ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಚನ |
ಆಧುನಿಕ ಜಗತ್ತಿನಲ್ಲಿ ಅನೇಕ ಮಕ್ಕಳು ತಂದೆ ತಾಯಿ,ಪೋಷಕರ ಸಂಬಂಧವನ್ನೆ ಧಿಕ್ಕರಿಸಿ ಹೆತ್ತವರನ್ನು ತೊರೆದು ತಮ್ಮಿಷ್ಟದಂತೆ ಮದುವೆಯಾಗಿ ಸಂಸಾರ ನಡೆಸಲು ಮುಂದಾಗುತ್ತಿದ್ದು, ಸಂಸಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಿರಿಯರ ಮಾರ್ಗದರ್ಶನದಂತೆ ವಿವಾಹವಾಗಿ ಸಂಸಾರದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡರೆ ಜೀವನ ಸುಖಮಯವಾಗಿರುತ್ತದೆಂದು ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಹುಳಿಯಾರಿನ ರೋಟರಿಸಂಸ್ಥೆ ಹಾಗೂ ರೋಟರಿ ಕಮ್ಯೂನಿಟಿ ಕಾರ್ಪ್ಸ್ ಅವರ ಸಹಯೋಗದಲ್ಲಿ ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿ ಭಾನುವಾರ ನಡೆದ 30ನೇಉಚಿತ ಸಾಮೂಹಿಕ ವಿವಾಹಮಹೋತ್ಸವದಲ್ಲಿ ನೂತನ ವಧುವರರನ್ನು ಕುರಿತಂತೆ ಆಶೀರ್ವಚನ ನೀಡಿದರು.
ಜೀವನವೆಂಬ ದೊಡ್ಡ ಸಾಗರದಲ್ಲಿ ಸಂಸಾವೆಂಬ ದೋಣಿಯನ್ನು ಗಂಡ ಹೆಂಡತಿ ಸದಾಕಾಲ ಜೊತೆಯಾಗಿ ಸಾಗಿಸುತ್ತಾ,ಜೀವನದಲ್ಲಿ ಸುಖ ದುಖಗಳಲ್ಲಿ ಪರಸ್ಪರ ಜೊತೆಯಾಗಿ ನಡೆದಾಗ ಸಂಸಾರದಲ್ಲಿ ಶಾಂತಿ,ನೆಮ್ಮದಿ,ಸಹೃದಯತೆ,ಸಂತೋಷ ನೆಲೆಸುತ್ತದೆ ಎಂದರು. ಮದುವೆಯಾದ ನಂತರ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಿಕೊಟ್ಟು,ಅವರಲ್ಲಿ ನೈತಿಕತೆ ಬೆಳೆಸಿ, ದೇಶದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುವಂತೆ ಮಾಡುವ ಜವಬ್ದಾರಿ ಪ್ರತಿಯೊಬ್ಬ ತಂದೆತಾಯಂದಿರ ಮೇಲಿದ್ದು,ಜೀವನದಲ್ಲಿ ಎಂದಿಗೂ ಶಾಂತಿ,ನೆಮ್ಮದಿ ಹದಗೆಡದಂತೆ ಎಚ್ಚರವಹಿಸಿ ಸಂಸಾರವನ್ನು ನಡೆಸಬೇಕು ಎಂದು ತಿಳಿಸಿದರು. ಗಂಡುಹೆಣ್ಣು ಪರಸ್ಪರ ಒಪ್ಪಿ,ಹಿರಿಯರ ನೇತೃತ್ವದಲ್ಲಿ ವಿವಾಹವಾಗಿ ಸಂಸಾರ ನಡೆಸಬೇಕು,ಸಂಸಾರದಲ್ಲಿ ಬರುವಂತ ಕೆಲ ಕ್ಷುಲಕ ವಿಚಾರಗಳನ್ನು ದೊಡ್ಡದು ಮಾಡಿ ಗಂಡಹೆಂಡತಿ ವಿವಾಹವಿಚ್ಚೇದನಕ್ಕೆ ಮುಂದಾಗುವುದು ನಮ್ಮ ಹಿಂದೂ ಪರಂಪರೆಗೆ ವಿರುದ್ದವಾಗಿ ನಡೆದಂತೆ,ಯಾರೊಬ್ಬರು ಸಹ ಕೋಪದ ಕೈಗೆ ಬುದ್ದಿಯನ್ನು ಕೊಡದೆ ಸಂಸಾರವನ್ನು ನಡೆಸುವಂತೆ ತಿಳಿಸಿದರು.
ಉಚಿತ ಸಾಮೂಹಿಕ ವಿವಾಹದಲ್ಲಿ ಸಂಸಾರ ಬಂಧನಕ್ಕೊಳಗಾದ 16 ಜೋಡಿಗಳು. |
ಇಂದಿನ ಬರಗಾಲದ ಪರಿಸ್ಥಿತಿಯಲ್ಲಿ ಒಂದು ಮದುವೆ ಮಾಡಬೇಕಾದರೆ ಲಕ್ಷಾಂತರ ರೂ ವೆಚ್ಚವಾಗುತ್ತದೆ, ಇದನ್ನೆಲ್ಲಾ ಮನಗಂಡ ರೋಟರಿ ಸಂಸ್ಥೆಯವರು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಮಾಡುತ್ತಾ ಸಾಗುತ್ತಿದ್ದು, ಬಡಜನರ ಪಾಲಿಗೆ ಹಾಗೂ ಸಮಾಜದ ದೃಷ್ಠಿಯಲ್ಲಿ ಅವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು. ಈ ಬಾರಿ ಕೇವಲ 16 ಜೋಡಿ ನವ ಸಂಸಾರ ಬಂಧನಕ್ಕೆ ಒಳಗಾಗಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಳವಾಗಲಿ,ಸಂಸ್ಥೆಯ ಬೆಳವಣಿಗೆಗೆ ನಮ್ಮೆಲ್ಲರ ಸಹಕಾರ ಅಗತ್ಯವಾಗಿರಬೇಕೆಂದು ಆಶಿಸಿದರು.
ವಿವಾಹದಲ್ಲಿ ನೂತನವಧುವರರಿಗೆ ರೇಷ್ಮೆಸೀರೆ ವಿತರಿಸಲಾಯಿತು. |
ರೋಟರಿ ಕಾರ್ಯದರ್ಶಿ ಗಂಗಣ್ಣ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ರೋಟರಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನಸೇವೆ ಮುಂದಾಗಿದ್ದು,ರಕ್ತದಾನಶಿಬಿರ,ಹೆಲ್ತ್ ಚಕಫ್,ಹೃದಯ ಶಸ್ತ್ರಚಿಕಿತ್ಸೆಯಂತಹ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾ ಸಾಗಿದೆ.12ವರ್ಷ ಒಳಗಿನ ಮಕ್ಕಳಿಗೆ ಹೃದಯಸಂಬಂಧಿ ಕಾಯಿಲೆಗಳಿಗೆ ಸಂಸ್ಥೆವತಿಯಿಂದ ಉಚಿತವಾಗಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ವಿವಾಹಮಹೋತ್ಸವದಲ್ಲಿ ಶ್ರೀರಾಮಹಾಲ್ ನ ಟಿ.ಆರ್.ಲಕ್ಷ್ಮಿಕಾಂತ್ ,ರೋಟರಿ ಅಧ್ಯಕ್ಷ ಈ.ರವೀಶ್,ರೋಟರಿ ಕಮ್ಯೂನಿಟಿ ಕಾರ್ಪ್ಸ್ ಅಧ್ಯಕ್ಷ ರಮೇಶ್,ಶಿಬಿರಾಧಿಕಾರಿಗಳಾಗಿ ಮಂಜುನಾಥ ಗುಪ್ತ, ಸ್ಟುಡಿಯೊ ಸುಧೀರ್, ದಾನಿಗಳಾದ ವೆಂಕಟಾಛಲಪತಿ ಶೆಟ್ಟಿ,ಮುಖಂಡರಾದ ನಂದಿಹಳ್ಳಿ ಶಿವಣ್ಣ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ