ಹುಳಿಯಾರಿನಲ್ಲಿ ರೈತ ಸಂಘದಿಂದ ಪಟ್ಟಣ ಪಂಚಾಯತಿ ವಿರುದ್ಧ ಅಹೋರಾತ್ರಿ ಧರಣಿ.........ಸಂತೆ ಮೈದಾನ ಬದಲಾವಣೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಹೊಸಹಳ್ಳಿ ಚಂದ್ರಣ್ಣ ಬಣದ ಒತ್ತಾಯ
----------------
ಸಂತೆ ಮೈದಾನ ಬದಲಾವಣೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಹೊಸಹಳ್ಳಿ ಚಂದ್ರಣ್ಣ ಬಣದ ಒತ್ತಾಯ
-----------
ಕಾಲಾವಕಾಶದೊಳಗೆ ಬೇಡಿಕೆ ಈಡೇರಿಸಲು ವಿಫಲವಾದ ಪಟ್ಟಣ ಪಂಚಾಯತಿ
----------
ಹುಳಿಯಾರು: ವಾರದ ಸಂತೆ ಮೈದಾನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಹಾಗೂ ಸಂತೆ ನಡೆಯುವ ಸ್ಥಳದಲ್ಲಿ ನೆರಳು, ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘದ (ಹೊಸಹಳ್ಳಿ ಚಂದ್ರಣ್ಣ ಬಣ) ನೇತೃತ್ವದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ವಿರುದ್ಧ ಅಹೋರಾತ್ರಿ ಧರಣಿ ಸೋಮವಾರದಿಂದ ಪುನಃ ಆರಂಭವಾಗಿದೆ.
ಹಿನ್ನೆಲೆ ಮತ್ತು ವಚನ ಭ್ರಷ್ಟತೆ ಆರೋಪ : ಕಳೆದ 15 ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಮಯಾವಕಾಶದೊಳಗೆ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸಮಸ್ಯೆ ಪರಿಹರಿಸುವಲ್ಲಿ ಆಡಳಿತವು ವಿಫಲವಾದ ಹಿನ್ನೆಲೆಯಲ್ಲಿ ರೈತ ಸಂಘವು ಧರಣಿಯನ್ನು ಪುನರಾರಂಭಿಸಿದೆ. ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸದ ಸ್ಥಳೀಯ ಆಡಳಿತವನ್ನು ಪ್ರತಿಭಟನಕಾರರು ವಚನ ಭ್ರಷ್ಟ ಎಂದು ಖಂಡಿಸಿ, ಸ್ಥಳೀಯ ಆಡಳಿತಕ್ಕೆ ಇನ್ನೂ 20 ವರ್ಷಗಳ ಕಾಲಾವಕಾಶ ನೀಡಿದರೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ತೀವ್ರ ವಾಗ್ವಾದ ಮತ್ತು ತರಾಟೆ : ಧರಣಿ ಪುನರಾರಂಭವಾಗುತ್ತಿದ್ದಂತೆಯೇ, ರೈತ ಮುಖಂಡರು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತ ಮುಖಂಡರು ವಾರದ ಸಂತೆ ಮೈದಾನದ ಸಮಸ್ಯೆ ಕುರಿತು ಪ್ರಶ್ನಿಸುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿ, ಮಾತಿನ ಚಕಮಕಿ ನಡೆಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಇತ್ಯರ್ಥಗೊಳಿಸಿ ಆದಷ್ಟು ಬೇಗ ಕಾರ್ಯಗತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಸೇವೆ ಇಲ್ಲದೆ ಸುಂಕ ಏಕೆ : ಪಟ್ಟಣ ಪಂಚಾಯಿತಿಗೆ ಸಹಸ್ರಾರು ರೂಪಾಯಿ ತೆರಿಗೆ ಪಾವತಿಸುತ್ತಾ ಬಂದಿದ್ದರೂ, ಯಾವುದೇ ರೀತಿಯ ಸೇವೆಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಇದು ತೆರಿಗೆದಾರರಿಗೆ ಮಾಡುತ್ತಿರುವ ಅನ್ಯಾಯ ಎಂದು ರೈತ ಸಂಘದ ಮುಖಂಡರು ದೂರಿದರು.ಪಟ್ಟಣ ಪಂಚಾಯಿತಿ ಸಂತೆ ಮೈದಾನವನ್ನು ಬದಲಾಯಿಸಿ, ಅಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸುವವರೆಗೂ, ನಾಳೆಯಿಂದ ಒಂದು ರೂಪಾಯಿ ಸುಂಕವನ್ನೂ ಕಟ್ಟಲು ಬಿಡುವುದಿಲ್ಲ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಒಂದು ವೇಳೆ ಯಾರಾದರೂ ಸುಂಕ ವಸೂಲಿಗೆ ಮುಂದಾದರೆ, ಅವರನ್ನು ಕರೆತಂದು ಕಂಬಕ್ಕೆ ಕಟ್ಟಿ ಹಾಕುವುದಾಗಿ ಪ್ರತಿಭಟನಕಾರರು ಸವಾಲು ಹಾಕಿದ್ದಾರೆ. ಸಂತೆ ಮೈದಾನದ ಬದಲಾವಣೆ, ಸ್ವಚ್ಛತೆ, ಮತ್ತು ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಆಗುವವರೆಗೆ ಈ ಧರಣಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಕುರಿತು ಪ್ರಧಾನಿ ಬಂದು ಹೇಳಿದರೂ ಸ್ಥಳ ಬಿಡುವುದಿಲ್ಲ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದ್ದಾರೆ.ರೈತ ಸಂಘದ ಸದಸ್ಯರು ಹಸಿರು ಶಾಲುಗಳನ್ನು ಧರಿಸಿ ಸಾಮೂಹಿಕವಾಗಿ ಕಂಬಳಿಯ ಮೇಲೆ ಕುಳಿತು ಧರಣಿ ಸ್ಥಳದಲ್ಲಿ ಭಜನೆ ಮಾಡಿದರು.ಅಲ್ಲಿಯೇ ಅಡುಗೆ ಮಾಡಿದರು.ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ತುಮಕೂರು ಜಿಲ್ಲಾ ಕಾರ್ಯದರ್ಶಿ ಕಲ್ಲಹಳ್ಳಿ ಮಲ್ಲೇಶಯ್ಯ ಹಾಗೂ ಇತರ ಪ್ರಮುಖರಾದ ನೀರಾ ಈರಣ್ಣ ಪ್ರಶಾಂತ್, ಜಗದೀಶ್, ಸೋಮಜ್ಜನ ಪಾಳ್ಯದ ಪುಟ್ಟಯ್ಯ, ಹೆಚ್ಬಿ ಕೃಷ್ಣಮೂರ್ತಿ, ಸೀಗೆಬಾಗಿ ಮಂಜುನಾಥ್, ಆಶಾ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದ್ದು, ಸದ್ಯಕ್ಕೆ ರೈತ ಸಂಘ ಮತ್ತು ಪಟ್ಟಣ ಪಂಚಾಯಿತಿ ನಡುವಿನ ಬಿಕ್ಕಟ್ಟು ಮುಂದುವರಿದಿದೆ. ಅಧಿಕಾರಿಗಳು ನೀಡಿರುವ ಭರವಸೆಯಂತೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ