-------------
✍️ನರೇಂದ್ರಬಾಬು-ಹುಳಿಯಾರು- 9448760070
-------------
ಹುಳಿಯಾರು, ಸೆ. 08:
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ, ವಾಹನಗಳ ಕೊರತೆ ಮತ್ತು ಕಾನೂನು ತೊಂದರೆಗಳಿಂದಾಗಿ ಹುಳಿಯಾರಿನಲ್ಲಿ ಕಸದ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಜನನಿಬಿಡ ಪ್ರದೇಶಗಳು ಈಗ ಕಸದ ರಾಶಿಯಿಂದ ದುರ್ಗಂಧದಿಂದ ಕೂಡಿವೆ.
ಕಸ ವಿಲೇವಾರಿಗೆ ಶಾಶ್ವತ ಸ್ಥಳವಿಲ್ಲ : ಪಟ್ಟಣ ಪಂಚಾಯಿತಿ ಸ್ಥಾಪನೆಯಾಗಿ ಏಳು ವರ್ಷವಾದರೂ ಇದುವರೆಗೆ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿಲ್ಲ. ಸರ್ಕಾರ ಕೆಲವೊಮ್ಮೆ ಜಾಗ ಗುರುತಿಸಿದರೂ,ಅಲ್ಲಿನ ನಿವಾಸಿಗಳ ಪ್ರತಿರೋಧ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಭೂಮಿ ಎಂಬ ಕಾರಣದಿಂದ ಕಾನೂನು ತೊಂದರೆ ಉಂಟಾಗಿದೆ.ಈ ಗೊಂದಲದಿಂದಾಗಿ ತಾತ್ಕಾಲಿಕ ಪರಿಹಾರವಾಗಿ ಚಿಕ್ಕನಾಯಕನಹಳ್ಳಿಯ ತ್ಯಾಜ್ಯ ಘಟಕಕ್ಕೆ ಕಸವನ್ನು ಸಾಗಿಸಲು ಆದೇಶ ನೀಡಲಾಗಿದೆ. ಆದರೆ, ಅಲ್ಲಿ ನಡೆದ ಪುರಸಭಾ ಸಭೆಯಲ್ಲಿ ಹುಳಿಯಾರಿನ ಕಸವನ್ನು ಸ್ವೀಕರಿಸಲು ಅಲ್ಲಿನ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಾಹನಗಳಿದ್ದರೂ ಚಾಲಕರಿಲ್ಲ : ಕಸ ವಿಲೇವಾರಿಗೆಂದು ಪಂಚಾಯಿತಿಯಿಂದ ಟ್ರಾಕ್ಟರ್, ಆಟೋಗಳು ಹಾಗೂ ಎಕ್ಸ್ಕವೇಟರ್ ಖರೀದಿಸಿದ್ದರೂ, ಚಾಲಕರನ್ನು ನೇಮಿಸದ ಕಾರಣ ವಾಹನಗಳು ಕಚೇರಿ ಆವರಣದಲ್ಲೇ ನಿಂತಿವೆ. ಈ ದುಬಾರಿ ವಾಹನಗಳು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದ್ದು, ಪಂಚಾಯಿತಿಗೆ ಅನಗತ್ಯ ಆರ್ಥಿಕ ಹೊರೆಯಾಗುತ್ತಿದೆ.
ಹೊಸ ಅಧಿಕಾರಿಗೆ ಸವಾಲು : ಹೊಸದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಎಲ್.ವಿ. ಮಂಜುನಾಥ್ ನೇಮಕಗೊಂಡಿದ್ದು, ಅವರ ಮುಂದಿರುವ ಅತಿ ದೊಡ್ಡ ಸವಾಲು ಊರಿನ ಕಸದ ನಿರ್ವಹಣೆ. ಟ್ರ್ಯಾಕ್ಟರ್ ಬಿಡುಗಡೆ, ವಾಹನ ಚಾಲಕರ ನೇಮಕಾತಿ ಹಾಗೂ ಶಾಶ್ವತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ – ಇವೆಲ್ಲದರ ಮೇಲೂ ತುರ್ತು ಕ್ರಮ ಕೈಗೊಳ್ಳಬೇಕಿದೆ.
ಸಾರ್ವಜನಿಕರ ಬೇಸರ : ಪಟ್ಟಣದ ಎಲ್ಲೆಡೆ ಕಸದ ರಾಶಿ ಕಂಡು ಬರುತ್ತಿರುವುದರಿಂದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಕಸದ ಗಾಡಿ ಬಾರದೇ, ಎಲ್ಲರೂ ರಸ್ತೆಗಳ ಪಕ್ಕವೇ ಕಸ ಸುರಿಯುತ್ತಿದ್ದಾರೆ. ಪಂಚಾಯಿತಿ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹುಳಿಯಾರಿನ ಕಸ ಸಮಸ್ಯೆ ದಿನೇ ದಿನೇ ಕಗ್ಗಂಟಾಗಿ ಬಗೆಹರಿಯದಂತಾಗಿದೆ. ಆಡಳಿತದ ನಿರ್ಲಕ್ಷ್ಯ, ಶಾಶ್ವತ ವಿಲೇವಾರಿ ಘಟಕದ ಕೊರತೆ ಹಾಗೂ ಕಾನೂನು ತೊಂದರೆ ಎಲ್ಲವೂ ಸೇರಿ ಈ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯುಂಟಾಗುವ ಮುನ್ನ ತಕ್ಷಣ ಕ್ರಮ ಕೈಗೊಳ್ಳುವುದು ಆಡಳಿತದ ಹೊಣೆಗಾರಿಕೆಯಾಗಿರಬೇಕು ಎಂಬ ಮಾತು ಕೇಳಿಬರುತ್ತಿದೆ.
----------
ಇಡೀ ಊರೇ ಗಬ್ಬೆದ್ದು ನಾರುತ್ತಿದ್ದು ಗ್ರಾಹಕರೂ ಅಂಗಡಿಗಳಿಗೇ ಬರಲು ಬೇಸರಿಸುತ್ತಿದ್ದು ಇದರಿಂದ ವ್ಯವಹಾರಕ್ಕೂ ದೊಡ್ಡ ನಷ್ಟವಾಗುತ್ತಿದೆ.— ಸತೀಶ್, ಹುಳಿಯಾರಿನ ಅಂಗಡಿ ಮಾಲೀಕ
---------
ಶಾಶ್ವತ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೇ ಸಮಸ್ಯೆ : ಪಟ್ಟಣ ಪಂಚಾಯಿತಿ ಆಗಿ ಏಳು ವರ್ಷಗಳಲ್ಲಿಯೂ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಗುರುತಿಸದೆ ಇರುವುದು ಪ್ರಮುಖ ಕಾರಣವಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ಮಧ್ಯೆ ಜಾಗದ ಹಕ್ಕುಗಳ ಕುರಿತು ಗೊಂದಲವಿದ್ದು, ತ್ಯಾಜ್ಯವಿಲೇವಾರಿಗೆ ಗುರ್ತಿಸಿರುವ ಜಾಗ ಅರಣ್ಯ ವ್ಯಾಪ್ತಿಗೆ ಬರುತ್ತಿರುವುದರಿಂದ ಹಸ್ತಾಂತರ ಸಾಧ್ಯವಾಗುತ್ತಿಲ್ಲ.: ಹೇಮಂತ್ ಕುಮಾರ್,ಹುಳಿಯಾರು ಪಪಂ ಸದಸ್ಯ
-----------
ವಿಭಾಗಾಧಿಕಾರಿಗಳು ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿ ತ್ಯಾಜ್ಯ ಘಟಕವನ್ನು ಗುರುತಿಸಿ ಅಲ್ಲಿಗೆ ಕಸ ಸುರಿಸಲು ಆದೇಶ ನೀಡಿದರೂ, ಆ ಪ್ರದೇಶದ ಪುರಸಭಾ ಸಭೆಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.ಹುಳಿಯಾರಿನ ಕಸ ನಮ್ಮೂರಿಗೆ ತಂದುಹಾಕುವುದನ್ನು ಒಪ್ಪಲು ಸಾದ್ಯವೇಯಿಲ್ಲ. ಪುರಸಭೆಯಲ್ಲಿ ಯಾವೊಬ್ಬ ಸದಸ್ಯರನ್ನು ಕೇಳದೇ ಈ ತೀರ್ಮಾನ ಮಾಡಿರುವುದನ್ನು ನಾವು ವಿರೋಧಿಸಿದ್ದು ಕಸ ತುಂಬಿದ ಟ್ರಾಕ್ಟರ್ ಕಂಡು ಬಂದರೆ ಸೀಝ್ ಮಾಡಿಸುತ್ತೇವೆ
ಮಹ್ಮದ್ ಹುಸೇನ್ ಗುಂಡ, ಚಿಕ್ಕನಾಯಕನಹಳ್ಳಿಯ ಪುರಸಭಾ ನಾಮಿನಿ ಸದಸ್ಯ
-----------
ಪಟ್ಟಣ ಪಂಚಾಯಿತಿ ಕೆಲ ತಿಂಗಳ ಹಿಂದೆ ಕಸದ ಸಂಗ್ರಹದ ಆಟೋಗಳು ಮತ್ತು ಎಕ್ಸ್ಕವೇಟರ್ ಸೇರಿದಂತೆ ಹಲವಾರು ವಾಹನಗಳನ್ನು ಖರೀದಿಸಿದ್ದು, ಆದರೆ ಚಾಲಕರ ನೇಮಕಾತಿ ಮತ್ತು ನಿರ್ವಹಣೆಗಾಗಿ ಕ್ರಮ ತೆಗೆದುಕೊಳ್ಳದಿರುವುದರಿಂದ ಅವು ಕಚೇರಿ ಆವರಣದಲ್ಲಿ ನಿಂತಿವೆ. ಇದರಿಂದ ಅವು ಉಪಯೋಗಕ್ಕೆ ಬಾರದಂತಾಗಿದೆ : ಜಯಣ್ಣ ,ಹುಳಿಯಾರು ನಿವಾಸಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ