

ಹುಳಿಯಾರು ಎಪಿಎಂಸಿ ಅಧ್ಯಕ್ಷರಾಗಿ ಮೈನ್ಸ್ ಬಸವರಾಜು---------------------------------------------- ಹುಳಿಯಾರು: ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಮಂಗಳವಾರ ನಡೆದ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಸಭೆಯಲ್ಲಿ 16 ಮಂದಿ ಸದಸ್ಯರಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸರ್ಕಾರದ ನಾಮಾಂಕಿತ ಸದಸ್ಯರಾದ ಕೋಡಲಾಗರದ ಕೆ.ಪ್ರಭುಸ್ವಾಮಿ ಅವರ ಗೈರು ಹಾಜರಾತಿಯಲ್ಲಿ ಉಳಿದ 15 ಮಂದಿ ಹಾಜರಾಗಿದ್ದರು. ಸಿ.ಬಸವರಾಜು ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಮತ್ಯಾರೂ ಅರ್ಜಿ ಸಲ್ಲಿಸದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ತಿಳಿಸಿದ್ದಾರೆ.ಹಿಂದಿನ ಅಧ್ಯಕ್ಷ ಕೋಡಲಾಗರದ ಕೆ.ಎಸ್.ಲೋಕೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ತೆರವಾದ 1 ವರ್ಷ ಅವಧಿ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆದಿದೆ. ಚುನಾವಣಾ ಹಿಂದಿನ ದಿನದವರೆವಿಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ದಂಡು ಇತ್ತು.16 ಮಂದಿ ಸದಸ್ಯರಲ್ಲಿ 7 ಮಂದಿ ಬಿಜೆಪಿ ಬೆಂಬಲಿಗರೇ ಇದ್ದು ಅವರಲ್ಲೆ ಯಾರಾದರೊಬ್ಬರು ಆಯ್ಕೆಯಾಗುವ ಸಂಭವವಿದ್ದಾಗ್ಯೂ ಯಾರೂ ಅರ್ಜಿಹಾಕದೆ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ದಕ್ಕಿರುವುದು, ಅಲ್ಲದೆ ಕಳೆದ ದಿನದವರೆವಿಗೂ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿ ಪ್ರಭಲ ಪೈಪೋಟಿ ನೀಡುವರೆಂದು ಹೇಳಲಾಗುತ್ತಿದ್ದ ದೊಡ್ಡೆಣ್ಣೇಗೆರೆ ಡಿ.ಬಿ.ಬಸವರಾಜು ಅವರು ಸಿ.ಬಸವರಾಜು ಅವರ ಹೆಸರು ಸೂಚಿಸಿದ್ದು ಮತ್ತೊಬ್ಬ ಪ್ರಭಲ ಅಭ್ಯರ್ಥಿಯಾಗುವರೆನ್ನಲಾಗಿದ್ದ ವಕೀಲ ಮಲ್ಲಿಕಾರ್ಜುನಯ್ಯ ಅನುಮೋದಿಸಿದ್ದು ಆಚ್ಚರಿ ಮೂಡಿಸಿದೆ. ಒಟ್ಟಾರೆ ಸಿ.ಬಸವರಾಜು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಾಂಗ್ರೆಸ್ ಮುಖಂಡರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಎಪಿಎಂಸಿ ಆವರಣದಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ನೆರೆದಿದ್ದವರ ಶುಭ ಹಾರೈಕೆ ಸ್ವೀಕರಿಸಿ ಮಾತನಾಡಿದ ಸಿ.ಬಸವರಾಜು ತಮ್ಮ ಜ್ಯಾತ್ಯಾತೀತ ನಿಲುವನ್ನು ಮೆಚ್ಚಿ ಪಕ್ಷದ ಬೇದ ಭಾವ ತೋರದೆ ಎಲ್ಲ ಪಕ್ಷದ ಬೆಂಬಲಿತ ಸದಸ್ಯರು ತಮ್ಮ ಬೆಂಬಲಕ್ಕೆ ನಿಂತ ಕಾರಣದಿಂದ ಈ ಅವಿರೋಧ ಆಯ್ಕೆಗೆ ಕಾರಣವಾಗಿದೆ ಎಂದು ವಿವರಿಸಿದರಲ್ಲದೆ ರೈತರಿಗೆ ಎಪಿಎಂಸಿಗಳಲ್ಲಿ ತೂಕ, ಬೆಲೆಯಲ್ಲಿ ನ್ಯಾಯ ಒದಗಿಸುವುದಾಗಿ ತಿಳಿಸಿದರಲ್ಲದೆ ಬೆಲೆ ಇಳಿಕೆ ಸಂದರ್ಭದಲ್ಲಿ ತಡಮಾಡದೆ ಬೆಂಬಲ ಬೆಲೆಯಲ್ಲಿ ಕೊಬ್ಬರಿ, ಅಡಿಕೆ, ರಾಗಿ ಖರೀಧಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ರೈತ ಪರ ಕಾಳಜಿ ವ್ಯಕ್ತಪಡಿಸಿದರು. ಮಾಜಿ ಶಾಸಕ ಕೆ.ಲಕ್ಕಪ್ಪ, ಎಐಸಿಸಿ ಪ್ರತಿನಿಧಿ ಸೀಮೆಎಣ್ಣೆ ಕೃಷ್ಣಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಬೀರಲಿಂಗಯ್ಯ, ಅಹಿಂದ ಮುಖಂಡ ರವಿಕುಮಾರ್, ಪುರಸಭಾ ಸದಸ್ಯ ಬಾಬು ಸಾಹೇಬ್, ಮಹೇಶ್, ಕನಕ ಸೇವಾ ಟ್ರಸ್ಟ್ ಅಧ್ಯಕ್ಷ ಎನ್.ಬಿ.ಗವೀರಂಗಯ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವೈ.ಸಿ.ಸಿದ್ಧರಾಮಯ್ಯ, ಸುರೇಂದ್ರಯ್ಯ, ಕೃಷ್ಣೇಗೌಡ, ಸೈಯದ್ ಜಲಾಲ್, ದಬ್ಬಗುಂಟೆ ಶ್ರೀನಿವಾಸ್, ಲೋಕೇಶ್, ರಹಮತ್ ಉಲ್ಲಾ ಸಾಬ್, ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ