ಉಳಿತಾಯ ಖಾತೆಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳಿ: ಎಸ್ಬಿಐನ ದಿವ್ಯಶ್ರೀ ಸಲಹೆ
-----------------------
ಹುಳಿಯಾರು : ಬ್ಯಾಂಕುಗಳಲ್ಲಿ ತೆರೆದಿರುವ ಉಳಿತಾಯ ಖಾತೆಗಳನ್ನು ನಿರಂತರವಾಗಿ ವ್ಯವಹರಿಸಿ ಸಕ್ರಿಯವಾಗಿ ಇಟ್ಟುಕೊಳ್ಳುವಂತೆ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ತುಮಕೂರು ಪ್ರಾದೇಶಿಕ ಕಚೇರಿಯ ಆರ್ಥಿಕ ಸೇರ್ಪಡೆ ವಿಭಾಗದ ವ್ಯವಸ್ಥಾಪಕಿ ದಿವ್ಯಶ್ರೀ ತಿಳಿಸಿದರು.
ಹುಳಿಯಾರಿನ ಸ್ಟೇಟ್ ಬ್ಯಾಂಕ್ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಮಟ್ಟದ ವಿನಾಯಕ ಸಂಜೀವಿನಿ ಒಕ್ಕೂಟ ಜಂಟಿಯಾಗಿ ತಿಮ್ಲಾಪುರದ ಚಂದ್ರಮೌಳೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜನಸುರಕ್ಷಾ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಉಳಿತಾಯ ಖಾತೆಗಳಿಗೆ ಹಣವನ್ನು ಜಮಾ ಮಾಡದೆ ಅಥವಾ ವಿತ್ಡ್ರಾ ಮಾಡದೆ ಇದ್ದರೆ, ಆ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಆದ್ದರಿಂದ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಸಕ್ರಿಯವಾಗಿಡಲು ನಿಯಮಿತವಾಗಿ ಹಣದ ವ್ಯವಹಾರ ನಡೆಸುವುದು ಬಹಳ ಮುಖ್ಯ. ಜತೆಗೆ, ಕೆವೈಸಿ (KYC) ದಾಖಲೆಗಳಾದ ಆಧಾರ್, ಪಾನ್ ಕಾರ್ಡ್, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಲ್ಲಿ ಏನಾದರೂ ಬದಲಾವಣೆ ಇದ್ದರೆ, ಅವುಗಳನ್ನು ಬ್ಯಾಂಕಿಗೆ ಒದಗಿಸಿ ಖಾತೆಯನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎನ್.ಆರ್.ಎಲ್.ಎಂ ಒಕ್ಕೂಟದ ಮ್ಯಾನೇಜರ್ ಕಿಶೋರ್ ಮಾತನಾಡಿ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಸಾಲ ಸೌಲಭ್ಯಗಳಂತಹ ಕೇಂದ್ರ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಲು ಮಹಿಳೆಯರಿಗೆ ಕರೆ ನೀಡಿದರು.
ತಿಮ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕಣ್ಣ ಮಾತನಾಡಿ, ಬ್ಯಾಂಕುಗಳು ನೇರವಾಗಿ ಹಳ್ಳಿಗಳಿಗೆ ಬಂದು ಜನರ ಸಮಸ್ಯೆಗಳನ್ನು ಆಲಿಸುವುದು ಶ್ಲಾಘನೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹುಳಿಯಾರು ಶಾಖೆಯ ಮ್ಯಾನೇಜರ್ ಸುರೇಶ್ ಬಾಬು, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ, ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ಸುಮಾ, ಖಜಾಂಚಿ ಕುಸುಮ, ಎಂ.ಬಿ.ಕೆ. ಪ್ರೇಮ, ಎಲ್.ಸಿ.ಆರ್.ಪಿ.ಗಳಾದ ಕವಿರತ್ನ, ಮಂಜುಳಾ, ದ್ರಾಕ್ಷಾಯಿಣಿ, ಪಶುಸಖಿ ನಾಗರತ್ನ, ಕೃಷಿ ಸಖಿ ಶೈಲಾ ಹಾಗೂ ಬಿಸಿ ಸಖಿ ಲತಾಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೊಸಳ್ಳಿ, ಹೊಸಳ್ಳಿ ಪಾಳ್ಯ, ಸೀಗೆಬಾಗಿ, ನಂದಿಹಳ್ಳಿ, ತೊರೆಮನೆ, ತೊರೆ ಸೂರಗೊಂಡನಹಳ್ಳಿ, ತಿಮ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ