಟೇಮನೆ ಅವರು ಮಾತನಾಡಿ ‘ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು’ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಕಾರ್ಯಕ್ರಮಗಳು ತಾಲ್ಲೂಕಿನ ಪ್ರತಿ ಹಳ್ಳಿಗೂ ತಲುಪಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ದಿನ ಸೀಗೆಬಾಗಿ ಅಂತಹ ಗ್ರಾಮಾಂತರ ಪ್ರದೇಶವನ್ನು ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. 
ಲಂಕೇಶ್ ನೆನಪು’ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆ, ಸೀಗೆಬಾಗಿ ಗೇಟ್ ಇಲ್ಲಿನ ಮುಖ್ಯ ಶಿಕ್ಷಕರಾದ ಬಿ. ಶಿವಯ್ಯ  ಅವರು ಮಾತನಾಡಿ ‘ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಸ್ಪಷ್ಟವಾಗಿ ಕನ್ನಡವನ್ನು ಮಾತನಾಡಬೇಕಿದೆ. ಇಂದಿನ ಮಕ್ಕಳೇ ಭವಿಷ್ಯದ ಕನ್ನಡದ ಕಟ್ಟಾಳುಗಳು. ಕನ್ನಡ ಕಟ್ಟುವ ಕಾರ್ಯಕ್ಕೆ ನಮ್ಮ ಶಾಲೆ ಹಾಗೂ ಶಿಕ್ಷಕ ವೃಂದ ಕೈಜೋಡಿಸಲು ಸದಾ ಸಿದ್ಧ ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಪರಿಷತ್ತಿನ ‘ಸಮ್ಮೇಳನ ಸಂಯೋಜನಾ ಘಟಕ’ದ ಪ್ರಧಾನ ಸಂಚಾಲಕರಾದ ಹುಳಿಯಾರ್ ಷಬ್ಬೀರ್ ಅವರು ಶಿಕ್ಷಕ ಸಂಯೋಜನಾ ಘಟಕದ ಪ್ರಾಮುಖ್ಯತೆ ಹಾಗೂ ಇದರ ಅಡಿಯಲ್ಲಿ ಹಮ್ಮಿಕೊಂಡಿರುವ ‘ಲಂಕೇಶ್ ನೆನಪು’ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. 
ತದನಂತರ ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಮೋಹನ್ ಮಿರ್ಲೆ ಅವರು ಪಿ. ಲಂಕೇಶ್ ಅವರನ್ನು ಕುರಿತು ಮಾತನಾಡಿದರು. ಪಿ. ಲಂಕೇಶ್ ಕರ್ನಾಟಕದಲ್ಲಿ ಹೊಸ ರೀತಿಯ ಆಲೋಚನೆಯನ್ನು ಹುಟ್ಟುಹಾಕಿದವರು. ಅವರು ತಮ್ಮ ಸಮಕಾಲೀನ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಎದುರಾದಂತಹ ಸಾಮಾಜಿಕ ಕಥನವನ್ನು ಕಾವ್ಯ ಹಾಗೂ ಸಾಹಿತ್ಯದ ಇತರೆ ಪ್ರಕಾರಗಳಲ್ಲಿ ನಿರೂಪಿಸಿದ ವಾಸ್ತವವಾದಿ. ಈ ನಾಡಿನ ರಾಜಕಾರಣ, ಬದುಕು, ಹಳ್ಳಿ ಮನಸ್ಸುಗಳು ಹಾಗೂ ಈ ನಾಡಿನ ಒಟ್ಟು ಜೀವನದ ಪರಿಕಲ್ಪನೆಗಳನ್ನು ವಾಸ್ತವವಾದಿ ನೆಲೆಯಲ್ಲಿ ಮುಖಾಮುಖಿಯಾದ ನಿಷ್ಠುರವಾದಿ. ಹಾಗೆಯೇ ಕನ್ನಡದ ಜಾಯಮಾನವನ್ನು, ಕನ್ನಡದ ನೆಲೆಗಟ್ಟನ್ನು, ಕನ್ನಡತನವನ್ನು ನೇರವಾಗಿ, ನಿಷ್ಠುರವಾಗಿ, ಪ್ರೀತಿಯಿಂದ, ಸ್ನೇಹಿತನಾಗಿ, ಸಾಹಿತಿಯಾಗಿ, ಪತ್ರಕರ್ತನಾಗಿ, ಅಲ್ಲದೆ ಬಹಳ ಮುಖ್ಯವಾಗಿ ಬುದ್ಧಿ ಕಲಿಸುವ ಮೇಸ್ಟ್ರಾಗಿ ಅಭಿವ್ಯಕ್ತಿಪಡಿಸಿದ ಏಕೈಕ ವ್ಯಕ್ತಿ ನಾನು ಕಂಡಂತೆ ಅದು ಪಿ. ಲಂಕೇಶ್ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಲಂಕೇಶರ ಬಹುಮುಖೀ ಆಸಕ್ತಿ, ಅವರ ಬರವಣಿಗೆಯ ಆಳ ಮತ್ತು ವಿಸ್ತಾರ ಹಾಗೂ ಪ್ರಸ್ತುತ ಸಮಕಾಲೀನ ಸಮಾಜದಲ್ಲಿನ ಬಿಕ್ಕಟ್ಟುಗಳ ಸಂದರ್ಭದಲ್ಲಿ ಲಂಕೇಶರ ಚಿಂತನೆಗಳನ್ನು ಮರು ಅವಲೋಕನ ಮಾಡಬೇಕಾದ ಪ್ರಸ್ತುತತೆಯನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ‘ಶಿಕ್ಷಕ ಸಂಯೋಜನಾ ಘಟಕ’ದ ಪ್ರಧಾನ ಸಂಚಾಲಕರಾದ ಗವಿರಂಗಯ್ಯ ಸಿ., ಅವರು ಮಾತನಾಡುತ್ತಾ ‘ಕನ್ನಡ ನಾಡು-ನುಡಿ ಕಟ್ಟುವಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಕೈಜೋಡಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಾವು ಪಿ. ಲಂಕೇಶ್ ಅವರನ್ನು ಭೇಟಿಯಾಗಿದ್ದ ಸಂಗತಿಯನ್ನೂ ಸ್ಮರಿಸಿಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನ ವಿದ್ಯಾರ್ಥಿ ಮಾರುತಿ ಹೆಚ್.ಆರ್. ಅವರು ‘ಅವ್ವ’ನನ್ನು ಕುರಿತ ಸ್ವರಚಿತ ಕವನವನ್ನು ವಾಚಿಸಿದರು. ಈ ಸಂದರ್ಭದಲ್ಲಿ ‘ಲಂಕೇಶ್ ನೆನಪು’ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಘೋಷಿಸಿದ ಪರಿಷತ್ತಿನ ಅಧ್ಯಕ್ಷರು, ಮೊದಲ ಮೂರು ಸ್ಥಾನ ಪಡೆದ ಪ್ರಬಂಧಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಬಹುಮಾನ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಹುಳಿಯಾರು ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ನಾರಾಯಣಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀಗೇಬಾಗಿ ಗೇಟ್, ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ ಬಿ.ಆರ್. ಮಲ್ಲೇಶಪ್ಪ, ಸೀಗೇಬಾಗಿ ಕ್ಲಸ್ಟರ್ ಶಾಲೆಗಳ ಶಿಕ್ಷಕ ವೃಂದ ಹಾಗೂ ಸೀಗೇಬಾಗಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಧ್ಯಮ ಪ್ರತಿನಿಧಿ ಹಾಗೂ ‘ಕನ್ನಡ ಪ್ರಭ’ ಪತ್ರಿಕೆಯ ವರದಿಗಾರರಾದ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರಾದ ನಟರಾಜ್ ಎಚ್.ಜಿ. ಅವರು ಸ್ವಾಗತಿಸಿದರು. ಶಿಕ್ಷಕಿ ತ್ರಿವೇಣಿ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.