ಹುಳಿಯಾರು : ಹೋಬಳಿಯ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ವೈಭವದ ಬ್ರಹ್ಮ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾ.೦6ರ ಮಂಗಳವಾರ ಮಧ್ಯಾಹ್ನ ಶ್ರದ್ದಾಭಕ್ತಿ ಹಾಗೂ ವೈಭವದಿಂದ ಜರುಗಿತು.
ಕಳೆದ ಮೂರು ದಿನದಿಂದ ಜಾತ್ರೆ ಅಂಗವಾಗಿ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು, ಇಂದು ಮುಂಜಾನೆಯಿಂದಲೆ ಬ್ರಹ್ಮ ರಥೋತ್ಸವದ ವಿವಿಧ ಪೂಜಾ ಕೈಂಕರ್ಯ ನಡೆದವು.ವಿಪ್ರರುಗಳು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ ಶ್ರೀ ಸ್ವಾಮಿಯವರನ್ನು ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟ, ತಳಿರು ತೋರಣ, ಬಣ್ಣ ಬಣ್ಣದ ಹೂವಿನ ಹಾರದಲ್ಲಿ ಸಿಂಗಾರಗೊಂಡ ಸರ್ವಾಲಂಕೃಥ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ನೆರವೇರಿಸಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ತೇರನ್ನೆಳೆದು ಸಂಭ್ರಮಿಸಿದರು. ಎಲ್ಲೆಲ್ಲೂ ಜಾತ್ರೆಯ ಸಡಗರ ತುಂಬಿ ತುಳುಕುತಿತ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿದ್ದ ಬ್ರಹ್ಮ ರಥವನ್ನು ಭಕ್ತಿಭಾವದಿಂದ ಅಪಾರ ಭಕ್ತಾಧಿಗಳು ಎಳೆದರೆ ಮತ್ತೊಂದು ಕಡೆ ರಥದ ಅನತಿ ದೂರದಲ್ಲಿ ನಿಂತಿದ್ದ ಭಕ್ತರು ಮಂಡಕ್ಕಿ,ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವ ಜರುಗಿದ ತತ್ ಕ್ಷಣವೇ ಮಹಿಳೆಯರು ಸೇರಿದಂತೆ ಅನೇಕ ಭಕ್ತಾಧಿಗಳು ಶ್ರೀಸ್ವಾಮಿಯವರಿಗೆ ಹಣ್ಣುಕಾಯಿ ಮಾಡಿಸಿದರು.ದಸೂಡಿಯ ದಿ.ಕೊಟ್ಟಿಗೆ ರಂಗೇಗೌಡರ ಸಹೋದರರು ಮತ್ತು ಮಕ್ಕಳಿಂದ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಿತು.ಜಿ.ಎಂ.ಸೀನಪ್ಪ ಶಟ್ಟರು ಮತ್ತು ಜಿ.ಎಸ್.ಸತ್ಯನಾರಾಯಣ ಶೆಟ್ಟರು ಇವರುಗಳಿಂದ ಆರ್ಯವೈಶ್ಯ ಮಂಡಳಿ ಹಾಗೂ ದೇವಾಲಯ ಸಮಿತಿಯಿಂದ ಜಾತ್ರೆಗೆ ಆಗಮಿಸಿದ್ದ ಎಲ್ಲಾ ಮಹಾಜನತೆಗೆ ಅನ್ನ ದಾಸೋಹ ನಡೆಯಿತು.
ಶಾಸಕ ಸಿ.ಬಿ.ಸುರೇಶ್ ಬಾಬು, ತಹಸೀಲ್ದಾರ್ ಉಮೇಶ್ ಚಂದ್ರ,,ಜಿಪಂ ಸದಸ್ಯರಾದ ನಿಂಗಮ್ಮ ರಾಮಯ್ಯ,ಲೋಹಿತಾ ಬಾಯಿ, ಸಿಂಗದಹಳ್ಳಿ ರಾಜ್ ಕುಮಾರ್ , ದೇವಸ್ಥಾನ ಸಮಿತಿಯ ಆರ್.ರಂಗಸ್ವಾಮಿ, ಜಿ.ಎಂ.ನೀಲಕಂಠಯ್ಯ, ಜಿ.ಸಿ.ದೊಡ್ಡಯ್ಯ, ಗ.ಕರಿಯಪ್ಪ, ಬಿ.ಆರ್.ರಂಗನಾಥ್, ಎಂ.ಕೆ. ರಮೇಶ್ ,ಜಿ.ಎಸ್.ಸತ್ಯನಾರಾಯಣ ಶ್ರೇಷ್ಠಿ, ರಾಮಕೃಷ್ಣಪ್ಪ, ಅರ್ಚಕ ರಾಮಸ್ವಾಮಿ ಸೇರಿದಂತೆ ಭಕ್ತರ ಮಹಾಪೂರವೇ ಪಾಲ್ಗೊಂಡಿತ್ತು. ಬ್ರಹ್ಮರಥೋತ್ಸವಕ್ಕೂ ಮುನ್ನಾದಿನದಿಂದ ರಾಸುಗಳು ಸೇರುವುದು ವಾಡಿಕೆಯಾಗಿದ್ದು ಅದರಂತೆ ನಡೆಯುತ್ತ ಬಂದಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ಕೊಳ್ಳಲು ಹಾಗು ಮಾರಾಟ ಮಾಡಲು ರೈತರು ಆಗಮಿಸುವ ವಾಡಿಕೆಯಿದೆ. ನಿರೀಕ್ಷೆಗೂ ಮೀರಿದ ದನಗಳು ಬಂದಿದ್ದು ರಾಸುಗಳ ಬೆಲೆ ಗಗನಕ್ಕೇರಿದೆ. ಬ್ರಹ್ಮರಥೋತ್ಸವದ ದಿನದ ನಂತರ ಸುತ್ತಮುತ್ತಲ ಭಾಗದಿಂದ ಇನ್ನಷ್ಟು ದನಗಳು ಮಾರಾಟ ಮಾಡಲು ಬರುವುದಿದ್ದು .ಮಾರ್ಚ್ 13 ರವರೆಗೆ ಜಾತ್ರೆ ಮುಂದುವರೆಯಲಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ