ವಿಷಯಕ್ಕೆ ಹೋಗಿ

ಲಿಂಗಪ್ಪನ ಪಾಳ್ಯದಲ್ಲಿ ರಾಮನವಮಿಯೇ ಊರಹಬ್ಬ:ಎಲ್ಲೇಲೋ ರಾಮ ಭಜನೆ

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮ ದೇವಾಲಯದ ಮುಂದೆ ನೂರೊಂದೆಡೆ ಸೇವೆ ನಡೆಸಲಾಯಿತು

ಎಲ್ಲೆಡೆ ಸಾಮಾನ್ಯವಾಗಿ ಯುಗಾದಿ, ದೀಪಾವಳಿ ಹಬ್ಬಗಳನ್ನು ಮನೆಮಂದಿಯಲ್ಲಾ ಕೂಡಿ ಸಡಗರ ಸಂಭ್ರಮದಿಂದ ಆಚರಿಸಿ, ರಾಮನವಮಿಯಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜಯಲ್ಲಿ ಪಾಲ್ಗೊಳ್ಳುವುದು ಪಾರಿಪಾಟವಿದ್ದರೆ. ಇಲ್ಲೊಂದು ಗ್ರಾಮವಿದೆ. ಅದೇ ಲಿಂಗಪ್ಪನ ಪಾಳ್ಯ. ಇಲ್ಲಿ ರಾಮನವಮಿಯನ್ನು ಆಚರಿಸುವ ರೀತಿಯೇ ಬೇರೆ. ಇಲ್ಲಿ ಒಂಬತ್ತು ದಿನಗಳ ಕಾಲ ನಡೆಯೋ ರಾಮನ ಉತ್ಸವ ಒಂದರ್ಥದಲ್ಲಿ ವಿಶೇಷವಾಗಿದ್ದು,ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸುವ ರಾಮನವಮಿಯನ್ನು ಕುಟುಂಬದ ಸದಸ್ಯರು ಹಾಗೂ ನೆಂಟರಿಸ್ಟರ ಜೋತೆ ಸೇರಿ ಮುಖ್ಯ ಹಬ್ಬವಾಗಿ ಆಚರಿಸುವ ಮೂಲಕ 9 ದಿನಗಳ ಕಾಲ ವಸಂತ ನವರಾತ್ರಿಯನ್ನು ಊರಿನಲ್ಲಿ ಆಚರಿಸುವುದು ವಾಡಿಕೆಯಾಗಿದೆ.

ನವರಾತ್ರಿ ಎಂದರೆ ಶರನ್ನವರಾತ್ರಿ ಹಾಗೂ ಮೈಸೂರು ದಸರ ನೆನಪಿಗೆ ಬರುತ್ತದೆ. ಆದರೆ ಮತ್ತೊಂದು ನವರಾತ್ರಿಯ ಆಚರಣೆ ಇಲ್ಲಿ ನಡೆದುಕೊಂಡು ಬರುತ್ತಿದೆ. ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ನಂತರ ಅಂದರೆ ಯುಗಾದಿ ಹಬ್ಬದ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು,ಅಂದರೆ ಯುಗಾದಿಯಾದ 9ನೇದಿನದಂದು ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಂತ್ಯಗೊಳ್ಳುತ್ತದೆ. ಯುಗಾದಿ ಕಳೆದು ಒಂಬತ್ತನೆ ದಿನವೇ ಶ್ರೀ ರಾಮ ನವಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನನ ಸಂಭ್ರಮ. ರಾಮನವಮಿಯೆ ಬಂತೆಂದರೆ ಹುಳಿಯಾರು ಸಮೀಪದ ಸುಮಾರು 2೦೦ಕ್ಕೂ ಹೆಚ್ಚು ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಸಡಗರ ಮನೆ ಮಾಡಿ ಬಿಡುತ್ತದೆ. ಎಲ್ಲ ಹಬ್ಬಗಳನ್ನು ಇಲ್ಲಿ ಆಚರಿಸುತ್ತಾರಾದರೂ ರಾಮನವಮಿಯನ್ನು ಆಚರಿಸುವುದು ಮಾತ್ರ ವಿಶೇಷ. ಇಡೀ ಗ್ರಾಮದ ಮಂದಿಯೆಲ್ಲ ಇಲ್ಲಿ ಶ್ರೀರಾಮನ ಭಕ್ತರಾಗಿದ್ದು ಶ್ರೀರಾಮನ ಆರಾಧನೆಗಾಗಿ ಗುಡಿಯೊಂದನ್ನು ಕೂಡ ನಿರ್ಮಿಸಿಕೊಂಡಿದ್ದಾರೆ. ಶ್ರೀರಾಮನವಮಿಯ ಹಿಂದಿನ ದಿನದಿಂದಲೆ ದೇವಸ್ಥಾನ ಪ್ರಾಂಗಣದಲ್ಲಿ ಚಪ್ಪರ ಹಾಕಿ ಮಾವಿನ ತೋರಣ ಕಟ್ಟಲು ಹಿರಿಯರು ಕಿರಿಯರೆನ್ನದೆ ಊರಿನ ಸಮಸ್ತರು ಸೇರುತ್ತಾರೆ.ಅಂದು ಗ್ರಾಮದ ಮನೆ ಮನೆಗಳು ತಳಿರು ತೋರಣದಿಂದ ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಲ್ಪಡುತ್ತದೆ. ಊರಿನಲ್ಲಿ ಒಬ್ಬಟ್ಟಿನ ವಾಸನೆ ಘಮ್ಮೆಂದು ಅಡರುತ್ತದೆ. ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಜನ ದೂರದೂರುಗಳಿಂದ ನೆಂಟರಿಷ್ಟರನ್ನು ಕರೆಸಿಕೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುತ್ತಾರೆ.


ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯ 8 ನೇ ದಿನದ ನಂತರ ಆಚರಿಸುವ ರಾಮ ನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದವರೆಲ್ಲ ಬಹುಪಾಲು ಮಂದಿ ತಿಂದುಣ್ಣುವವರಾದರೂ 9 ದಿನದ ವರೆವಿಗೆ ಮಾಂಸಹಾರ ಗ್ರಾಮದಲ್ಲಿ ಕಡ್ಡಾಯ ನಿಷಿದ್ಧ. ಗ್ರಾಮದಲ್ಲಿ ಆಚರಿಸುವ ಶ್ರೀರಾಮನವಮಿಗೆ 50-60 ವರ್ಷಗಳ ಇತಿಹಾಸವಿದೆ.ಗ್ರಾಮದ ಹಿರಿಯರು ಹೇಳುವಂತೆ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಯಾವುದೇ ದೇವಾಲಯ ಇರಲಿಲ್ಲ. ಗ್ರಾಮದ ಜನ ತಮ್ಮಷ್ಟಕ್ಕೆ ತಾವೇ ಜೀವಿಸುತ್ತಿದ್ದ ಕಾಲವದು. ತಮ್ಮ ಊರಿನ ಕಷ್ಟ ಕಾರ್ಪಣ್ಯಗಳಿಗೆ ಬೇರೆ ಊರಿನ ಗ್ರಾಮದೇವತೆಗಳನ್ನು ಆಶ್ರಯಿಸುತ್ತಿದ್ದರು


ಅದೊಂದು ದಿನ ಹುಳಿಯಾರಿನ ಗಾರೆ ಗಿರಿಯಪ್ಪನವರು ರಾಮ ಮಹಿಮೆಯನ್ನು ತಿಳಿಸಿ ಗ್ರಾಮದಲ್ಲಿ ರಾಮನವಮಿಯಂದು ಊರ ಮಧ್ಯೆ ಚಪ್ಪರ ಹಾಕಿಸಿ ಶ್ರೀರಾಮ ಪೋಟೊ ಇಟ್ಟು ಭಜನೆ ಮಾಡಿಸುವಲ್ಲಿ ಸಫಲರಾದರು.ಸೋಮಸಂದ್ರದ ಬಾಲಪ್ಪನವರು ರಾಮ ಭಜನೆ ಹೇಳಿಕೊಟ್ಟು ಗ್ರಾಮದ ಜನರಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರಗಳನ್ನು ಬೆಳೆಯುವಂತೆ ಮಾಡಿದರು. ಅಂದಿನಿಂದ ಗ್ರಾಮದ ಸಮಸ್ಯೆಗಳು ಮಂಜಿನಂತೆ ಕರಗಿದಲ್ಲದೆ ಊರು ಸುಭಿಕ್ಷೆವಾಯಿತು. ಹೀಗಾಗಿ ರಾಮನವಮಿಯನ್ನು ಕಟ್ಟು ನಿಟ್ಟಿನಿಂದ, ಭಯಭಕ್ತಿಯಿಂದ ಆಚರಿಸುವ ಪದ್ದತಿ ಆರಂಭವಾಯಿತು.


ಹುಳಿಯಾರಿನ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಮ್ಮಖದಲ್ಲಿ ಶ್ರೀರಾಮದೇವರು ಸೇರಿದಂತೆ ಈ ಬಾರಿಯೂ ರಾಮನವಮಿಯ ಉತ್ಸವವನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ರಾಮ ಮಂದಿರಗಳಲ್ಲಿ ಮುಂಜಾನೆಯಿಂದಲೇ ರಾಮನಿಗೆ ವಿಶೇಷ ಅಲಂಕಾರ, ಅಭಿಷೇಕ ಮಾಡಲಾಗಿತ್ತು. ಬಿಸಿಲಿನ ಝಳವನ್ನು ಲೆಕ್ಕಿಸದೆ ವಾಡಿಕೆಯಂತೆ ರಾಮನ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಗ್ರಾಮ ದೇವತೆಗಳೊಂದಿಗೆ ಡೊಳ್ಳುಕುಣಿತ ಹಾಗೂ ಭಜನೆ ಮಾಡುತ್ತ ಹುಳಿಯಾರಿನ ಆಂಜನೇಯ ದೇವಸ್ಥಾನ ಹಾಗೂ ಶನಿದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅಲ್ಲಿ ಮಹಾಮಂಗಳಾರತಿ ನಂತರ ಪಾನಕ ಕೋಸಂಬರಿ ಹಂಚಿ ಮಂಗಳ ವಾದ್ಯದೊಂದಿಗೆ ಪುನಃ ಗ್ರಾಮಕ್ಕೆ ಆಗಮಿಸಲಾಯಿತು. ಗ್ರಾಮದಲ್ಲಿನ ಎಲ್ಲಮ್ಮ,ಹೊಸೂರಮ್ಮ,ಗರುಡನಗುಡಿ, ಬಸವನ ಗುಡ್ಡೆ, ಮಾರುತಿ ಗುಡ್ಡೆಗಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀಸ್ವಾಮಿಯವರ ಮೂಲಗುಡಿಗೆ ತೆರಳಲಾಯಿತು. ಅಲ್ಲಿ ನೆರೆದಿದ್ದ ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಭಜನೆ ಮಾಡಿ ರಾಮರಸದ ತೀರ್ಥ ಹಾಗೂ ಕೋಸಂಬರಿ ಪಾನಕ ಹಂಚಲಾಯಿತುಸಂಜೆ ನೂರೊಂದು ಎಡೆ ಸೇವೆ,ಬಿಲ್ಲುಗೂಡೂ ಸೇವೆ ಸಲ್ಲಿಸಿ ದಾಸಯ್ಯಗಳಿಗೆ ಎಡೆ ಇಡಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆವಿಗೂ ನಡೆದ ಧಾರ್ಮಿಕ ಕೈಂಕರ್ಯಗಳಲ್ಲಿ ಗ್ರಾಮದ ಜನರೆಲ್ಲ ಒಟ್ಟಾಗಿ ಸಂಭ್ರಮದಿಂದ ಪಾಲ್ಗೊಂಡು ರಾಮಭಜನೆ ಮಾಡಿ ಭಕ್ತಿಭಾವದಲ್ಲಿ ಮಿಂದರು.


ಒಟ್ಟಾರೆ ಲಿಂಗಪ್ಪನಪಾಳ್ಯದ ಗ್ರಾಮಸ್ಥರು ಹಲವು ಹಬ್ಬಗಳ ಜೊತೆ ರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿರುವುದು ಈ ಭಾಗದ ವಿಶೇಷ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...