ಭಾವೈಕ್ಯತೆಗೆ ಸಾಕ್ಷಿಯಾದ ಹುಳಿಯಾರಿನ ಗಣಪತಿ ವಿಸರ್ಜನಾ ಮಹೋತ್ಸವ
ಹುಳಿಯಾರು: ಹುಳಿಯಾರಿನಲ್ಲಿ ಇತ್ತೀಚೆಗೆ ನಡೆದ ಗಣಪತಿ ವಿಸರ್ಜನಾ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗದೆ, ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಯಿತು. ಪ್ರಸನ್ನ ಗಣಪತಿಯ 25ನೇ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಬಾಲಾಜಿ ಥಿಯೇಟರ್ ಹಿಂಭಾಗದ 'ಬೆಂಕಿ ಗಣಪತಿ'ಯ ವಿಸರ್ಜನಾ ಮಹೋತ್ಸವವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಪಟ್ಟಣದಾದ್ಯಂತ ಉತ್ಸವದ ವಾತಾವರಣ ಮನೆ ಮಾಡಿತ್ತು. ಈ ಧಾರ್ಮಿಕ ಮೆರವಣಿಗೆಗೆ ಪೂರಕವಾಗಿ ಮುಸ್ಲಿಂ ಯುವ ಸಮುದಾಯವು ಪ್ರದರ್ಶಿಸಿದ ಸೌಹಾರ್ದಯುತ ನಡೆ, ಎಲ್ಲರ ಗಮನ ಸೆಳೆಯಿತು.
ಮುಸ್ಲಿಂ ಸಮುದಾಯದಿಂದ ಪಾನಕದ ವ್ಯವಸ್ಥೆ : ಭಾವೈಕ್ಯತೆಯ ಸಂದೇಶ ಸಾರಿದ ಈ ಕಾರ್ಯಕ್ರಮದಲ್ಲಿ, ಮುಸ್ಲಿಂ ಸಮುದಾಯದ ಯುವಕರು ಅಬ್ದುಲ್ ಕಲಾಂ ಸರ್ಕಲ್ನಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದರು. ಗಣಪತಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲ ಭಕ್ತಾದಿಗಳಿಗಾಗಿ ಶಾಮಿಯಾನ ಹಾಕಿ, ಬಿಸಿಲಿನ ಝಳದಿಂದ ದಣಿವಾದವರಿಗೆ ತಂಪು ನೀಡಲು ನೀರು, ಮಜ್ಜಿಗೆ ಮತ್ತು ಪಾನಕದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಜಾತಿ-ಮತವನ್ನು ಮೀರಿ ಆಯೋಜಿಸಲಾದ ಈ ಉಪಚಾರವು ಸಾಮರಸ್ಯದ ಸಂದೇಶವನ್ನು ಸಾರಿತು.ಇದಲ್ಲದೆ, ಎರಡೂ ಗಣಪತಿ ವಿಗ್ರಹಗಳಿಗೆ ಗುಲಾಬಿ ಹಾರಗಳನ್ನು ಸಿದ್ಧಪಡಿಸಿ ತಂದ ಮುಸ್ಲಿಂ ಯುವಕರು, ಮೆರವಣಿಗೆಯ ಸಮಯದಲ್ಲಿ ಜೈಕಾರದ ಘೋಷಣೆಗಳೊಂದಿಗೆ ಟ್ರಾಕ್ಟರ್ ಏರಿ ಗಣಪತಿಗೆ ಹಾರಗಳನ್ನು ಸಮರ್ಪಿಸಿದರು. ಈ ಕಾರ್ಯವು ಹುಳಿಯಾರಿನ ಗಣಪತಿ ವಿಸರ್ಜನಾ ಮಹೋತ್ಸವವು ಧರ್ಮದ ಗಡಿಗಳನ್ನು ದಾಟಿ, "ನಾವು ಎಲ್ಲರೂ ಒಂದೇ" ಎಂಬ ಸಂದೇಶವನ್ನು ಇಡೀ ಸಮಾಜಕ್ಕೆ ಸಾರುವ ಮೂಲಕ ಭಾವೈಕ್ಯತೆಯನ್ನು ಬಿಂಬಿಸಿತು. ಭಾವೈಕ್ಯತೆಯ ಸಂಕೇತವಾಗಿ ಹುಳಿಯಾರಿನ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಿತು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ