ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದ್ದು ಕಲ್ಪತರುನಾಡು ತುಮಕೂರು ಜಿಲ್ಲೆಯ ಬರದಬೀಡು ಎನಿಸಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವವಿಚಾರವನ್ನೇ ಚುನಾವಣ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಮತದಾರ ಸ್ಪಂದಿಸುವನೆ ಎಂಬುದು ಕೂತೂಹಲ ಮೂಡಿಸಿದೆ.ಹಾಲಿ ಹಾಗೂ ಮಾಜಿ ಸಿಎಂಗಳು ಸೇರಿದಂತೆ ಘಟನುಘಟಿ ನಾಯಕರುಗಳೆಲ್ಲಾ ತಂತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಯ ಅಲೆ ಎದ್ದಿರುವುದು ಕಂಡು ಬರುತ್ತಿದೆ. ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳದ್ದೆ ಕಾರುಬಾರು. ಸುರೇಶ್ ಬಾಬು,ಕಿರಣ್ ಕುಮಾರ್,ಮಾಧುಸ್ವಾಮಿ ಮಧ್ಯೆ ನೇರ ಹಣಾಹಣಿಯಿದ್ದು ಮೂವರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ.ಈ ಮೂವರು ಶಾಸಕರುಗಳಾಗಿ ಅನುಭವಿಗಳಾಗಿದ್ದು ಕ್ಷೇತ್ರದಲ್ಲಿ ಸತತ ಗೆಲ್ಲುವ ಅವಕಾಶ ಇದುವರೆಗೂ ಯಾರಿಗೂ ದೊರೆತಿಲ್ಲ ಎಂಬುದು ವಿಶೇಷ.
ಕ್ಷೇತ್ರ ಪರಿಚಯ: ಕಳೆದ ಬಾರಿ ಕ್ಷೇತ್ರ ವಿಂಗಡಣೆಯ ತರುವಾಯ ಕಳ್ಳಂಬೆಳ್ಳ ಕ್ಷೇತ್ರ ರದ್ದಾಗಿ ಅಲ್ಲಿನ ಹುಳಿಯಾರು ಹಾಗೂ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೊಸದಾಗಿ ಚಿ.ನಾಹಳ್ಳಿ ಕ್ಷೇತ್ರಕ್ಕೆ ಸೇರ್ಪಡೆಗೊಂಡರೆ ಇಲ್ಲಿನ ಕಿಬ್ಬನಹಳ್ಳಿ ತಿಪಟೂರಿಗೆ ಸೇರ್ಪಡೆಯಾಗಿದೆ. ಒಟ್ಟು 1,98,349 ಮತದಾರರಿದ್ದು ಅದರಲ್ಲಿ 1,00,131 ಪುರುಷರು, 98,218 ಮಹಿಳೆಯರಿದ್ದಾರೆ.ಕ್ಷೇತ್ರದಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಂತರದ ಸ್ಥಾನ ಕುರುಬರನ್ನು ಹೊಂದಿದೆ.ಜಾತಿವಾರು ಲೆಖ್ಖದಂತೆ ಅಂದಾಜು 45ಸಾವಿರ ಲಿಂಗಾಯಿತರು,38ಸಾವಿರದಷ್ಟು ಕುರಬ ಜನಾಂಗದವರಿದ್ದರೆ.18ಸಾವಿರದಷ್ಟು ಒಕ್ಕಲಿಗರು, 16ಸಾವಿರದಷ್ಟು ಗೊಲ್ಲಜನಾಂಗದವರು,15ಸಾವಿರದಷ್ಟು ಮುಸ್ಲಿಂ ಸಮುದಾಯದವರು ಸೇರಿದಂತೆ ಅಲ್ಪಸಂಖ್ಯಾತವರ್ಗದವರು,40ಸಾವಿರ ಪರಿಶಿಷ್ಟ ಜಾತಿ ಹಾಗೂ ಪಂಗಡದವರು,4ಸಾವಿರ ಮಡಿವಾಳ,6ಸಾವಿರ ಬಲಿಜ,10ಸಾವಿರ ಉಪ್ಪಾರರು,6ಸಾವಿರ ಇತರೆ ಜಾತಿಯವರಿದ್ದಾರೆ ಎಂಬ ಲೆಖ್ಖಾಚಾರವಿದೆ.
ಕಣದಲ್ಲಿರುವ ಸ್ಪರ್ಧಾಳುಗಳು:ಕಳೆದ ಬಾರಿ 9 ಮಂದಿ ಕಣದಲ್ಲಿದ್ದರೆ ಈ ಬಾರಿ ಅದು 11ಕ್ಕೆ ಏರಿದೆ. ಕೆ.ಎಸ್.ಕಿರಣ್ ಕುಮಾರ್(ಬಿಜೆಪಿ), ಸಿ.ಬಿ.ಸುರೇಶ್ ಬಾಬು(ಜೆಡಿಎಸ್), ಜೆ.ಸಿ.ಮಾಧುಸ್ವಾಮಿ(ಕೆಜೆಪಿ), ಸಾಸಲು ಸತೀಶ್(ಕಾಂಗ್ರೆಸ್),ಪ್ರಕಾಶ್ ಯಾದವ್(ಜೆಡಿಯು),ಕ್ಯಾಪ್ಟನ್ ಸೋಮಶೇಖರಯ್ಯ(ಬಿಎಸ್ ಪಿ),ಕೆಂಕೆರೆ ಸತೀಶ್(ರೈತಸಂಘ),ಕೆ.ಎಲ್. ದೇವರಾಜು(ಬಿಎಸ್ ಆರ್),ಹನುಮಂತರಾಮನಾಯಕ್(ವೆಲ್ ಫೇರ್ ಪಕ್ಷ),ಮಂಜುಳಾ ನಾಗರಾಜು,ಬರಗೂರು ರಾಮಚಂದ್ರಯ್ಯ ಪಕ್ಷೇತರರಾಗಿದ್ದು ಒಟ್ಟು 11 ಮಂದಿ ಚುನಾವಣ ಕಣದಲ್ಲಿದ್ದಾರೆ.
ಕ್ಷೇತ್ರದ ಪ್ರಮುಖ ಕೇಂದ್ರಗಳು : ಚಿ.ನಾ.ಹಳ್ಳಿ ಕಸಬಾ, ಹುಳಿಯಾರು, ಹಂದನಕೆರೆ, ಕಂದಿಕೆರೆ, ಶೆಟ್ಟಿಕೆರೆ,
ಸಿ.ಬಿ.ಸುರೇಶ್ ಬಾಬು |
ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮರು ಆಯ್ಕೆ ಬಯಸಿ ಕಣದಲಿದ್ದು, ಸ್ಪರ್ಧಿಸಿದ್ದ ಮೂರುಚುನಾವಣೆಯಲ್ಲಿ , ಎರಡು ಸಲ ಜಯಶೀಲರಾಗಿದ್ದಾರೆ.ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪನ ಅಲೆಯ ನಡುವೆಯೂ 67046 ಮತಗಳನ್ನು ಪಡೆದು 29044 ಮತಗಳ ಅಂತರದಲ್ಲಿ ಚುನಾಯಿತರಾಗಿದ್ದರು.ಕುರುಬ ಸಮುದಾಯಕ್ಕೆ ಸೇರಿರುವ ಇವರು ತಮ್ಮ ಜನಾಂಗದ ಮತ ಹಾಗೂ ಜೆಡಿಎಸ್ ವರಿಷ್ಠರ ಮೂಲಕ ಒಕ್ಕಲಿಗರ ಮತವನ್ನು ನೆಚ್ಚಿಕೊಂಡಿದ್ದಾರೆ.ಕಳೆದ ಬಾರಿ ಗೊಲ್ಲ ಜನಾಂಗದವರ ಸಂಪೂರ್ಣ ಬೆಂಬಲವಿದ್ದ ಇವರಿಗೆ ಈ ಬಾರಿ ಯಾದವ ಜನಾಂಗದ ಅಭ್ಯರ್ಥಿಗಳಿಂದಾಗಿ ಮತ ವಿಭಜನೆಯಾಗಲಿದೆ.ಇವರು ನೆಚ್ಚಿಕೊಂಡಿರುವ ಕುರುಬ ಜನಾಂಗದ ಮತವು ಸಹ ಇದೇ ಜನಾಂಗದ ಮತ್ತೊಬ್ಬ ಅಭ್ಯರ್ಥಿಯಿಂದಾಗಿ ಹಂಚಿ ಹೋಗುವ ಸಾಧ್ಯತೆಯಿದೆ.ಒಟ್ಟರೆ ಕಳೆದ ಬಾರಿ ಇಡಿಇಡಿಯಾಗಿ ಜನಾಂಗಗಳ ಮತದಿಂದಾಗಿ ಹೆಚ್ಚು ಮತಗಳ ಅಂತರದಿಂದ ವಿಜಯಿಯಾಗಿದ್ದ ಇವರಿಗೆ ಈ ಬಾರಿ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ.ಈ ಬಾರಿಯ ಗೆಲುವು ಅಷ್ಟು ಸುಲಭ ಸಾಧ್ಯವಲ್ಲ ಎನ್ನಲಾಗಿದೆ.
ಕೆ.ಎಸ್.ಕಿರಣ್ ಕುಮಾರ್ |
ಬಿಜೆಪಿ ಪಕ್ಷದಿಂದ ಕೆ.ಎಸ್.ಕಿರಣ್ ಕುಮಾರ್ ಕಣದಲ್ಲಿದ್ದು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇದು ಅವರ ಎರಡನೇ ಸ್ಪರ್ಧೆ. ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ವಿರುದ್ದ ಜಯಗಳಿಸಿ ಶಾಸಕರಾಗಿದ್ದ ಇವರು ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಿ ತಮ್ಮ ಕ್ಷೇತ್ರ ಕಳೆದುಕೊಂಡು ಕಳೆದ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಸುರೇಶ್ ಬಾಬು ವಿರುದ್ದ 29044 ಮತಗಳ ಅಂತರದಲ್ಲಿ ಸೋಲುಂಡಿದ್ದರು ಸಹ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಶಕ್ತಿಯಾಗಿ ರೂಪುಗೊಂಡ ಇವರು ಆಡಳಿತ ಬಿಜೆಪಿ ಪಕ್ಷದ ಸಖ್ಯದಿಂದ ಜನರ ಆಶೊತ್ತರಗಳಿಗೆ ಸ್ಪಂದಿಸುತ್ತಾ ತಾಲ್ಲೂಕಿಗೆ ಹೇಮಾವತಿ ನೀರು ತರಲು ಶಖ್ಯರಾದರು. ಮಾಜಿ ಸಿಎಂ ಯಡೆಯೂರಪ್ಪನವರ ಆಪ್ತರಾಗಿದ್ದರೂ ಸಹ ವ್ಯಕ್ತಿಗಿಂತ ಪಕ್ಷವೇ ಮುಖ್ಯವೆಂದು ಬಿಜೆಪಿಯಿಂದಲೇ ಸ್ಪರ್ಧಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಇವರು ಕ್ಷೇತ್ರಕ್ಕೆ ಹೇಮೆ ನೀರು ಹರಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ಆಗಿರುವ ಕಾರ್ಯವನ್ನು ಮುಂದಿಟ್ಟುಕೊಂಡು ಮತದಾರ ಮನವೊಲಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಗೆಲುವಿನ ದಾರಿಯಲ್ಲಿದ್ದಾರೆ.ಲಿಂಗಾಯಿತ ಸಮುದಾಯಕ್ಕೆ ಸೇರಿದ ಇವರಿಗೆ ತಮ್ಮದೆ ಸಮುದಾಯಕ್ಕೆ ಸೇರಿರುವ ಕೆಜೆಪಿಯ ಮಾಧುಸ್ವಾಮಿ ಹಾಗೂ ರೈತಸಂಘದ ಸತೀಶ್ ಇವರುಗಳು ಲಿಂಗಾಯಿತ ಮತ ವಿಭಜಿಸುವ ಮೂಲಕ ತೊಡರುಗಾಲಾಗಲಿದ್ದಾರೆ.
ಜೆ.ಸಿ.ಮಾಧುಸ್ವಾಮಿ |
ಕೆಜೆಪಿ:ತಮ್ಮ ತೀಕ್ಷ್ಣ ಹಾಗೂ ಧೃಢಮಾತಿನ ವೈಖರಿಯಿಂದಾಗಿ ಸದನದಲ್ಲಿ ಉತ್ತಮ ವಾಕ್ಪಟು ಎಂದು ಖ್ಯಾತಿಯಾಗಿರುವ ಜನತಾ ಪರಿವಾರದ ಜೆ.ಸಿ.ಮಾಧುಸ್ವಾಮಿ ಈಬಾರಿ ಜೆಡಿಯು ಬದಲು ಕೆಜೆಪಿ ಸ್ಪರ್ಥಿಯಾಗಿದ್ದಾರೆ.ತಾಲ್ಲೂಕಿಗೆ ಹೇಮೆಹರಿಸಲು ಕಾರಣರಾದ ಯಡಿಯೊರಪ್ಪನವರ ಸಿದ್ದಾಂತಕ್ಕೆ ಮನ್ನಣೆ ನೀಡಿ,ಕೆಜೆಪಿ ಸೇರಿರಿರುವ ಜೆಸಿಎಂ ಜೆಡಿಯು ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿ ಶಾಸಕ ಸ್ಥಾನವನ್ನು ಅಲಂಕರಿಸಿದ್ದವರು,ತಮ್ಮ ನಿರ್ಭೀತ ಹಾಗೂ ಭ್ರಷ್ಟಾಚಾರ ವಿರೋಧ ನಿಲುವಿನಿಂದಾಗಿ ತಮ್ಮ ಅವಧಿಯಲ್ಲಿ ತಾಲ್ಲೂಕಿನಲ್ಲಿ ಬಿಗಿ ಆಡಳಿತಕ್ಕೆ ಹೆಸರಾಗಿದ್ದವರು.ಕಳೆದ ಬಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಇವರು ಈ ಬಾರಿ ಹುಳಿಯಾರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮತದಾರರ ಒಡನಾಟ, ಕಾರ್ಯಕರ್ತರುಗಳ ಸಂಪರ್ಕವನ್ನು ಹೊಂದಿರುವ ಇವರು ಎಲ್ಲರಿಗಿಂತ ಮೊದಲೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಹಾಗೂ ಮುಸ್ಲಿಂ ಸಮುದಾಯದವರನ್ನು ಕೆಜೆಪಿ ಕಡೆಗೆ ಸೆಳೆದಿದ್ದಾರೆ, ಇವರ ವೈಯಕ್ತಿಕ ವರ್ಚಸ್ಸು, ಹಾಗೂ ಕೆಜೆಪಿಯ ಬಿಎಸ್ ವೈ ಹವ ಇವರ ಗೆಲುವಿನ ವಿಶ್ವಾಸಕ್ಕೆ ಹಾದಿಯಾಗಿದೆ.
ಪ್ರಕಾಶ್ ಯಾದವ್ |
ಕೆಂಕೆರೆ ಸತೀಶ್ |
ರಾಜ್ಯ ರೈತಸಂಘದಿಂದ ಕೆಂಕೆರೆ ಸತೀಶ್ ಕಣದಲಿದ್ದು, ಇವರು ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿಯಾಗಿ ನೀರಾವರಿ ಹೋರಾಟ ಸೇರಿದಂತೆ ತಾಲ್ಲೂಕಿನಲ್ಲಿ ಹಲವಾರು ಹೋರಾಟಗಳನ್ನು ಮಾಡುತ್ತಾ ರೈತರ ಸಂಕಷ್ಟಗಳನ್ನು ಹತ್ತಿರದಿಂದ ಕಂಡವಾರಾಗಿದ್ದಾರೆ.ಕಳೆದ ಚುನಾವಣೆಯಲ್ಲಿ ರೈತಸಂಘ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಓಟು ನೋಟು ಎಂಬ ಮಂತ್ರದಡಿ ಮೂರುಸಾವಿರ ಮತಗಳನ್ನು ಪಡೆದ ಇವರು ಈ ಬಾರಿ ಇನ್ನಷ್ಟು ಹೆಚ್ಚಿನ ಮತ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಸಾಸಲು ಸತೀಶ್ |
ಚುನಾವಣಾ ಆಯೋಗದ ಬಿಗಿ ನಿಲುವಿನಿಂದಾಗಿ ಈ ಬಾರಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ಕಾಣದಾಗಿರುವುದರಿಂದ ಎಷ್ಟೋ ಮಂದಿಗೆ ಸ್ಪರ್ಧಿಸಿರುವವರಲ್ಲಿ ಐದಾರು ಮಂದಿಯನ್ನು ಹೊರತು ಪಡಿಸಿದರೆ ಉಳಿದ ಅಭ್ಯರ್ಥಿಗಳು ಯಾರೆಂಬುದು ಅಗೋಚರವಾಗಿದೆ.
ಕ್ಯಾಪ್ಟನ್ ಸೋಮಶೇಖರ್ |
ದೇವರಾಜು |
ಒಟ್ಟಾರೆ ಕ್ಷೇತ್ರದಲ್ಲಿ ಈ ಬಾರಿ ಜಾತಿ ಆಧಾರಿತ ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ತಮ್ಮದೇ ಜಾತಿಯ ಹಾಗೂ ಇತರೆ ಜಾತಿಯ ಎಷ್ಟು ಮತಗಳನ್ನು ಸೆಳೆಯಲಿದ್ದಾರೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಜೆಡಿಎಸ್ ,ಬಿಜೆಪಿ,ಕೆಜೆಪಿ ನಡುವೆ ತೀವ್ರ ಹಣಾಹಣಿಯಿದ್ದು ಫಲಿತಾಂಶ ಕುತೂಹಲಕಾರಿಯಾಗಲಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ