ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಜಗದೀಶ್ ಶೆಟ್ಟರ್,ಯಡಿಯೂರಪ್ಪ,ಹೆಚ್.ಡಿ.ಕುಮಾರಸ್ವಾಮಿ |
ರಾಜ್ಯಾದ್ಯಂತ ವಿಧಾನಸಬೆ ಚುನಾವಣೆಯ ಕಾವು ಏರುತ್ತಿರುವ ಹಿನ್ನಲೆಯಲ್ಲಿ ವಿವಿಧ ಪಕ್ಷಗಳ ಚುನಾವಣಾ ಪ್ರಚಾರ ಭರಾಟೆಯಿಂದ ಕೂಡಿದ್ದು, ತುಮಕೂರು ಜಿಲ್ಲೆಯ ಚಿ.ನಾ.ಹಳ್ಳಿ ಕ್ಷೇತ್ರದ ಹೋಬಳಿ ಕೇಂದ್ರವಾಗಿರುವ ಹುಳಿಯಾರಿಗೆ ಬಿಜೆಪಿ,ಜೆಡಿಎಸ್,ಕೆಜೆಪಿ ಪಕ್ಷಗಳ ಅಭ್ಯ್ರರ್ಥಿಗಳ ಪರ ಪ್ರಚಾರಕ್ಕಾಗಿ ಹಾಲಿ ಹಾಗೂ ಮಾಜಿ ಸಿಎಂಗಳು ಭೇಟಿ ನೀಡುವ ಮೂಲಕ ಪಟ್ಟಣದಲ್ಲಿ ಚುನಾವಣಾ ಪ್ರಚಾರ ರಂಗಾಗಿದ್ದು,ಕ್ಷೇತ್ರದ ಇತರೆ ಹೋಬಳಿ ಕೇಂದ್ರಗಳಿಗಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುವುದು ಕಂಡುಬಂದಿದೆ.
ಸಿಎಂ ಜಗದೀಶ್ ಶೆಟ್ಟರ್ ಹೆಲಿಕಾಪ್ಟರ್ ನಿಂದ ಇಳಿದು ಬರುತ್ತಿರುವುದು |
55ಸಾವಿರ ಮತದಾರರಿಂದ ಕೂಡಿರುವ ತಾಲ್ಲೂಕಿನಲ್ಲೇ ಹೆಚ್ಚಿನ ಮತದಾರರನ್ನು ಹೊಂದಿರುವ ಹೋಬಳಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಳಿಯಾರನ್ನು ಎಲ್ಲಾ ಅಭ್ಯರ್ಥಿಗಳು ಗೆಲುವಿನ ದಡ ಸೇರಲು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ. ಚಿನಾಹಳ್ಳಿ ವಿಧಾನ ಸಭಾ ಕ್ಷೇತ್ರ ಸೇರ್ಪಡೆಗೂ ಮುನ್ನ ಕಳ್ಳಂಬೆಳ್ಳಕ್ಕೆ ಸೇರಿದ ಹುಳಿಯಾರು ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ತನ್ನದೆ ಆದ ಮಹತ್ವವನ್ನು ಹೊಂದಿದೆ.
ಯಡಿಯೂರಪ್ಪ ಬಂದಿದ್ದ ಹೆಲಿಕಾಪ್ಟರ್ |
ವಾರ್ಷಿಕ 55 ಕೋಟಿಯ ವ್ಯಾಪಾರ ವಹಿವಾಟಿನ ಮೂಲಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರಾಗಿರುವ ಹುಳಿಯಾರ್ ಹೋಬಳಿ ಕೇಂದ್ರವಾಗಿದ್ದರೂ ಸಹ ಇತರೆ ಕ್ಷೇತ್ರಗಳಲ್ಲಿ ತಾಲ್ಲೂಕಿಗಿಂತಲೂ ಮುಂಚೂಣಿಯಲಿದೆ. ಬೀದರ್,ಶ್ರೀರಂಗಪಟ್ಟಣಾ ಹೆದ್ದಾರಿ ಸೇರಿದಂತೆ ರಾಜ್ಯದ ಎಲ್ಲಾ ಭಾಗಕ್ಕೂ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಹೊಸದುರ್ಗ,ಹಿರಿಯೂರು, ಶಿರಾ, ತಿಪಟೂರು, ಅರಸಿಕೆರೆ ತಾಲ್ಲೂಕು ಕೇಂದ್ರಗಳಿಗೆ ಸಮೀಪವಿದೆ.ಇಷ್ಟೆಲ್ಲಾ ಅನುಕೂಲತೆಯೊಂದಿಗೆ ತನ್ನದೇ ಆದ ಸಮಸ್ಯೆಗಳನ್ನು ಹೊತ್ತಿದೆ.
ಹುಳಿಯಾರು ಬಸ್ ನಿಲ್ದಾಣ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಪಟ್ಟಣದಲ್ಲಿ ಸಮರ್ಪಕ ಸ್ವಚ್ಚತೆ ಸಮಸ್ಯೆ ಕಾಡುತ್ತಿದೆ, ಇಲ್ಲಿನ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹುಳಿಯಾರು ಹೋಬಳಿಯನ್ನು ತಾಲ್ಲೂಕು ಮಾಡಿಸುವಂತೆ ಅನೇಕ ಹೋರಾಟಗಳು ನಡೆದಿದ್ದರೂ ಅವುಗಳ ಬಗ್ಗೆ ಯಾರು ಗಮನ ಕೊಡದೇ ನೀರಿನ ಸಮಸ್ಯೆಯನ್ನು ಮಾತ್ರ ಮಾತಾಡುತ್ತಿದ್ದಾರೆ,ಇದೀಗ ಹೇಮಾವತಿ ನೀರು ಹರಿಯುವ ಕಾರ್ಯ ಚಾಲನೆಗೊಂಡಿದ್ದು ಈಭಾಗದ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬ ತವಕದಲ್ಲಿ ಮತದಾರರಿದ್ದಾರೆ.
ಈ ಚುನಾವಣೆಯಲ್ಲಿ ಹೇಮಾವತಿ ನೀರು ಪ್ರಮುಖ ವಿಷಯವಾಗಿದ್ದು ಇನ್ನಿತರೆ ಸಮಸ್ಯೆಗಳ ಬಗ್ಗೆ ಯಾರೊಬ್ಬರೂ ಚಕಾರ ಎತ್ತದಿರುವುದು ದುರಂತವೇ ಸರಿ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಹುಳಿಯಾರು ಈಗ ಕೇಂದ್ರಸ್ಥಾನವಾಗಿ ಬಿಂಬಿತವಾಗುತ್ತಿದ್ದು,ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪರ ಇಲ್ಲೇ ಹೆಚ್ಚಿನ ಸಾರ್ವಜನಿಕ ಸಭೆ ನಡೆಯುತ್ತಿದೆ.ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಿಗೂ ಇದು ಸಮೀಪವಾಗಿರುವುದು ಕಾರಣವೆನ್ನಬಹುದಾದರೂ ಎಲ್ಲಾ ಹೋಬಳಿ ಕೇಂದ್ರಕ್ಕಿಂತ ದುಪ್ಪಟ್ಟು ಮತದಾರರಿರುವುದೇ ಇದಕ್ಕೆ ಪ್ರಾಮುಖ್ಯತೆ ಬರಲು ಕಾರಣವಾಗಿದೆ.
ವಾರದಲ್ಲಿ ಮೂವರು ಸಿಎಂಗಳ ಭೇಟಿ : ಚಿ.ನಾ.ಹಳ್ಳಿ ತಾಲ್ಲೂಕ್ ಕೇಂದ್ರದಲ್ಲಿ ನಡೆಯಬೇಕಿದ್ದ ಪ್ರಚಾರ ಸಭೆಗಳು ಬಹುತೇಕ ಹುಳಿಯಾರಿನಲ್ಲಿ ನಡೆಯುತ್ತಿದ್ದು, ಕಳೆದ ಹತ್ತು ದಿನದಲ್ಲಿ ಇಬ್ಬರು ಮಾಜಿ ಹಾಗೂ ಹಾಲಿ ಸಿಎಂ ಭೇಟಿ ನೀಡಿ ಪ್ರಚಾರ ಭಾಷಣ ಮಾಡಿದ್ದಾರೆ. ಮೊದಲು ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಪ್ರಚಾರಕಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಆಗಮಿಸಿದರೆ,ಕೆಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಮಾಜಿ ಸಿಎಂ ಯಡಿಯೂರಪ್ಪ ನಂತರ ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಪರ ಹಾಲಿ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದು ಬೃಹತ್ ಪ್ರಚಾರ ಸಬೆಗಳನ್ನು ನಡೆಸಿದ್ದಾರೆ. ಈ ಮೂವರು ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿ ರೋಡ್ ಶೋ ಸೇರಿದಂತೆ ಗಂಟೆಗಟ್ಟಲೆ ಬಹಿರಂಗ ಸಭೆ ನಡೆಸಿದ್ದು ಜನರಲ್ಲಿ ಕುತೂಹಲ ಹಾಗೂ ಆಶ್ಚರ್ಯವನ್ನುಂಟು ಮಾಡಿದೆ.
ಹೆಚ್.ಡಿ.ಕುಮಾರಸ್ವಾಮಿ ಹೆಲಿಕಾಪ್ಟರ್ ನಿಂದ ಇಳಿದು ಬರುತ್ತಿರುವುದು |
ಇಲ್ಲಿನ ಮತದಾರರ ಒಲವು ಯಾವ ಪಕ್ಷದ ಪರ ಇರುವುದೋ ಅವರು ಬಹುತೇಕ ಗೆಲುವಿನೆಡೆಗೆ ಸಾಗುತ್ತಾರೆನ್ನಬಹುದಾಗಿದೆ.ಹಾಗಾಗಿ ಮತದಾರರ ಸೆಳೆಯಲು ಪಕ್ಷಗಳ ನಡುವೆ ತೀವ್ರ ಪೈಪೂಟಿಯಿದೆ.ಒಟ್ಟಾರೆಯಾಗಿ ಹುಳಿಯಾರು ಹೋಬಳಿ ಚುನಾವಣಾ ಸಮಯದಲ್ಲಿ ಮಾತ್ರ ತಾಲ್ಲೂಕಿನಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದ್ದು ನಂತರದ ದಿನಗಳಲ್ಲಿ ಅಭಿವೃದ್ದಿ ವಿಚಾರವಾಗಿ ಕಡೆಗಣಿಸಲ್ಪಡುತ್ತಿರುವುದು ದುರಂತವೇ ಸರಿ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ