ತುಮಕೂರಿಗೆ ಇದೇ 27ರಂದು ಬಸವ ಸಂಸ್ಕೃತಿ ಅಭಿಯಾನ ರಥ ಪ್ರವೇಶ
--------------------------------
ಚಿಕ್ಕನಾಯಕನಹಳ್ಳಿ : ಬಸವ ಸಂಸ್ಕೃತಿ ಅಭಿಯಾನವು ನಾಡಿನಾದ್ಯಂತ ಸಂಚಾರ ಮಾಡುತ್ತಿದ್ದು, ಇದೇ ತಿಂಗಳು 27ರಂದು ತುಮಕೂರು ಪ್ರವೇಶಿಸಲಿದೆ. ಇದರ ಅಂಗವಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಾಲ್ಕು ದಿನಗಳ ಕಾಲ ಸಂಚರಿಸಿದ ಬಸವ ಸಂಸ್ಕೃತಿ ಜಾಗೃತಿ ರಥಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಯಾತ್ರೆಯು ತಾಲೂಕಿನಾದ್ಯಂತ ಬಸವಾದಿ ಶರಣರ ಸಂಸ್ಕೃತಿ ಮತ್ತು ತತ್ವಗಳ ಬಗ್ಗೆ ಜನರಿಗೆ ಅರಿವು ಮೂಡಿಸಿತು.ಯಾತ್ರೆಯ ವಿವರ : 4 ದಿನಗಳ ಕಾಲ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿದ ಈ ರಥವು, ಲಿಂಗಾಯತ ಸಮುದಾಯದ ಜನರನ್ನು ಜಾಗೃತಗೊಳಿಸುವ ಸಭೆಗಳನ್ನು ನಡೆಸಿತು. ಈ ಅಭಿಯಾನದಲ್ಲಿ ಹಲವು ಮಠಗಳ ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರು ಭಾಗವಹಿಸಿ, ಬಸವ ಧರ್ಮದ ಪ್ರಾಮುಖ್ಯತೆ ಮತ್ತು ಜಾತಿ ಗಣತಿಯಲ್ಲಿ ಲಿಂಗಾಯತ ಧರ್ಮವನ್ನು ನಮೂದಿಸುವ ಬಗ್ಗೆ ಜನರಿಗೆ ಮನದಟ್ಟು ಮಾಡಿದರು.
ಸೌಹಾರ್ದತೆಯ ಪ್ರತೀಕ: ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ರಥಯಾತ್ರೆಯು ಸಂಚರಿಸಿದಾಗ, ಸ್ಥಳೀಯ ಮುಸ್ಲಿಂ ಸಮುದಾಯದವರು ಯಾತ್ರೆಯಲ್ಲಿ ಭಾಗವಹಿಸಿದ್ದ ಕಲ್ಕೆರೆ ಮಠದ ಸ್ವಾಮೀಜಿಗಳನ್ನು ಶಾಲು ಮತ್ತು ಪುಷ್ಪಹಾರ ಹಾಕಿ ಗೌರವಿಸಿದರು. ಇದು ಯಾತ್ರೆಯ ಒಂದು ವಿಶೇಷ ಸೌಹಾರ್ದ ಕ್ಷಣವಾಗಿತ್ತು.
ಪ್ರಮುಖರ ಉಪಸ್ಥಿತಿ : ಯಾತ್ರೆಯ ಪೂರ್ವಭಾವಿ ಸಭೆಗೆ ಯಳನಡು ಶ್ರೀ ಮಠದ ಜ್ಞಾನಪ್ರಭು ಶ್ರೀಗಳು ಚಾಲನೆ ನೀಡಿದರು. ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು ಹಾಗೂ ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾಗೋಷ್ಠಿ ನಡೆಸಿ, ಯಾತ್ರೆಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದರು.
ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು, ಜಾತಿ ಗಣತಿಯ ನಮೂನೆಗಳಲ್ಲಿ ಧರ್ಮದ ಕಾಲಂನಲ್ಲಿ "ಲಿಂಗಾಯತ" ಹಾಗೂ ಜಾತಿಯ ಕಾಲಂನಲ್ಲಿ "ನೊಳಂಬ" ಅಥವಾ ಇತರೆ ಲಿಂಗಾಯತ ಉಪಜಾತಿಗಳನ್ನು ನಮೂದಿಸುವ ಮಹತ್ವವನ್ನು ಒತ್ತಿ ಹೇಳಿದರು. ಪೊಲೀಸ್ ಅಧಿಕಾರಿ ರವೀಶ್ ಅವರು ಬಸವಣ್ಣನವರ ವಚನಗಳ ಮೂಲಕ ಲಿಂಗಾಯತ ಧರ್ಮದ ಬಗ್ಗೆ ವಿವರಿಸಿದರು.
ಯಾತ್ರೆಯ ಸಂದರ್ಭದಲ್ಲಿ ಬಸವರಾಜ ಹೊನ್ನೇಬಾಗಿ, ಶಶಿಧರ್ ಹೊನ್ನೇಬಾಗಿ, ಬರಗೂರು ಕಿರಣ್, ಎಳನಾಡು ಬಸವರಾಜೇಂದ್ರ, ರಂಗನಕೆರೆ ವಿರೂಪಾಕ್ಷಯ್ಯ, ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ಜಗದೀಶ್ ಗೋಡೆಕೆರೆ, ಷಡಕ್ಷರಿ ಶಂಕರ ಲಿಂಗಪ್ಪ, ಮರಿಸ್ವಾಮಿ, ಸುನಿಲ್ ಜೆಸಿಪುರ , ಜಿತೇಂದ್ರ ಜೆಸಿಪುರ ಸೇರಿದ್ದಂತೆ ಕೆಂಕೆರೆ ಹುಳಿಯಾರು ಬಸವ ಬಳಗದ ಸದ್ಭಕ್ತರು, ಮಠಗಳ ಗುರುಗಳು, ಆಯಾ ಗ್ರಾಮಗಳಲ್ಲಿನ ಸಮುದಾಯದ ಪ್ರಮುಖರು, ಮುಖಂಡರು ಪಾಲ್ಗೊಂಡು ಬೆಂಬಲಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಯಾತ್ರೆಯುದ್ದಕ್ಕೂ ಆದ ಎಲ್ಲಾ ಖರ್ಚು-ವೆಚ್ಚಗಳನ್ನು ತಾಲೂಕಿನ ವಿವಿಧ ಗ್ರಾಮಗಳ ಸಮುದಾಯದವರು ಭರಿಸಿ, ದಾಸೋಹ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಸ್ವಯಂ ಪ್ರೇರಿತವಾಗಿ ಬಸವ ಧ್ವಜ ಕಟ್ಟಿಕೊಂಡು ಅನೇಕ ಗ್ರಾಮಗಳ ಜನತೆ ರಥಯಾತ್ರೆಯಲ್ಲಿ ಭಾಗವಹಿಸಿ, ಬಸವ ಪ್ರಜ್ಞೆಯನ್ನು ಮೆರೆದರು. ಈ ಯಶಸ್ವಿ ಯಾತ್ರೆಯು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ