-----------------------------------
ಹುಳಿಯಾರು: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸಿದ ದಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಆರ್.ಎಸ್. ಮಹಾಲಿಂಗಪ್ಪ ಅವರಿಗೆ ರಾಯಚೂರಿನ ಕಲಾ ಸಂಕುಲ ಸಂಸ್ಥೆಯು ಪ್ರತಿಷ್ಠಿತ 'ಶಿಕ್ಷಕರತ್ನ' ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮಹಾಲಿಂಗಪ್ಪ ನಾನು ಈ ಪ್ರಶಸ್ತಿಯನ್ನು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅರ್ಪಿಸುತ್ತೇನೆ. ಇವರೆಲ್ಲರ ಸಹಕಾರವಿಲ್ಲದೆ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ ಎಂದು ನುಡಿದರು.
ದಸೂಡಿ ಶಾಲೆಯ ಯಶೋಗಾಥೆ
ಮಹಾಲಿಂಗಪ್ಪ ಅವರು ದಸೂಡಿ ಶಾಲೆಗೆ ಮುಖ್ಯಶಿಕ್ಷಕರಾಗಿ ಬಂದ ನಂತರ, ಶಾಲೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅವರ ನಾಯಕತ್ವ ಮತ್ತು ಗ್ರಾಮಸ್ಥರ ಸಹಕಾರದಿಂದ, ಈ ಶಾಲೆಯು ಈಗ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಖಾಸಗಿ ಶಾಲೆಯ ಕಟ್ಟಡಗಳಿಗೆ ಸವಾಲು ಹಾಕುವಂತಹ ಕಟ್ಟಡ, ಪೀಠೋಪಕರಣಗಳು, ಸುಸಜ್ಜಿತ ಪ್ರಯೋಗಾಲಯ, ಪ್ರೊಜೆಕ್ಟರ್ ವ್ಯವಸ್ಥೆ ಹಾಗೂ ವ್ಯವಸ್ಥಿತ ಅಡುಗೆ ಮನೆ ಹೊಂದಿದೆ.ಪ್ರಸ್ತುತ ಶಾಲೆಯಲ್ಲಿ 207ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಐದು ಕಾಯಂ ಶಿಕ್ಷಕರು ಮತ್ತು ಮೂರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಇದಲ್ಲದೆ, ಶಾಲೆಯಲ್ಲಿ ಇತ್ತೀಚೆಗೆ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸಹ ಪ್ರಾರಂಭಿಸಲಾಗಿದ್ದು, 30ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲೆಯಲ್ಲಿ ಪ್ರತಿದಿನವೂ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ ಹಾಗೂ ಮಕ್ಕಳ ಪೌಷ್ಟಿಕತೆಗಾಗಿ ಪ್ರತಿದಿನ ಮೊಟ್ಟೆಗಳನ್ನೂ ನೀಡಲಾಗುತ್ತಿದ್ದು, ಇದು ಮಕ್ಕಳ ಹಾಜರಾತಿ ಹೆಚ್ಚಾಗಲು ಕಾರಣವಾಗಿದೆ.
ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ್ದು, ಇದರಿಂದಾಗಿ ಪ್ರತಿ ವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ. ಶಾಲೆಯ ಅಭಿವೃದ್ಧಿಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅವರ ಸಹಕಾರವೂ ಪ್ರಮುಖ ಕಾರಣವಾಗಿದೆ.
ಸತತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮಹಾಲಿಂಗಪ್ಪ ಅವರ ಸೇವೆಯನ್ನು ಗುರುತಿಸಿ ಕಲಾ ಸಂಕುಲ ಸಂಸ್ಥೆಯು ಈ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಿಜಕ್ಕೂ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ