✍️ನರೇಂದ್ರಬಾಬು-ಹುಳಿಯಾರು-9448760070-
-----------------
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮತ್ತೆ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ನೀಡಿದ್ದ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹುಳಿಯಾರಿನ ರೈತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೇಡಿಕೆ ಈಡೇರಿಸುವಲ್ಲಿ ಪಂಚಾಯಿತಿ ವಿಫಲ :ಕಳೆದ ಸೆಪ್ಟೆಂಬರ್ 15ರಂದು ಪಟ್ಟಣದ ಹತ್ತು ಹಲವು ಸಮಸ್ಯೆಗಳ ಕುರಿತು ಮತ್ತು ರೈತರ ವಾರದ ಸಂತೆಗೆ ಅಗತ್ಯ ಸೌಲಭ್ಯಗಳಾದ ನೀರು, ನೆರಳು ಹಾಗೂ ಶೌಚಾಲಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಧರಣಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಪಂಚಾಯಿತಿ ಅಧಿಕಾರಿಗಳು 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಆಶ್ವಾಸನೆಗಳು ಈಡೇರದ ಕಾರಣ, ಮತ್ತೆ ಸೋಮವಾರದಿಂದ ಧರಣಿ ಆರಂಭಿಸಲಾಗುವುದು ಎಂದು ಚಂದ್ರಣ್ಣ ಹೇಳಿದರು. ಪಂಚಾಯಿತಿ ಸದಸ್ಯರು ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಧರಣಿ ಹಿಂಪಡೆಯಲ್ಲ: ಹೊಸಹಳ್ಳಿ ಚಂದ್ರಣ್ಣ ಖಡಕ್ ಎಚ್ಚರಿಕೆ
ಈ ಬಾರಿ ಯಾವುದೇ ಹಬ್ಬ ಅಥವಾ ಆಶ್ವಾಸನೆಗಳಿಗೆ ನಾವು ಜಗ್ಗುವುದಿಲ್ಲ. ಬೇಡಿಕೆಗಳು ಸಂಪೂರ್ಣವಾಗಿ ಈಡೇರುವವರೆಗೂ ಧರಣಿಯನ್ನು ಹಿಂಪಡೆಯುವುದಿಲ್ಲ," ಎಂದು ಹೊಸಹಳ್ಳಿ ಚಂದ್ರಣ್ಣ ಖಡಕ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ತುಮಕೂರು ಜಿಲ್ಲಾ ಕಾರ್ಯದರ್ಶಿ ಕಲ್ಲಹಳ್ಳಿ ಮಲ್ಲೇಶಯ್ಯ ಹಾಗೂ ಇತರ ಪ್ರಮುಖರಾದ ಪ್ರಶಾಂತ್, ಜಗದೀಶ್, ಸೋಮಜ್ಜನ ಪಾಳ್ಯದ ಪುಟ್ಟಯ್ಯ, ಹೆಚ್ಬಿ ಕೃಷ್ಣಮೂರ್ತಿ, ಸೀಗೆಬಾಗಿ ಮಂಜುನಾಥ್, ಆಶಾ ಸಿಆರ್ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
--------------------------------
ಅಹೋರಾತ್ರಿ ಧರಣಿಗೆ ಬರಲಿರುವ ರೈತರು ಮೇಕೆ, ಹಸು ಸೇರಿದಂತೆ ಜಾನುವಾರುಗಳೊಂದಿಗೆ ಸೋಮವಾರದ ಧರಣಿಯಲ್ಲಿ ಪಾಲ್ಗೊಳ್ಳಬೇಕು. ಇದರ ಜೊತೆಗೆ, ರಾತ್ರಿ ಧರಣಿ ಸ್ಥಳದಲ್ಲಿ ತಂಗಲು ಬೇಕಾದ ದಿಂಬು, ಹೊದಿಕೆ ಮತ್ತು ಪಾತ್ರೆಗಳನ್ನು ಸಹ ತರಬೇಕು : ಚಂದ್ರಪ್ಪ -ರೈತ ಸಂಘದ ರಾಜ್ಯಾಧ್ಯಕ್ಷ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ